ಧಾರವಾಡ ಸಾಹಿತ್ಯ ಕ್ಷೇತ್ರದ ಪ್ರಮುಖರ ಜತೆ ಉನ್ನತ ಶಿಕ್ಷಣ ಸಚಿವರ ಸಂವಾದ
‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ’

ಧಾರವಾಡ, ಆ.21: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಶನಿವಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಸಾಹಿತ್ಯ ವಲಯದ ಪ್ರಮುಖರ ಜತೆ ಮಹತ್ವದ ಸಂವಾದ ನಡೆಸಿದರು.
ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಸಾಹಿತಿಗಳಿಗೆ ವಿವರಿಸಿದ ಸಚಿವರು, ಅವರಲ್ಲಿದ್ದ ಸಂಶಯಗಳನ್ನು ನಿವಾರಿಸಿದರು. ಅಲ್ಲದೆ, ಶಿಕ್ಷಣ ನೀತಿಯಲ್ಲಿರುವ ಕ್ರಾಂತಿಕಾರಕ ಅಂಶಗಳ ಬಗ್ಗೆ ಇದೇ ವೇಳೆ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ವರ್ಷದಿಂದಲೇ ಜಾರಿ ಆಗುತ್ತಿರುವ ಈ ನೀತಿಯಲ್ಲಿ ಮಾತೃಭಾಷಾ ಕಲಿಕೆಗೆ ಇರುವ ಮಹತ್ವವನ್ನು ಸಾಹಿತಿಗಳಿಗೆ ಮನವರಿಕೆ ಮಾಡಿಕೊಟ್ಟ ಅಶ್ವತ್ಥ ನಾರಾಯಣ, ಬಹುಶಿಸ್ತೀಯ ಹಾಗೂ ಬಹು ಆಯ್ಕೆಯ ಕಲಿಕೆಯಿಂದ ಆಗುವ ಬದಲಾವಣೆಗಳ ಬಗ್ಗೆಯೂ ವಿವರವಾಗಿ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆ ಉನ್ನತೀಕರಿಸುವ ಹಾಗೂ ವಿದ್ಯಾರ್ಥಿಗಳ ಹಿತವನ್ನು ಎತ್ತಿಹಿಡಿಯುವ ಧ್ಯೇಯವೊಂದನ್ನು ಹೊರತುಪಡಿಸಿ ಬೇರಾವ ಅಜೆಂಡಾವು ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿದ ಅವರು, ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರತಿ ಸಾಹಿತಿ ಅಭಿಪ್ರಾಯವನ್ನು ಆಲಿಸಿದರು.
ಎರಡು ವರ್ಷ ಮಾತೃಭಾಷಾ ಕಲಿಕೆ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿ ವಿದ್ಯಾರ್ಥಿ ಒಂದಲ್ಲ ಎರಡು ವರ್ಷ ತನ್ನ ಮಾತೃಭಾಷೆಯಲ್ಲಿ ಕಡ್ಡಾಯವಾಗಿ ಕಲಿಯಬೇಕು. ಈ ಮೂಲಕ ಮಾತೃಭಾಷಾ ಕಲಿಕೆಗೆ ಅತ್ಯುನ್ನತ ಮಹತ್ವ ಕೊಡಲಾಗುತ್ತದೆ. ಇಷ್ಟೇ ಅಲ್ಲದೆ, ಕನ್ನಡ ಭಾಷೆಯಲ್ಲೇ ತಾಂತ್ರಿಕ ಶಿಕ್ಷಣ ನೀಡುತ್ತಿದ್ದೇವೆ. ಇದರಲ್ಲಿ ಕಲಿತವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣ ನೀಡುವಲ್ಲಿ ರಿಯಾಯಿತಿ ಇಲ್ಲವೇ ಮೀಸಲು ಕೊಡಲಾಗುವುದು ಎಂದು ಅವರು ಹೇಳಿದರು.
ಸ್ಥಳೀಯ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಕೊಡಬೇಕಾದರೆ ಬಂಡವಾಳ ಹೆಚ್ಚು ಹೂಡಬೇಕು. ಇದಕ್ಕೆ ತಂತ್ರಜ್ಞಾನದ ನೆರವು ಬೇಕು. ಕೋಡಿಂಗ್ ಮತ್ತಿತರರ ಕೆಲಸ ಆಗಬೇಕಾಗುತ್ತದೆ. ಇದಕ್ಕೂ ಅವಕಾಶ ಕಲ್ಪಿಸುವ ವ್ಯವಸ್ಥೆ ಆಗಲಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಹತ್ತು ವರ್ಷಕ್ಕೊಮ್ಮೆ ಶಿಕ್ಷಣ ನೀತಿ ಬದಲಾಗಲಿ: ಸಂವಾದದಲ್ಲಿ ಮಾತನಾಡಿದ ಲೇಖಕಿ ಮಾಲತಿ ಪಟ್ಟಣಶೆಟ್ಟಿ, ಶಿಕ್ಷಣ ನೀತಿ ಕನಿಷ್ಠ ಹತ್ತು ವರ್ಷಕ್ಕಾದರೂ ಬದಲಾಗಬೇಕು. 35 ವರ್ಷದವರೆಗೂ ನೀತಿ ಬದಲಾಗಿಲ್ಲ ಎನ್ನುವ ಊಹೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಆಗಾಗ್ಗೆ ಆಗಬೇಕು ಎಂದರು.
ಮಾಲತಿ ಪಟ್ಟಣಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬದಲಾವಣೆಯ ತಳಹದಿಯ ಮೇಲೆಯೇ ಹೊಸ ಶಿಕ್ಷಣ ನೀತಿಯನ್ನು ತರಲಾಗಿದೆ. ಅಗತ್ಯಬಿದ್ದಾಗ ಬದಲಾವಣೆ ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿ ಇರಿಸಲಾಗಿದೆ. ಇನ್ನು ಮುಂದೆ ಶಿಕ್ಷಣ ನೀತಿ ಬದಲಾವಣೆಗೆ ದಶಕಗಳ ಕಾಲ ಕಾಯುತ್ತಾ ಕೂರಬೇಕಿಲ್ಲ ಎಂದರು.
ಮುಖ್ಯವಾಗಿ ಈ ಶಿಕ್ಷಣ ನೀತಿಯಲ್ಲಿ ಉದ್ಯೋಗ ಕೌಶಲ್ಯದ ತರಬೇತಿ ಪಠ್ಯದ ಕ್ರಮ ಅಳವಡಿಸಲಾಗಿದೆ. ಅಧ್ಯಯನ ಮತ್ತು ಸಂಶೋಧನೆಗೆ ಬಹಳ ಅವಕಾಶ ಇದೆ. ಭವಿಷ್ಯದ ದಿನಗಳಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಾಗಿ ವಿದೇಶಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಲಿದೆ. ಮುಖ್ಯವಾಗಿ ಪದವಿ, ಪಿಜಿ ಮಟ್ಟದಲ್ಲೇ ಸಂಶೋಧನೆಗೆ ಒತ್ತು ಕೊಡಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಮೌಲ್ಯಮಾಪನ, ಸಾಮರ್ಥ್ಯದ ಬಗ್ಗೆ ನಿಗಾ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಾಹಿತಿ ಪ್ರೊ. ಹರ್ಷ ಡಂಬಳ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಬೋಧಕರ ಸಾಮಥ್ರ್ಯ ಮತ್ತು ಮೌಲ್ಯಮಾಪನದ ಬಗ್ಗೆ ನಿರಂತರ ನಿಗಾ ಇಡುವ ವ್ಯವಸ್ಥೆ ಸಾಧ್ಯವೇ ಎಂದು ಡಂಬಳ ಪ್ರಶ್ನೆ ಮಾಡಿದರು.
ಈ ಬಗ್ಗೆ ಉತ್ತರ ನೀಡಿದ ಅಶ್ವತ್ಥ ನಾರಾಯಣ, ಬೋಧಕರ ಮೌಲ್ಯಮಾಪನ ಎನ್ನುವುದು ನಿರಂತರವಾಗಿ ಆಗುತ್ತದೆ. ಗುಣಮಟ್ಟಕ್ಕೆ ತಕ್ಕಂತೆ ಅವರು ಅಪ್ಡೇಟ್ ಆಗಲೇಬೇಕು. ಜತೆಗೆ, ಅವರು ಶಿಕ್ಷಣ ನೀತಿಯಲ್ಲಿ ನಿಗದಿ ಮಾಡಿರುವ ಸಾಮಥ್ರ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಈ ಬಗ್ಗೆ ಯಾವುದೇ ರಾಜಿ ಇಲ್ಲ. ಇದಲ್ಲದೆ, ಶಿಕ್ಷಣ ವ್ಯವಸ್ಥೆಯ ನಿರ್ವಹಣೆ ಹಾಗೂ ಸರಕಾರಿ ವ್ಯವಸ್ಥೆಯಲ್ಲೂ ಆಮೂಲಾಗ್ರ ಸುಧಾರಣೆ ತರಲಾಗುತ್ತಿದೆ ಎಂದರು.
ಪ್ರೊ.ಪ್ರಕಾಶ ಗರೂಡ ಮಾತನಾಡಿ, ಶಿಕ್ಷಣಕ್ಕೆ ರಾಜ್ಯದ ಒಟ್ಟು ದೇಶಿಯ ಉತ್ಪನ್ನದಲ್ಲಿ ಶೇ.6ರಷ್ಟು ಮೀಸಲಿಡಬೇಕು ಎಂದು ಶಿಕ್ಷಣ ನೀತಿ ಹೇಳುತ್ತದೆ. ಆದರೆ, ಅಷ್ಟು ಮೊತ್ತದ ಹಣಕಾಸು ಮೀಸಲಿಡಲು ಸಾಧ್ಯವೇ? ಈಗ ತುಂಬಾ ಕಡಿಮೆ ಹಣವನ್ನು ಶಿಕ್ಷಣಕ್ಕೆ ಒದಗಿಸಲಾಗುತ್ತಿದೆ ಎಂದರು.
ಈ ಪ್ರಶ್ನೆಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವರು, ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಜೆಟ್ ಸಭೆಗಳಲ್ಲೂ ಚರ್ಚೆ ನಡೆಸಲಾಗಿ ಹೆಚ್ಚು ಅನುದಾನ ಕೇಳಲಾಗಿದೆ. ಹೊಸ ಶಿಕ್ಷಣ ನೀತಿ ಜಾರಿ ನಂತರ ಸಂಪನ್ಮೂಲದ ಅಗತ್ಯ ಹೆಚ್ಚಿರುತ್ತದೆ. ಈ ಬಗ್ಗೆ ನಾನು ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಮಾತನಾಡುತ್ತೇನೆ ಎಂದರು.
ಸಮುದಾಯದ ಸಹಭಾಗಿತ್ವ ಬೇಕು: ಸಾಮಾನ್ಯವಾಗಿ ಒಮ್ಮೆ ಶಿಕ್ಷಣ ನೀತಿ ಬದಲಾಗುತ್ತದೆ ಎಂದರೆ ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಹಕಾರ ಬೇಕಾಗುತ್ತದೆ. ಉತ್ತಮ ಶಿಕ್ಷಣ ಎನ್ನುವುದು ವೈಯಕ್ತಿಕವಾಗಿ ಎಲ್ಲರಿಗೂ ಬೇಕು. ಅದೇ ಇಡೀ ಸಮಾಜದ ದೃಷ್ಟಿಕೋನ ಬಂದಾಗ ಅನೇಕರು ನಿಂತ ಜಾಗದಲ್ಲೇ ನಿಂತುಬಿಡುತ್ತಾರೆ. ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣ ಎನ್ನುವುದು ಹಣವಂತರ ಮಕ್ಕಳಿಗೆ ಮಾತ್ರ ಸಿಗುತ್ತಿದೆ. ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳಿಲ್ಲ, ಅಗತ್ಯ ಮೂಲಸೌಕರ್ಯಗಳೇ ಇಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಶಿಕ್ಷಣದಲ್ಲಿ ಸಮಾನತೆ ತರುವ ಉದ್ದೇಶದಿಂದ ರೂಪಿತವಾದುದೇ ಶಿಕ್ಷಣ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಒಂದೇ ರಾಜಮಾರ್ಗ. ಇದುವರೆಗೂ ಅನೇಕರು ಶಿಕ್ಷಣ ಹಾಗಿರಬೇಕು, ಹೀಗಿರಬೇಕು ಎಂದು ಹೇಳುತ್ತಲೇ ಇದ್ದಾರೆ. ಅವರು ಹೇಳಿದ್ದೆಲ್ಲ ಈ ಶಿಕ್ಷಣ ನೀತಿಯಲ್ಲಿದೆ ಎಂದು ಅವರು ಹೇಳಿದರು.
ಸಂವಾದದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯ ಪ್ರೊ.ತೇಜಸ್ವಿ ಕಟ್ಟೀಮನಿ, ಪ್ರೊ.ಮಾಲತಿ ಪಟ್ಟಣಶೆಟ್ಟಿ, ಡಾ.ಡಿ.ಎಂ.ಹಿರೇಮಠ, ಡಾ.ಶಾಂತಿನಾಥ ದಿಬ್ಬದ, ಡಾ.ಜೆ.ಎಂ.ನಾಗಯ್ಯ, ಡಾ.ಎಂ.ಎಸ್.ಶಿವಪ್ರಸಾದ್, ಡಾ.ಬಾಲಣ್ಣ ಶೀಗೀಹಳ್ಳಿ, ಡಾ.ಪ್ರಜ್ಞಾ ಮತ್ತಿಹಳ್ಳಿ, ಡಾ.ಜಿನದತ್ತ ಹಡಗಲಿ, ಡಾ.ಚಿದಾನಂದ ರೆಡ್ಡಿ ಪಾಟೀಲ, ಪೆÇ್ರ.ಹರ್ಷ ಡಂಬಳ, ಡಾ.ಪ್ರಕಾಶ ಗರುಡ, ನಾರಾಯಣ ಪಾಂಡುರಂಗಿ, ವಿಜಯಕುಮಾರ ದಿಡ್ನವರ, ಸದಾನಂದ ಶಿವಳ್ಳಿ, ಶಂಕರ ತುಂಬಿ, ಆರ್.ಬಿ.ಚಿಲುಮಿ ಸೇರಿದಂತೆ ಅನೇಕ ಸಾಹಿತಿಗಳು ಭಾಗಿಯಾಗಿದ್ದರು.







