ರೇಸ್ಕೋರ್ಸ್ ರಸ್ತೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಗೆ ಸರಕಾರಿ ನಿವಾಸ ನಿಗದಿ
ಬೆಂಗಳೂರು, ಆ.17: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೇಸ್ಕೋರ್ಸ್ ರಸ್ತೆಯಲ್ಲಿ ಸರಕಾರಿ ನಿವಾಸ ನೀಡಲಾಗಿದೆ. ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಅವರಿಗೆ ನೀಡಲಾಗಿದ್ದ ರೇಸ್ಕೋರ್ಸ್ ರಸ್ತೆಯ ಕಾಟೇಜ್-1 ರೇಸ್ವ್ಯೂ ನಿವಾಸವನ್ನು ನಿಗದಿಪಡಿಸಲಾಗಿದೆ.
ಸಹಜವಾಗಿ ಸಿಎಂಗಳಿಗೆ ಗೃಹ ಕಚೇರಿ ಕೃಷ್ಣಾ ಪಕ್ಕದಲ್ಲಿರುವ ಕಾವೇರಿ ನಿವಾಸವನ್ನು ನೀಡಲಾಗುತ್ತಿತ್ತು. ಪ್ರಸ್ತುತ ಇಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಸಿಎಂಗೆ ರೇಸ್ಕೋರ್ಸ್ ರಸ್ತೆಯ ಕಾಟೇಜ್-1 ರೇಸ್ವ್ಯೂ ಸರಕಾರಿ ನಿವಾಸವನ್ನು ನೀಡಲಾಗಿದೆ.
ಬಸವರಾಜ ಬೊಮ್ಮಾಯಿ ಅವರು ಸದ್ಯ ಆರ್.ಟಿ.ನಗರದಲ್ಲಿರುವ ತಮ್ಮ ಸ್ವಂತ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಇಲ್ಲಿ ಪೊಲೀಸರ ಭದ್ರತೆಯಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು.
ದಿನದ 24 ಗಂಟೆಯೂ ಮುಖ್ಯಮಂತ್ರಿಗೆ ಭದ್ರತೆ ಒದಗಿಸುವ ಜವಾಬ್ದಾರಿ ಪೊಲೀಸರ ಮೇಲಿರುವುದರಿಂದ ಆರ್ಟಿ ನಗರ ಸುತ್ತಮುತ್ತ, ಅಕ್ಕಪಕ್ಕದ ನಿವಾಸಿಗಳು, ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಲು ಸರಕಾರಿ ನಿವಾಸಕ್ಕೆ ಅವರು ಬರಬೇಕೆಂಬ ಆಗ್ರಹವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಿಎಂಗೆ ರೇಸ್ಕೋರ್ಸ್ ರಸ್ತೆಯಲ್ಲಿರುವ ಸರಕಾರಿ ನಿವಾಸವನ್ನು ನೀಡಲಾಗಿದೆ.