ಅತಿ ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ಜಾಗೃತಿ ಆಂದೋಲನಕ್ಕೆ ಕೋಲಾರದಲ್ಲಿ ಚಾಲನೆ

ಕೋಲಾರ: ಕಾಂತರಾಜು ವರದಿ ಜಾರಿ ಮಾಡಬೇಕು ಪಂಚಮಸಾಲಿಗಳನ್ನ ಹಿಂದುಳಿದ ವರ್ಗಗಳಿಗೆ ಸೇರಿಸಬಾರದು ಎಂದು ಕೋಲಾರದಲ್ಲಿ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯ ಮಾಡಿದರು.
ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಅತಿ ಹಿಂದುಳಿದ ವರ್ಗಗಳ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಶೇ.53 ರಷ್ಟು ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಹಿಂದುಳಿದ ವರ್ಗಗಳಿದ್ದಾವೆ ಹಾಗಾಗಿ ಸಮೀಕ್ಷೆಗಾಗಿ 2011 ರಲ್ಲಿ 187 ಕೋಟಿ ಅನುದಾನವನ್ನ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಆಧಾರ ಇಲ್ಲವೆಂದು ಸಮೀಕ್ಷೆ ವರದಿಯನ್ನ ಸಲ್ಲಿಕೆ ಮಾಡಿಲ್ಲ ಹಾಗಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಕೆ ಮಾಡಬೇಕೆಂದು ಸಮಿತಿ ಒತ್ತಾಯ ಮಾಡಿದೆ. ತಬ್ಬಲಿ ಸಮುದಾಯಗಳ ಪಟ್ಟಿಗೆ ಪಂಚಮಸಾಲಿಗಳನ್ನ ಅಂದ್ರೆ ಹಿಂದುಳಿದ ವರ್ಗಗಳ 2ಎರಲ್ಲಿ ಸೇರಬೇಕು ಎಂದು ಪ್ರಬಲವಾಗಿ ಒತ್ತಾಯಸುತ್ತಿರುವುದನ್ನು ವೇದಿಕೆ ವಿರೋಧಿಸುತ್ತದೆ, ಪಂಚಮಸಾಲಿಗಳು ಮೀಸಲಾತಿ ಕೇಳಿದರೆ ತಪ್ಪಿಲ್ಲ ಅವರಿಗೆ ಪ್ರತ್ಯೇಕವಾಗಿ ನೀಡಲಿ ಅದಕ್ಕೆ ವಿರೋಧವಿಲ್ಲ ಎಂದಿದ್ದಾರೆ.
ಅಯಾ ಸರ್ಕಾರಗಳು ಯಾವುದೇ ವರ್ಗಕ್ಕೆ ಸೇರಿಸಿಕೊಂಡು ಬಂದಾಗ ಬೆಂಬಲ ಇದ್ದಾಗ ದೌರ್ಜನ್ಯ ದಬ್ಬಾಳಿಕೆ ಮಾಡ್ಕೊಂಡು ಬಂದಿರುವ ಪರಿಣಾಮ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುತ್ತಿದೆ. ಯಾವುದೇ ಜಾತಿಯನ್ನು ಪ್ರವರ್ಗಕ್ಕೆ ಸೇರಿಸಿಬೇಕೆಂದರೆ ಕೆಲವು ಮಾನದಂಡಗಳು ಇವೆ, ಅಧಿಕಾರವನ್ನು ಬಳಸಿಕೊಂಡು ಶೇ.53ರಷ್ಟು ಇರುವ ಹಿಂದುಳಿದವರಿಗೆ ಅನ್ಯಾಯ ಮಾಡಬಾರದು ಅನ್ನೋದು ನಮ್ಮ ಉದ್ದೇಶ. ಅತಿ ಸಣ್ಣ ಹಿಂದುಳಿದ ಸಮಾಜಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಿದೆ. ಹಿಂದುಳಿದ ಬಹುತೇಕ ಸಮುದಾಯಗಳಿಗೆ ಅಧಿಕಾರದಲ್ಲಿ ಸಾಮಾಜಿಕ ನ್ಯಾಯ ಇಲ್ಲದಂತ್ತಾಗಿದೆ. ಹಾಗಾಗಿ ಇಂದಿನಿಂದ ರಾಜ್ಯಾಧ್ಯಂತ ಹೋರಾಟ ಆರಂಭ ಮಾಡಿದ್ದೇವೆ. ಉಳ್ಳವರು ಹಸಿದವರ ತಟ್ಟೆಗೆ ಕೈ ಹಾಕಿದಾಗ ಹೋರಾಟ ಮಾಡಬೇಕಾಗುತ್ತದೆ ಎಂದರು.
ರಾಜ್ಯಾದ್ಯಕ್ಷ ಎಂಸಿ ವೇಣುಗೋಪಾಲ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ವೇಳೆ ಎಲ್ಲಾ ಜಾತಿಗಳ ಸಮೀಕ್ಷೆ ಮಾಡಲಾಗಿತ್ತು, ಇಂದಿಗೂ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ನೆಲಗಟ್ಟು ಸಿಕ್ಕಿಲ್ಲ ಹಾಗಾಗಿ ಕಾಂತರಾಜು ವರದಿ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ರು. ವೈಜ್ಞಾನಿಕವಾಗಿ ಮೀಸಲಾತಿ ನೀಡಿಲ್ಲ, ಜಾತಿಯ ಸಂಖ್ಯೆ ಅಧಾರವಾಗಿ ಮೀಸಲಾತಿ ನೀಡಬೇಕು, ಪ್ರಬಲ ಜಾತಿಗಳು ಸಹ ಹಿಂದುಳಿದ ವರ್ಗಗಳಿಗೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆ ಆಧರಸಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದೆ, ಪ್ರಬಲ ಜಾತಿಗಳು ಹಿಂದುಳಿದ ವರ್ಗಗಳಿಗೆ ಸೇರುವುದರಿಂದ ಅನ್ಯಾಯ ಆಗಲಿದೆ. ವಿಧಾನ ಸಭೆ, ವಿಧಾನ ಪರಿಷತ್, ಸಂಸತ್ನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಂತೆ ಒತ್ತಾಯ ಮಾಡಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ರೈತ ಚಳುವಳಿ, ಕಾರ್ಮಿಕ ಚಳುವಳಿ, ದಲಿತ ಚಳುವಳಿಗಳು ನಡೆದಿವೆ, ಹಿಂದುಳಿದ ವರ್ಗಗಳ ಚಳುವಳಿ ನಡೆದಿಲ್ಲ, ಆದರೆ, 1997ರಲ್ಲಿ ಕೋಲಾರದಲ್ಲಿ ನಡೆದ ಅಹಿಂದ ಸಮಾವೇಶ ಹಿಂದುಳಿದ ವರ್ಗಗಳನ್ನು ಒಂದುಗೂಡಿಸುವ ಪ್ರಯತ್ನವಾಗಿತ್ತೇ ಹೊರತು ಚಳುವಳಿಯಾಗಲಿಲ್ಲ. ಮಂಡಲ್ ವರದಿ ಜಾರಿಗೆ ಹೋರಾಟ ಮಾಡಿದಾಗಲೂ ಹಿಂದುಳಿದ ವರ್ಗಗಳ ಬಹುದೊಡ್ಡ ವಿದ್ಯಾರ್ಥಿ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು, ಆದರೆ, ಹಿಂದುಳಿದ ವರ್ಗಗಳ ಹಿತಕ್ಕಾಗಿ ಮಂಡಲ್ ವರದಿ ಜಾರಿಗೆ ಅಂದು ಹೋರಾಟ ಮಾಡಿದ್ದು ಮಾತ್ರ ದಲಿತ ಸಂಘ ಸಂಸ್ಥೆಗಳು ಎನ್ನುವುದು ಚಾರಿತ್ರಿಕವಾದದ್ದು. ಅಂದಿನ ವಿರೋಧಕ್ಕೆ ಮುಖ್ಯ ಕಾರಣ ಜಾಗೃತಿ ಇಲ್ಲದೆ ಹೋಗಿದ್ದು, ಜಾಗೃತಿ ಇಲ್ಲದ ಕಡೆ ಸಂಘಟನೆ ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ,ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಸಿ. ಎಸ್. ಧ್ವಾರಕಾನಾಥ್, ಅತಿ ಹಿಂದುಳಿದ ವರ್ಗಗಳ ಜಾಗೃತ ಸಮಿತಿಯ ಪಿ.ಅರ್.ರಮೇಶ್, ಜಿ.ರಮೇಶ್ , ಮುಖಂಡರುಗಳಾದ ಹೆಚ್.ಸಿ.ರುದ್ರಪ್ಪ, ಕೋಲಾರ ಜಿಲ್ಲಾ ಮುಖಂಡರುಗಳಾದ ಎಲ್.ಎ.ಮಂಜುನಾಥ್, ಎ.ಪ್ರಸಾದ್ಬಾಬು, ಪಾಲ್ಗುಣ, ಡೆಕೋರೇಷನ್ ಕೃಷ್ಣ ಮುಂತಾದವರಿದ್ದರು.







