ದ.ಕ. ಜಿಲ್ಲೆಗೆ ಬಿಜೆಪಿ ಹೊಸ ಯೋಜನೆಗಳನ್ನು ತಂದಿಲ್ಲ: ರಮಾನಾಥ ರೈ
![ದ.ಕ. ಜಿಲ್ಲೆಗೆ ಬಿಜೆಪಿ ಹೊಸ ಯೋಜನೆಗಳನ್ನು ತಂದಿಲ್ಲ: ರಮಾನಾಥ ರೈ ದ.ಕ. ಜಿಲ್ಲೆಗೆ ಬಿಜೆಪಿ ಹೊಸ ಯೋಜನೆಗಳನ್ನು ತಂದಿಲ್ಲ: ರಮಾನಾಥ ರೈ](https://www.varthabharati.in/sites/default/files/images/articles/2021/08/19/303252-1629368423.jpg)
ಮಂಗಳೂರು, ಆ.18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಅಂಬೇಡ್ಕರ್ ಭವನ ಸೇರಿದಂತೆ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾಗಿರುವಂತದ್ದು. ಬಿಜೆಪಿ ಜಿಲ್ಲೆಗೆ ಯಾವುದೇ ಹೊಸ ಯೋಜನೆಗಳನ್ನು ತಂದಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ನಗರದ ಉರ್ವಾಸ್ಟೋರ್ ಬಳಿ ಇತ್ತೀಚೆಗೆ ಉದ್ಘಾಟನೆಗೊಂಡ ಅಂಬೇಡ್ಕರ್ ಭವನವನ್ನು ಗುರುವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅದರಲ್ಲೂ, ಹೊಸ ಜಿಲ್ಲಾಧಿಕಾರಿ ಕಚೇರಿ, ಜಿಲ್ಲೆಗೆ ಪಶುವೈದ್ಯಕೀಯ ಕಾಲೇಜು ನಿರ್ಮಾಣ, ಕೆಲವೊಂದು ಮಾರುಕಟ್ಟೆ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಪಶ್ಚಿಮ ವಾಹಿನಿ ಯೋಜನೆ ಕೂಡ ನಮ್ಮ ಸರಕಾರ ಅಧಿಕಾರದಲ್ಲಿದ್ದ ವೇಳೆ ಆಗಿದ್ದು, 300 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಬಳಿಕ ಬಿಜೆಪಿ ಸರಕಾರ ಯಾವುದೇ ರೀತಿಯ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಹೇಳಿದರು.
ಹಲವಾರು ವರ್ಷಗಳ ಬೇಡಿಕೆಯಂತೆ ಅಂಬೇಡ್ಕರ್ ಭವನ ಉದ್ಘಾಟನೆಗೊಂಡಿದ್ದು, ಪರಿಶಿಷ್ಟ ಸಮಾಜದ ಸಂಘಟನೆಗಳ ಅನೇಕ ವರ್ಷಗಳ ಕನಸು ನನಸಾಗಿದೆ. ಮಂಗಳೂರಿನ ಉರ್ವಾಸ್ಟೋರ್ ಬಳಿಯೇ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ವೇಳೆ ಪರಿಶಿಷ್ಟ ಸಮಾಜದ ಸಂಘಟನೆ ಪ್ರಮುಖರು ಮನವಿ ಮಾಡಿದ್ದರು. ಆದರೆ, ಆ ಜಾಗಕ್ಕೆ ಸಂಬಂಧಿಸಿ ಹಲವಾರು ಅಡೆತಡೆಗಳು ಎದುರಾದಾಗ ಅದನ್ನು ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪವನ್ನಿಟ್ಟು, ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ, ಅದೇ ಜಾಗದಲ್ಲಿ ಭವನ ನಿರ್ಮಾಣ ಮಾಡಲು ಮುಂದಾದೆವು. ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಸಚಿವ ಆಂಜನೇಯ, ಶಾಸಕರಾಗಿದ್ದ ಜೆ.ಆರ್. ಲೋಬೊ ಅವರ ಸಹಕಾರದೊಂದಿಗೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸುಮಾರು 17.80 ಕೋಟಿ ಮಂಜೂರಾಗಿತ್ತು. ಈ ಕಟ್ಟಡದ ಗುತ್ತಿಗೆಯನ್ನು ಪ್ರಭಾಕರ ಯೆಯ್ಯಿಡಿ ಅವರು ವಹಿಸಿಕೊಂಡಿದ್ದು, ಅತ್ಯುತ್ತಮ ವಿನ್ಯಾಸದ ಕಟ್ಟಡ ನಿರ್ಮಾಣವಾಗಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಉದ್ಘಾಟನೆ ವಿಳಂಬಗೊಂಡಿತ್ತು. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ-ಪಂಗಡದ ಕಾರ್ಯಕ್ರಮಗಳ ಹೊರತಾಗಿಯೂ ಈ ಕಟ್ಟಡ ಬಾಡಿಗೆ ನೀಡಿದರೆ ಜನರಿಗೆ ಉಪಯೋಗವಾಗಬಹುದು. ನನ್ನ ತಾಲೂಕಿನಲ್ಲಿಯೂ 3 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದೆ ಎಂದು ರಮಾನಾಥ ರೈ ಹೇಳಿದರು.
ಅಂಬೇಡ್ಕರ್ ಭವನ ನಿರ್ಮಾಣ ಸಮಯದಲ್ಲಿ ಇದ್ದಂತಹ ಜಿಲ್ಲೆಯ ಶಾಸಕರು, ಸಚಿವರನ್ನು ಕಾರ್ಯಕ್ರಮಕ್ಕೆ ಕರೆಯುವುದು ಸಂಪ್ರದಾಯ. ಭವನ ಉದ್ಘಾಟನೆಗೆ ನಮಗೆ ಆಮಂತ್ರಣ ನೀಡಲಿಲ್ಲ ಎಂಬ ನೋವಿಲ್ಲ. ಆದರೆ, ಉದ್ಘಾಟನೆಯ ವೇಳೆ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಯಾವುದೇ ಮಾತನ್ನಾಡದೆ ತೆರಳಿದ ಬಗ್ಗೆ ಬಳಿಕ ದಲಿತ ಮುಖಂಡರು ಮತ್ತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ವಿಚಾರ ಗಮನಕ್ಕೆ ಬಂದಿದೆ. ಆ ಸಮುದಾಯಕ್ಕೆ ಗೌರವ ನೀಡಬೇಕಿತ್ತು. ದಲಿತ ಸಮುದಾಯ, ಅಂಬೇಡ್ಕರ್ಗೆ ಆದ ಅವಮಾನ ಪರೋಕ್ಷವಾಗಿ ನನಗೆ ಆದಂತೆ ಎಂದು ರಮಾನಾಥ ರೈ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಮೇಯರ್ಗಳಾದ ಶಶಿಧರ್ ಹೆಗ್ಡೆ, ಹರಿನಾಥ್, ಭಾಸ್ಕರ್ ಕೆ., ಮುಖಂಡರಾದ ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಶೇಖರ್ ಕುಕ್ಕೇಡಿ, ಸಾಹುಲ್ ಹಮೀದ್, ಲಾರೆನ್ಸ್ ಡಿಸೋಜಾ, ಜೋಕಿಂ ಡಿಸೋಜಾ, ಸದಾಶಿವ ಶೆಟ್ಟಿ, ಎ.ಸಿ. ವಿನಯರಾಜ್, ಟಿಕೆ ಸುಧೀರ್, ಸಂತೋಷ್ ಶೆಟ್ಟಿ, ಹೊನ್ನಯ್ಯ, ಶಾಂತಲಾ ಗಟ್ಟಿ, ಸಬಿತಾ ಮಿಸ್ಕಿತ್, ಸಿ.ಎಂ. ಮುಸ್ತಾ, ರಜನಿಶ್ ಕಾಪಿಕಾಡ್, ಗಿರೀಶ್ ಶೆಟ್ಟಿ, ಚೇತನ್ ಉರ್ವಾ, ಪ್ರೇಮ್ ಬಲ್ಲಾಳ್ ಬಾಗ್, ಶಂಸುದ್ದೀನ್ ಕುದ್ರೋಳಿ, ಶಬೀರ್, ರಾಜೇಂದ್ರ ಚಿಲಿಂಬಿ, ನೀರಜ್ ಪಾಲ್, ಜಯರಾಜ್ ಕೋಟ್ಯಾನ್, ಮಲ್ಲಿಕಾರ್ಜುನ, ಜಯರಾಮ್ ಕಾರಂದೂರ್,ಮಿಥುನ್ ಉರ್ವಾ, ಮೆಕ್ ಬೂಲ್ ಅಹ್ಮದ್, ಉಮೇಶ್ ದಂಡಕೇರಿ, ದಿನೇಶ್ ಪಿ.ಎಸ್., ರೂಪ ಚೇತನ್, ಶಂಶುದ್ದೀನ್ ಬಂದರ್, ಶಾನ್ ಡಿಸೋಜಾ, ಯಶ ವಂತ್ ಪ್ರಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
![](https://www.varthabharati.in/sites/default/files/images/galllery/2021/08/19/PSX_20210819_112939.jpg)