ಮದುವೆ, ಮಂದಿರಗಳ ಮೇಲೆ ನಿರ್ಬಂಧಕ್ಕೆ ಚಿಂತನೆ: ಸಚಿವ ಆರ್. ಅಶೋಕ್
ಮೂರನೆ ಅಲೆ ನಿಯಂತ್ರಣಕ್ಕೆ ಬಿಗಿ ಕ್ರಮ ಅಗತ್ಯ

ಬೆಂಗಳೂರು, ಆ.14: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ, ಮಂದಿರ, ಮಸೀದಿಗಳ ಮೇಲೆ ನಿಯಂತ್ರಣ ಹೇರಲು ಚಿಂತನೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಶನಿವಾರ ರಾಷ್ಟ್ರೀಯ ಯುವ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ದೋಬಿ ಘಾಟ್ ಬಳಿ ಕೋವಿಡ್ ಸಾಂಕ್ರಾಮಿಕದಿಂದ ಆನ್ಲೈನ್ ಕಲಿಕೆಯಿಂದ ವಂಚಿತರಾದ 100 ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಗಳಿಗೆ ಸರಕಾರ ಒತ್ತು ನೀಡಿದೆ. ಈಗಿನ ಪರಿಸ್ಥಿತಿಯಲ್ಲಿ ಮಂದಿರ, ಮಸೀದಿಗಳ ಮೇಲೆ ನಿಬರ್ಂಧ ಹೇರಲು ಚಿಂತನೆ ನಡೆಸಲಾಗುತ್ತಿದೆ. ಮದುವೆಯಂತಹ ಜನನಿಬಿಢ ಕಾರ್ಯಕ್ರಮಗಳು, ಪ್ರದೇಶಗಳಲ್ಲಿ ನಿಯಂತ್ರಣ ಹೇರಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸೋಂಕು ತಡೆಗೆ ಕಠಿಣ ನಿಯಂತ್ರಣ ಸರಕಾರದ ಆದ್ಯತೆಯಾಗಿದ್ದು, ಲಾಕ್ ಡೌನ್ ಹೇರುವುದು ಸರಕಾರದ ಕೊನೆಯ ಪರ್ಯಾಯ ಕ್ರಮವಾಗಿದೆ. ಎಲ್ಲರೂ ಸರಕಾರದ ಮಾರ್ಗಸೂಚಿಯನ್ನು ಪರಿಪಾಲಿಸಬೇಕೆಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಯುವ ಪ್ರತಿಷ್ಠಾನದ ಸಂಸ್ಥಾಪಕ ಪ್ರಮೋದ್ ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ 93.01 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.33ರಷ್ಟು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ಗಳಿಲ್ಲ. ಹೀಗಾಗಿ ಕೋವಿಡ್ ಸಂದರ್ಭದಲ್ಲಿ ಕಲಿಕೆಯಿಂದ ಹಿಂದುಳಿದಿದ್ದಾರೆ.
ಇದನ್ನು ಮನಗಂಡು ಉಚಿತ ಟ್ಯಾಬ್ ವಿತರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡುವಂತಾಗಿದೆ ಎಂದು ಹೇಳಿದ್ದಾರೆ.







