ದಲಿತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಬೆಂಗಳೂರು, ಆ.16: ದೇಶದಲ್ಲಿ ದಲಿತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿ ರಾಜ್ಯದಲ್ಲಿ 100 ಜನರನ್ನು ಐಎಎಎಸ್ ಮಾಡಿಸುವ ಸಂಕಲ್ಪವನ್ನು ಬಿಜೆಪಿ ಮಾಡಿದೆ. ಇದಕ್ಕಾಗಿ ಆದೇಶ ನೀಡಿದ್ದೇನೆ. ದಲಿತರಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕು. ಇದಕ್ಕಾಗಿ ರೆಸಿಡೆನ್ಶಿಯಲ್ ಸ್ಕೂಲ್ ಆರಂಭಿಸಲು ಘಟಕ ವೆಚ್ಚವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
84 ಲೋಕಸಭಾ ಕ್ಷೇತ್ರಗಳಲ್ಲಿ ಡಾ.ಅಂಬೇಡ್ಕರ್ ನವೋದಯ ವಸತಿ ಕಾಲೇಜ್ಗಳನ್ನು ಆರಂಭಿಸಲು ಸೂಚನೆ ನೀಡಿದ್ದೇನೆ. ವೃದ್ಧಾಶ್ರಮ ಮತ್ತು ಇತರ ಹೆಸರಿನಲ್ಲಿ ಅನುದಾನದ ದುರ್ಬಳಕೆ ತಪ್ಪಿಸಲು ಸೂಚಿಸಿದ್ದೇನೆ. ಇದನ್ನು ಇತರ ಇಲಾಖೆಗಳೂ ಅನುಸರಿಸಲಿವೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡದವರಿಗೆ ಸಚಿವ ಸಂಪುಟದಲ್ಲಿ ನರೇಂದ್ರ ಮೋದಿ ವಿಶೇಷ ಅವಕಾಶ ಮಾಡಿಕೊಟ್ಟರು. ಐದು ದಶಕಕ್ಕೂ ಹೆಚ್ಚು ಕಾಲ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದಲಿತರಿಗೆ ಅವಕಾಶವನ್ನೇ ಕೊಡಲಿಲ್ಲ. ಆದರೆ, ಇವತ್ತು ನಾಲ್ಕು ಮಂದಿಗೆ ರಾಜ್ಯಪಾಲರನ್ನಾಗಿ ಮಾಡಿ, 14ಕ್ಕೂ ಹೆಚ್ಚು ಮಂದಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದರ ಮೂಲಕ ದಲಿತರು ಮತ್ತು ಹಿಂದುಳಿದವರ ಬಗ್ಗೆ ಬಿಜೆಪಿಗೆ ಇರುವ ಬದ್ಧತೆಯನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದರು.
ಗರೀಬ್ ಕಲ್ಯಾಣ್, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಸ್ವಚ್ಛ ಭಾರತ, ಉಜಾಲಾ, ಉಜ್ವಲ ಯೋಜನೆಗಳನ್ನು ಅವರು ಜಾರಿಗೊಳಿಸಿದ ಕೇಂದ್ರ ಸರಕಾರದ ಕ್ರಮ ಪ್ರಶಂಸನೀಯ. ಅನೇಕ ತಾಂಡಾಗಳು, ಗೊಲ್ಲರ ಹಟ್ಟಿಗಳಿಗೆ ವಿದ್ಯುತ್, ದೇಶದಲ್ಲಿ 10 ಕೋಟಿ ಕುಟುಂಬಕ್ಕೆ ಶೌಚಾಲಯ ನೀಡಲಾಯಿತು ಎಂದು ಅವರು ಮೆಚ್ಚುಗೆ ಸೂಚಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಜಮ್ಮು -ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ದೂರ ಮಾಡಲಾಗಿದೆ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಸದೃಢತೆ ಸಾಧ್ಯವಾಗಿದೆ. ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಪ್ರಯತ್ನ ಮಾಡಲಾಗಿದೆ ಎಂದು ವಿವರಿಸಿದರು. ಕೇಂದ್ರದಲ್ಲಿ ಸಚಿವನಾಗಿ ಸಾಮಾಜಿಕ ಕಳಕಳಿ, ಬದ್ಧತೆಯನ್ನು ತೋರಿಸುವುದಾಗಿ ಅವರು ಹೇಳಿದರು.
ಬದ್ಧತೆ, ಪಕ್ಷ ನಿಷ್ಠೆ, ಸ್ವಚ್ಛ, ದಕ್ಷ, ಪ್ರಾಮಾಣಿಕ, ಸಾಮಾಜಿಕ ಕಳಕಳಿ ಇರುªವರು ಮತ್ತು ಹಿಂದುತ್ವದ ಪ್ರತಿಪಾದನೆಯ ಜೊತೆಜೊತೆಯಲ್ಲಿ ದೇಶದ ಕುರಿತು ಚಿಂತಿಸುವ ಕಾರ್ಯಕರ್ತರಿಗೆ ಬಿಜೆಪಿ ಊಹಿಸಲಾರದ ಜವಾಬ್ದಾರಿ ನೀಡುತ್ತದೆ ಎಂದ ಅವರು, ಸಚಿವನಾಗಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಕೇಂದ್ರ ಮತ್ತು ರಾಜ್ಯದ ನಾಯಕರಿಗೆ ಧನ್ಯವಾದ ಸಮರ್ಪಿಸಿದರು.
ಬಿಜೆಪಿ ಬ್ರಾಹ್ಮಣರ ಪಕ್ಷ, ಗರ್ಭಗುಡಿಯ ರಾಜಕೀಯ ಮಾಡುವ ಪಕ್ಷ ಎಂಬ ಚರ್ಚೆಗಳಿದ್ದವು. 2014ರಲ್ಲಿ ದೇಶದ ಭಾವಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಕಟಿಸಿತು. ಬಳಿಕ ಅಭಿವೃದ್ಧಿ ಪಥದಲ್ಲಿ ದೇಶ ಮುನ್ನಡೆಯಿತು ಎಂದರು.
ಶಾಸಕರಾದ ರಾಜೇಶ್ ಗೌಡ, ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.







