ಸೋಲಿನಿಂದ ಧೃತಿಗೆಡುವ ಅಗತ್ಯವಿಲ್ಲ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ: ಡಿ.ಕೆ.ಶಿವಕುಮಾರ್

ಬೆಂಗಳೂರು, ಆ. 15: `ಅಹಿಂಸೆ, ಸ್ವರಾಜ್ಯ ನಮ್ಮ ಧ್ಯೇಯ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು. ನಮ್ಮ ಇತಿಹಾಸ ಉಳಿಸಿಕೊಳ್ಳೋಣ. ಚುನಾವಣಾ ಫಲಿತಾಂಶದ ಬಗ್ಗೆ ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ನಮಗೆ ನಮ್ಮದೆ ಆದ ಇತಿಹಾಸವಿದೆ. ನಮ್ಮ ಯುವ ಪೀಳಿಗೆ ಸಂಘಟನೆ ಮಾಡಿ ಯುವಕರು, ಮಹಿಳೆಯರು ಎಲ್ಲರನ್ನೂ ಸೇರಿಸಿಕೊಂಡು ದೇಶದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರೋಣ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಲ್ಲಿನ ಆನಂದ್ ರಾವ್ ವೃತ್ತದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನ. ನಮ್ಮೆಲ್ಲರ ಪಾಲಿನ ಸುದಿನ. ರಾತ್ರಿಯ ಕತ್ತಲಲ್ಲಿ ಸ್ವಾತಂತ್ರ್ಯ ಪಡೆದು ಸೂರ್ಯ ಉದಯಿಸುವ ಮುನ್ನ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ದೇಶದ ಹಬ್ಬ. ಈ ದಿನ ಇಲ್ಲಿ ಸೇರಿ ಸಂಭ್ರಮಿಸುತ್ತಿರುವುದು ಸಂತೋಷ ಎಂದರು.
ಈ ದಿನ ನಾವು ಸ್ವಾತಂತ್ರ್ಯ ಸಂಗ್ರಾಮದ ತ್ಯಾಗ, ಬಲಿದಾನ ನೆನೆಯಬೇಕಿದೆ. ಪ್ರಾಣ ತ್ಯಾಗ ಮಾಡಿದ ಗಣ್ಯರಿಗೆ ನಮಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದ್ದು, ಇದೊಂದು ಅಮೃತ ಮಹೋತ್ಸವದ ಕ್ಷಣ. ಡಾ.ಅಂಬೇಡ್ಕರ್ ಸಂವಿಧಾನ ಕೊಟ್ಟು ಇಡೀ ದೇಶಕ್ಕೆ ಮಾರ್ಗದರ್ಶನ ನೀಡಿದರು. ಸ್ವಾತಂತ್ರ್ಯ ಭಾರತ ಕಂಡ ಪ್ರತಿ ಕಲ್ಯಾಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಚಿಂತನೆಗಳಿವೆ. ಪಕ್ಷದ ಕಾರ್ಯಕರ್ತರು ಈ ವಿಚಾರವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕು ಎಂದರು.
ಬ್ರಿಟಿಷರ ಆಳ್ವಿಕೆಯಲ್ಲಿ ಕಾರ್ಮಿಕರು ಎದುರಿಸಿದ್ದ ಬಿಕ್ಕಟ್ಟನ್ನು ಬಿಜೆಪಿ ಆಡಳಿತದಲ್ಲಿ ಎದುರಿಸಲಾಗುತ್ತಿದೆ ಎಂದು ದೂರಿದ ಅವರು, ಐಐಟಿ, ಐಐಎಎಂ, ವಿಶ್ವವಿದ್ಯಾಲಯ, ಅಣುಶಕ್ತಿ ಕೇಂದ್ರ ಕಾಂಗ್ರೆಸ್ ಆಡಳಿತ ಕೊಟ್ಟ ಕೊಡುಗೆ. ಕಷ್ಟಕಾಲದಲ್ಲಿ ಟೀಕೆ ಎದುರಾದರೂ ದೇಶಕ್ಕಾಗಿ ನಮ್ಮ ನಾಯಕರು ಶ್ರಮಿಸಿದ್ದಾರೆ. ಯುಪಿಎ ಸರಕಾರ ಯಾರ ಬಾಯಿಯನ್ನು ಮುಚ್ಚಿಸಲು ಪ್ರಯತ್ನಿಸಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿವೆ' ಎಂದರು.
ನಮ್ಮ ನಾಯಕರ ಸಾಮಾಜಿಕ ಜಾಲತಾಣಗಳ ಖಾತೆಗೆ ನಿಬರ್ಂಧ ಹಾಕಲು ಆಡಳಿತ ಪಕ್ಷ ಮುಂದಾಗಿದೆ. ಇದೇನಾ ಸ್ವಾತಂತ್ರ್ಯ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಶ್ನೆಗೆ ಉತ್ತರಿಸುವ ಕಾಲ ದೂರವಿಲ್ಲ ಎಂಬುದು ನೆನಪಿನಲ್ಲಿರಲಿ. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ದಾಳಿ ಆಗುತ್ತಿದ್ದು, ನಾವು ಮತ್ತೆ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ಹೋರಾಟ ಮಾಡುವ ಸಂದರ್ಭ ಎದುರಾಗಿದೆ. ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿದ್ದ ಗಾಂಧೀಜಿ ಹಾಗೂ ಇತರ ನಾಯಕರನ್ನು ಬಿಜೆಪಿ ತೆಗಳಲು ಆರಂಭಿಸಿದ್ದಾರೆ. ಗಾಂಧೀಜಿ ಅವರನ್ನು ಕೊಂದವರನ್ನು ದೇಶಭಕ್ತ ಎನ್ನುತ್ತಿದೆ. ಇಂತಹವರಿಂದ ದೇಶ ರಕ್ಷಿಸಲು ಮತ್ತೊಂದು ಹೋರಾಟ ನಡೆಯಬೇಕಿದೆ ಎಂದು ಹೇಳಿದರು.
ಧರ್ಮ, ಸಂಸ್ಕೃತಿ, ನಂಬಿಕೆ ಯಾವತ್ತೂ ರಾಜಕೀಯ ಅಸ್ತ್ರವಾಗಬಾರದು. ಆದರೆ ದುರ್ದೈವ ಇಂದು ಅವುಗಳೇ ರಾಜಕೀಯ ಅಸ್ತ್ರವಾಗಿವೆ. ಸ್ವಾತಂತ್ರ್ಯ ಹೋರಾಟವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ನೀವು ನಿಮ್ಮ ವ್ಯಾಪ್ತಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು ಅದನ್ನೇ ಮುಂದುವರಿಸಿ. ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಹೋರಾಡೋಣ ಎಂದರು.
ನಮ್ಮದು ಕಟ್ಟುವ ಪರಂಪರೆಯಾದರೆ, ನಿಮ್ಮದು ಕೆಡುವುವ ಪರಂಪರೆ. ನಾವು ಕಟ್ಟಿದ್ದನ್ನು ನೀವು ಕೆಡವುತ್ತಿದ್ದೀರಿ. ನೀವು ಕೆಡವಿದ್ದನ್ನು 10 ರಷ್ಟು ಕಟ್ಟುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ. ಈಗಿನ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಬೇಕಿದೆ. ಅದಕ್ಕಾಗಿ ನಾವು ಮನೆ, ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸೋಣ. ಈ ವರ್ಷವಿಡೀ ಈ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಿಸಲು ನಮ್ಮ ನಾಯಕಿ ಸೋನಿಯಾ ಗಾಂಧಿಯವರು ತಿಳಿಸಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಕೇಂದ್ರ ರೈಲ್ವೆ ನಿಲ್ದಾಣದ ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯಿಂದ ಕಾಂಗ್ರೆಸ್ ಕಚೇರಿಯ ವರೆಗೆ ಪಕ್ಷದ ನೂರಾರು ಕಾರ್ಯಕರ್ತರು ತಿರಂಗ ಧ್ವಜ ಹಿಡಿದು ವಿನೂತನ ರೀತಿಯಲ್ಲಿ ರ್ಯಾಲಿ ನಡೆಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.







