ಶಾಲೆ ಆರಂಭದ ಬಗ್ಗೆ ಸದ್ಯ ತೀರ್ಮಾನವಾಗಿಲ್ಲ: ಸಚಿವ ಅಂಗಾರ
![ಶಾಲೆ ಆರಂಭದ ಬಗ್ಗೆ ಸದ್ಯ ತೀರ್ಮಾನವಾಗಿಲ್ಲ: ಸಚಿವ ಅಂಗಾರ ಶಾಲೆ ಆರಂಭದ ಬಗ್ಗೆ ಸದ್ಯ ತೀರ್ಮಾನವಾಗಿಲ್ಲ: ಸಚಿವ ಅಂಗಾರ](https://www.varthabharati.in/sites/default/files/images/articles/2021/08/16/302888-1629128159.jpg)
ಪುತ್ತೂರು: ಕೋವಿಡ್ -19 ಸೋಂಕು ನಿಯಂತ್ರಣದತ್ತ ಸಾಗುತ್ತಿದೆ. ಆದರೆ ಶಾಲೆಗಳ ಆರಂಭಕ್ಕೆ ಸದ್ಯ ತೀರ್ಮಾನ ಆಗಿಲ್ಲ. ಗುರುವಾರ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಶಾಲಾರಂಭದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ತಿಳಿಸಿದ್ದಾರೆ.
ಅವರು ಕೋವಿಡ್ ಸೋಂಕು ನಿಯಂತ್ರಣದ ಕುರಿತು ಮಾಹಿತಿ ಪಡೆಯಲು ಕೇರಳ ಗಡಿ ಭಾಗ ನೆಟ್ಟಣಿಗೆಮುಡ್ನೂರು ಪಳ್ಳತ್ತೂರು ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ್ದು, ಬಳಿಕ ನಗರದ ದರ್ಬೆಯಲ್ಲಿರುವ ನಿರೀಕ್ಷಣಾ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದರು.
ಕೋವಿಡ್ ಸೋಂಕಿನ 3ನೇ ಅಲೆಯಿಂದ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಕುರಿತು ತಜ್ಞರ ವರದಿ ಅನುಸಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 130 ವೆಂಟಿಲೇಟರ್ ಬೆಡ್ ಮತ್ತು ತಾಲೂಕು ಮಟ್ಟದಲ್ಲೂ ಬೆಡ್ಗಳಿಗೆ ಸಿದ್ಧತೆ ನಡೆಸಲಾಗಿದೆ. ಆದರೆ ಪ್ರಸ್ತುತ ಪ್ರಕರಣಗಳು ನಿಯಂತ್ರಣದಲ್ಲಿದೆ. ಹಾಗೆಂದು ಶಾಲೆಗಳನ್ನು ಆರಂಭಿಸುವುದಕ್ಕೆ ತೀರ್ಮಾನ ಮಾಡಿಲ್ಲ ಎಂದರು.
ಕೋವಿಡ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ತಪಾಸಣೆ, ತಡೆ ಸೇರಿದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಆದರೂ ಒಳದಾರಿಗಳಿಂದ ಬರುವವರಿದ್ದಾರೆ. ಸಂಬಂಧಿಕರು ಪಕ್ಕದ ಗಡಿಯಲ್ಲಿರುವಾಗ ಬರುವುದು ತಡೆಯಲು ಕಷ್ಟ. ಈ ನಿಟ್ಟಿನಲ್ಲಿ ಅಲ್ಲೂ ಕೂಡಾ ಕೋವಿಡ್ ವರದಿ ತಪಾಸಣೆ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.7 ಇದ್ದ ಪಾಸಿಟಿವ್ ರೇಟ್ ಪ್ರಸ್ತುತ ಶೇ.3ಕ್ಕೆ ಇಳಿದಿದೆ. ಇನ್ನೂ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಗಡಿ ಭಾಗಕ್ಕೆ ಪ್ರಥಮ ಮತ್ತು ದ್ವಿತೀಯ ಕೋವಿಡ್ ಲಸಿಕೆ ನೀಡಿಕೆಗೆ ಆದ್ಯತೆ ನೀಡಲಾಗಿದೆ. ಸರಕಾರ ಗಡಿ ಭಾಗದ ತಾಲೂಕುಗಳಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಲಸಿಕೆ ನೀಡಲು ಗಮನ ಹರಿಸಿದೆ ಎಂದು ಸಚಿವ ಅಂಗಾರ ತಿಳಿಸಿದರು.