ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದರೆ 5 ಕೋಟಿ ರೂ.ಬಹುಮಾನ: ಕ್ರೀಡಾ ಸಚಿವ ಡಾ.ನಾರಾಯಣಗೌಡ
ಸಾಹಸ ಕ್ರೀಡೆಗಳಿಗೂ ಸರಕಾರದಿಂದ ಉತ್ತೇಜನ

ಬೆಂಗಳೂರು, ಆ.16: ಜಪಾನ್ನ ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್ಗೆ ರಾಜ್ಯದಿಂದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಅವರಿಗೆ ಪ್ರೋತ್ಸಾಹಧನವಾಗಿ ತಲಾ ರೂ.10 ಲಕ್ಷ ನೀಡಲಾಗಿದೆ. ಪ್ಯಾರಾ ಪವರ್ ಲಿಪ್ಟಿಂಗ್ನಲ್ಲಿ ಶಕೀನ್ ಖಾತುನ್ ಹಾಗೂ ಪ್ಯಾರಾ ಈಜಿನಲ್ಲಿ ನಿರಂಜನ್ ಮುಕುಂದನ್ ಪಾಲ್ಗೊಳ್ಳುತ್ತಿದ್ದಾರೆ ಎಂದು ಯವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಪ್ಯಾರಾ ಒಲಿಂಪಿಕ್ಸ್ಗೆ ಆಯ್ಕೆಯಾದ ಇಬ್ಬರು ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ.ಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಈ ಇಬ್ಬರೂ ಕ್ರೀಡಾಪಟುಗಳು ರಾಜ್ಯದ, ದೇಶದ ಕೀರ್ತಿಪತಾಕೆ ಹಾರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ ರಾಜ್ಯ ಸರಕಾರದಿಂದ ರೂ.5 ಕೋಟಿ, ಬೆಳ್ಳಿ ಗೆದ್ದರೆ ರೂ.3 ಕೋಟಿ ಹಾಗೂ ಕಂಚಿನ ಪದಕ ಗೆದ್ದರೆ ರೂ.2 ಕೋಟಿ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ‘ಶಿಖರದಿಂದ ಸಾಗರ’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸಾಹಸ ಯಾತ್ರೆಗೆ ನಾರಾಯಣಗೌಡ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ ಒಂದು ಗಂಟೆ ದೈಹಿಕ ಶಿಕ್ಷಣಕ್ಕೆ ಸಮಯ ಮೀಸಲಿಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಅಲ್ಲದೆ ಪ್ರತಿಯೊಂದು ಶಾಲೆಗೂ ಕಡ್ಡಾಯವಾಗಿ ಮೈದಾನ ಇರಬೇಕು. ಒಂದು ವೇಳೆ ಮೈದಾನ ಇಲ್ಲದಿದ್ದಲ್ಲಿ ಬಾಡಿಗೆ ಆಧಾರದಲ್ಲಾದರೂ ಮೈದಾನ ಪಡೆದು, ಮಕ್ಕಳಿಗೆ ದೈಹಿಕ ಶಿಕ್ಷಣ ನೀಡಬೇಕು. ವ್ಯಾಯಾಮ, ಕ್ರೀಡೆ ಮಕ್ಕಳಿಗೆ ಅತ್ಯವಶ್ಯಕ. ಈ ಬಗ್ಗೆ ಪತ್ರದಲ್ಲಿ ಮನವಿ ಮಾಡಿದ್ದೇನೆ. ಶಾಲೆಗಳು ಸರಕಾರದ ಆದೇಶ ಪಾಲಿಸದಿದ್ದಲ್ಲಿ ಪರವಾನಿಗೆಯನ್ನೇ ರದ್ದು ಮಾಡುವಂತೆಯೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿರುವುದಾಗಿ ನಾರಾಯಣಗೌಡ ಹೇಳಿದರು.
ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ" ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದು, ಇದು ಒಂದು ಐತಿಹಾಸಿಕ ಯಾನವಾಗಿದ್ದು, ಕರ್ನಾಟಕಕ್ಕೆ ಸೇರಿದ 5 ಯುವತಿಯರು ಕಾಶ್ಮೀರದಲ್ಲಿ ಶಿಖರವನ್ನು ಏರುವ ಮೂಲಕ ಶುರುವಾಗಿ, ತದನಂತರ 3,000 ಕಿ.ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಾ ಮಂಗಳೂರು ತಲುಪಿ ಈ ಯಾನವನ್ನು ಮುಕ್ತಾಯಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಇದು ಸುಮಾರು 45 ದಿನಗಳ ಅಭಿಯಾನ ಆಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ನಾರಿಯ ಸುರುಷರ ವಿಕಾಸ ಎನ್ನುವಂತಹ ತತ್ವವನ್ನು ಬಿಂಬಿಸುವಂತಹ ವಿಭಿನ್ನವಾದ ಒಂದು ಕಾರ್ಯಕ್ರಮವಾಗಿರುತ್ತದೆ. ಭಾರತೀಯ ಪರ್ವತರೋಹಣ ಸಂಸ್ಥೆಯ ದಕ್ಷಿಣ ವಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ಈ ಯಾನ ನಡೆಸಲಾಗುತ್ತಿದೆ. ಸರಕಾರದಿಂದ ಸಾಹಸ ಕ್ರೀಡೆಗಳಿಗೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಯುವ ಜನತೆ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ನಾರಾಯಣಗೌಡ ಕರೆ ನೀಡಿದರು.
ಪ್ಯಾರಾ ಒಲಿಂಪಿಕ್ಸ್ಗೆ ಆಯ್ಕೆ: ಶಕೀನ್ ಖಾತುನ್(ಪ್ಯಾರಾ ಪವರ್ ಲಿಪ್ಟಿಂಗ್)-ಜಪಾನ್ನ ಟೋಕಿಯೋ ಪ್ಯಾರಾ ಒಲಿಂಪಿಕ್ಸ್ಗೆ ಆಯ್ಕೆಯಾಗಿರುವ ಶಕೀನ್ ಖಾತುನ್ ಏಕಲವ್ಯ ಪ್ರಶಸ್ತಿ ವಿಜೇತರು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
2014ರಲ್ಲಿ ಕಾಮನ್ವೆಲ್ತ್ ಗೇಮ್ಸ್, ಗ್ಲಾಸ್ಕೋ- ಕಂಚಿನ ಪದಕ, 2018- ವಿಶ್ವ ಪ್ಯಾರಾ ಪವರ್ ಲಿಫ್ಟಿಂಗ್ (ವಿಶ್ವಕಪ್) ದುಬೈ-ಬೆಳ್ಳಿ ಪದಕ., 2018- ಕಾಮನ್ವೆಲ್ತ್ ಗೇಮ್ಸ್- ಭಾಗವಹಿಸುವಿಕೆ. 2018- ಏಷಿಯನ್ ಪ್ಯಾರಾ ಗೇಮ್ಸ್, ಇಂಡೋನೇಷಿಯಾ-ಬೆಳ್ಳಿ ಪದಕ. 2018- 9ನೇ ಸಾಲಿನ ವಲ್ರ್ಡ್ ಪ್ಯಾರಾ ಪವರ್ಲಿಫ್ಟಿಂಗ್ ವಲ್ರ್ಡ್ ಕಪ್, ದುಬೈ-ಬೆಳ್ಳಿ ಪದಕ.
2019- ವಲ್ರ್ಡ್ ಪ್ಯಾರಾ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್- ಭಾಗವಹಿಸುವಿಕೆ. ನಿರಂಜನ್ ಮುಕುಂದನ್- ಪ್ಯಾರಾ ಈಜು. ಜಪಾನ್ ಟೋಕಿಯೋ ಪ್ಯಾರಾ ಒಲಿಂಪಿಕ್ಸ್ಗೆ ಆಯ್ಕೆಯಾಗಿರುವ ನಿರಂಜನ್ ಮುಕುಂದನ್ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 2013-14ನೇ ನ್ಯಾಷನಲ್ ಪ್ಯಾರಾಲಂಪಿಕ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್- 1 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು.
2015- ನೆದರ್ಲ್ಯಾಂಡ್ ನಲ್ಲಿ ನಡೆದ ಐವಾಸ್ ವಲ್ರ್ಡ್ ಜೂನಿಯರ್ ಗೇಮ್ಸ್ – ಚಿನ್ನ, 2016_ರಲ್ಲಿ ನಡೆದ ಐವಾಸ್ ವಲ್ರ್ಡ್ ಯು-23ವಲ್ರ್ಡ್ ಗೇಮ್ಸ್- 3 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕ. 2018- ಓಪನ್ ಪ್ಯಾರಾ ನ್ಯಾಷನಲ್ ಚಾಂಪಿಯನ್ ಶಿಪ್- 5 ಚಿನ್ನದ ಪದಕ ಗೆದ್ದಿದ್ದಾರೆ.
ಸಾಹಸ ಯಾನ ತಂಡದ ಸದಸ್ಯರು: ಐಶ್ವರ್ಯ.ವಿ- ಮೂಲತಃ ಶಿವಮೊಗ್ಗದವರಾಗಿದ್ದು, 2017 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಮಿಷನ್ ಸುಭದ್ರ ಎಕ್ಸ್ಪಿಡಿಷನ್ನ ಭದ್ರಾನದಿಯಲ್ಲಿ 135 ಕಿ.ಮೀ ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2020 ಮತ್ತು 2021ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಧನಲಕ್ಷ್ಮೀ- ಮೂಲತಃ ಶಿವಮೊಗ್ಗದವರಾಗಿದ್ದು, 2017ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಮಿಷನ್ ಸುಭದ್ರ ಎಕ್ಸ್ಪಿಡಿಷನ್ನ ಭದ್ರಾನದಿಯಲ್ಲಿ 135 ಕಿ.ಮೀ ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2021 ರಲ್ಲಿ ಖೇಲೋ ಇಂಡಿಯಾ ವಿಂಟರ್ಗೇಮ್ಸ್ನಲ್ಲಿ 5 ಕಿ.ಮೀ ಹಾಗೂ 1.5 ಕಿ.ಮೀ ಸ್ಕೋ ಪೂಸ್ ಓಡುವ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗಳಿಸಿರುವುದು ಅಲ್ಲದೇ, 2020 ಮತ್ತು 2021 ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಆಶಾ– ಮೂಲತಹ ಬೆಂಗಳೂರಿನವರಾಗಿದ್ದು, 2019 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋಸ್ರ್ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಮಿಷನ್ ಸುಭದ್ರ ಎಕ್ಸ್ಪಿಡಿಷನ್ನ `ಭದಾನದಿಯಲ್ಲಿ 135 ಕಿ.ಮೀ ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2020 ಮತ್ತು 2021 ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದಾರೆ.
ಪುಷ್ಪ- ಮೂಲತಃ ಮಡಿಕೇರಿಯವರಾಗಿದ್ದು, 2017 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋಸ್ರ್ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಕ್ಸ್ಟೈಂಬಿಂಗ್ ತರಬೇತಿ ಪೂರ್ಣಗೊಳಿಸಿರುತ್ತಾರೆ. ಶಿಬಿರಗಳಲ್ಲಿ ತೇರ್ಗಡೆ ಹೊಂದಿದ್ದಾರೆ.
ಬಿಂದು- ಮೂಲತಃ ಮೈಸೂರಿನವರಾಗಿದ್ದು, 2017 ರಲ್ಲಿ ಓರಿಯೇಂಟೆಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋಸ್ರ್ಗಳಲ್ಲಿ ತೇರ್ಗಡೆಹೊಂದಿದ್ದು, 2020 ರಲ್ಲಿ ಮೊಟ್ಟಮೊದಲ ಬಾರಿಗೆ ಮಧುಗಿರಿಯಲ್ಲಿ ನಡೆದ ಮಹಿಳೆಯರ ಶಿಲಾರೋಹಣ ಅಭಿಯಾನದಲ್ಲಿ 350 ಮೀಟರ್ನ “ನಿರ್ಭಯ" 6 ಸಿ ಗ್ರೇಡ್ ಮಾರ್ಗ ತೆರೆದ ತಂಡದ ಅಭ್ಯರ್ಥಿಯಾಗಿದ್ದ ಹೆಗ್ಗಳಿಕೆ ಹಾಗೂ 2020 ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಂಬಿಂಗ್ ತರಬೇತಿ ಶಿಬಿರಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಅಲ್ಲದೇ 2021 ರಲ್ಲಿ ಕೋಲಾರ್ ಬೌಲರಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕ ಗಳಿಸಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ, ಎಂಎಲ್ಸಿ ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಆಯುಕ್ತ ವೆಂಕಟೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.







