ವಿನಾಯಿತಿ ದರದಲ್ಲಿ ‘ಉಳ್ಳಾಲ ಬ್ರಾಂಡ್’ ಸಾವಯವ ಗೊಬ್ಬರ
ಮಂಗಳೂರು, ಆ.16: ಉಳ್ಳಾಲ ನಗರ ಸಭೆಯಿಂದ ಮನೆ ಮನೆಗಳಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಸಂಸ್ಕರಿಸಿ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಈ ರೀತಿ ತಯಾರಿಸಿದ ಗೊಬ್ಬರವನ್ನು ಅತ್ಯಂತ ಕನಿಷ್ಠ ಬೆಲೆಗೆ ‘ಉಳ್ಳಾಲ ಬ್ರಾಂಡ್’ ಹೆಸರಿನಲ್ಲಿ ರೈತರಿಗೆ ವಿತರಿಸುವ ವಿನೂತನ ಯೋಜನೆ ರಾಜ್ಯಕ್ಕೆ ಮಾದರಿ ಪ್ರಯೋಗವಾಗಿದೆ.
ಗೊಬ್ಬರವನ್ನು ವಿನಾಯಿಸಿ ದರದಲ್ಲಿ ನೀಡಲಾಗುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬಹುದು. ಉಳ್ಳಾಲ ನಗರ ಸಭೆಯಲ್ಲಿ ಪ್ರತಿನಿತ್ಯ ಸುಮಾರು 20 ಟನ್ ಘನತ್ಯಾಜ್ಯ ವಸ್ತು ಉತ್ಪತ್ತಿಯಾಗುತ್ತದೆ. ಈ ಪೈಕಿ ಸುಮಾರು 11 ಟನ್ ಹಸಿ ಕಸ ಇರುತ್ತದೆ. ಈ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತನೆ ಮಾಡುವ ಚಿಂತನೆಯಲ್ಲಿ ಉಳ್ಳಾಲ ನಗರ ಸಭೆ ಯಶಸ್ವಿಯಾಗಿದೆ.
ಆರಂಭದಲ್ಲಿ ನಗರ ಸಭೆಯ ಕಚೇರಿ ಸಮೀಪ ಕಾಂಕ್ರಿಟ್ ಬಿನ್ಗಳನ್ನು ಕಣ್ಣೂರಿನಿಂದ ತರಿಸಿ ಸುಮಾರು ದಿನವೊಂದಕ್ಕೆ ಎರಡು ಟನ್ ಸಾವಯವ ಗೊಬ್ಬರ ತಯಾರಿಸಲಾಗುತ್ತಿತ್ತು. ತಯಾರಿಸಿದ ಈ ಗೊಬ್ಬರವನ್ನು ಕಿಲೋ ಒಂದಕ್ಕೆ ಹತ್ತು ರೂಪಾಯಿಯಂತೆ ಕನಿಷ್ಠ ದರದಲ್ಲಿ ರೈತರಿಗೆ ಮಾರಾಟ ಮಾಡಲು ತೀರ್ಮಾನಿಸಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬಹುದು.
ಶಾಸಕ ಖಾದರ್ ಪ್ರಶಂಸೆ: ಉಳ್ಳಾಲ ನಗರ ಸಭೆಯ ವಿನೂತನ ಪ್ರಯೋಗ ಯಶಸ್ವಿಯಾಗಿದ್ದು, ಉಳ್ಳಾಲ ನಗರ ಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಪೌರಾಯುಕ್ತರಿಗೆ ಹಾಗೂ ಸಾವಯವ ತ್ಯಾಜ್ಯ ಘಟಕದ ಸದಸ್ಯರು ಮತ್ತು ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಹಸಿ ಕಸದಿಂದ ತಯಾರಿಸಿದ ಉಳ್ಳಾಲ ಬ್ರಾಂಡ್ ಸಾವಯವ ಗೊಬ್ಬರವನ್ನು ರೈತರಿಗೆ ವಿತರಿಸುವ ಮೂಲಕ ಶಾಸಕ ಯು.ಟಿ. ಖಾದರ್ ಉಳ್ಳಾಲ ನಗರ ಸಭೆಯ ಈ ಯೋಜನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಉಳ್ಳಾಲ ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯೂಬ್ ಮಂಚಿಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಝರೀನಾ ಬಾನು, ಪೌರಾಯುಕ್ತ ರಾಯಪ್ಪ, ನಿವೃತ್ತ ಶಿಕ್ಷಕ ವಾಸುದೇವ ರಾವ್, ಕಿಶೋರ್ ಅತ್ತಾವರ ಹಾಗೂ ನಗರ ಸಭಾ ಸದಸ್ಯರು ಉಪಸ್ಥಿತರಿದ್ದರು.