ಹಸಿರೀಕರಣದಿಂದ ವಾತಾವರಣ ತಾಪಮಾನ ಏರಿಕೆಗೆ ಪರಿಹಾರ: ಆಶೀಶ್ ರೆಡ್ಡಿ

ಕುಂದಾಪುರ, ಆ.22: ವಾತಾವರಣದ ತಾಪಮಾನ ಏರಿಕೆ ಇಂದು ಜಗತ್ತಿನ ಅತಿ ದೊಡ್ಡ ಗಂಡಾಂತರ. ಈಗಾಗಲೇ ತಾಪಮಾನ 1.1 ಡಿಗ್ರಿ ಏರಿಕೆಯಾಗಿದೆ. ಬಿಸಿಗಾಳಿ ಮತ್ತು ಅಂತರ್ಜಲ ಕುಸಿಯುವ ದುಷ್ಪರಿಣಾಮ ಎದುರಾಗಿದೆ. ಗಿಡ-ಮರ ಬೆಳೆಸಿ, ಪ್ರಕೃತಿಯನ್ನು ಗೌರವಿಸುವುದರಿಂದಷ್ಟೇ ಇದನ್ನು ತಡೆಯಬಹುದು ಎಂದು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹೇಳಿದ್ದಾರೆ.
ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಾಲಯ ಆಡಳಿತ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಹಸಿರು ದೇವಳ ಯೋಜನೆಯನ್ವಯ ನಾಲ್ಕೂವರೆ ಎಕರೆ ವಿಸ್ತಾರದ ಕೋಟಿತೀರ್ಥ ಸರೋವರದ ದಡದಲ್ಲಿ ಬಿಲ್ವಪತ್ರೆ ಗಿಡ ನೆಟ್ಟು ಅವರು ಮಾತನಾಡುತ್ತಿದ್ದರು.
ಭೂಮಿ ಮೇಲೆ ಹಸಿರು ಜಾಸ್ತಿಯಾದಂತೆ ವಾತಾವರಣದ ವಿಷಕಾರಿ ಕಾರ್ಬನ್ ಅಂಶ ಕಡಿಮೆಯಾಗುತ್ತದೆ. ನಾವಿಂದು ಪ್ರಕೃತಿಯನ್ನು ಸಂರಕ್ಷಿಸುವುದರಿಂದ ನಮ್ಮ ಆರೋಗ್ಯ ಸುಧಾರಿಸುವುದಲ್ಲದೆ ಮುಂದಿನ ಪೀಳಿಗೆಗೆ ಒಂದು ದೊಡ್ಡ ಬಳುವಳಿ ನೀಡಿದಂತಾಗುತ್ತದೆ ಎಂದ ಅವರು, ಒಳ್ಳೆಯ ಪರಿಸರವನ್ನು ಹೊಂದಿರುವ ಕೋಟಿಲಿಂಗೇಶ್ವರ ದೇವಾಲಯವನ್ನು ಧಾರ್ಮಿಕ ಪ್ರವಾಸಿ ಕೇಂದ್ರವಾಗಿಯೂ ಬೆಳೆಸಲು ಅವಕಾಶವಿದೆ. ಈ ಬಗ್ಗೆ ಪ್ರಸ್ತಾವನೆ ಬಂದರೆ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.
ದೇವಳ ಆಡಳಿತ ಸಮಿತಿಯ ಸದಸ್ಯ ಸುರೇಶ್ ಶೇರಿಗಾರ್ ಮಾತನಾಡಿ ನಾಲ್ಕೂವರೆ ಎಕರೆಯಷ್ಟು ವಿಸ್ತಾರ ಹೊಂದಿರುವ ಕೋಟಿತೀರ್ಥ ಸರೋವರವು ಈ ಪ್ರದೇಶದ ಅತಿ ದೊಡ್ಡ ಜಲಾಗಾರ. ಇದರ ಸುತ್ತಲೂ ಪಾದಚಾರಿ ಮಾರ್ಗ ರಚಿಸಿ, ವಿದ್ಯುತ್ ದೀಪಗಳು, ಸಿ.ಸಿ.ಕ್ಯಾಮೆರಾ, ಆಸನ ವ್ಯವಸ್ಥೆಗಳನ್ನು ಅಳವಡಿಸಿ ಸುಂದರಗೊಳಿಸಲಾಗುವುದು. ಬಿಲ್ವಪತ್ರೆ, ನುಕ್ಕಿ ಇನ್ನಿತರ ಹೂಗಿಡ- ಮರಗಳನ್ನು ಬೆಳೆಸಿ ಅಭಿವೃದ್ಧಿಪಡಿ ಸಲಾಗುವುದು ಎಂದು ವಿವರಿಸಿದರು.
ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಗಿಡಗಳನ್ನು ನೆಟ್ಟರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೊಣಿ ಕೃಷ್ಣದೇವ ಕಾರಂತ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೇದಮೂರ್ತಿ ತಂತ್ರಿ ಪ್ರಸನ್ನ ಕುಮಾರ್ ಐತಾಳ, ಮಂಜುನಾಥ ಆಚಾರ್ಯ, ಚಂದ್ರಿಕಾ ಧನ್ಯ, ಶಾರದಾ, ಭಾರತಿ, ಮಾಜಿ ಸದಸ್ಯ ಬಿ.ಎಂ.ಗುರುರಾಜ ರಾವ್ ಮೊದಲಾದವರು ಉಪಸ್ಥಿತರಿದ್ದರು. ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಸಮಿತಿ ಅಧ್ಯ ಎಂ.ಪ್ರಭಾಕರ ಶೆಟ್ಟಿ ವಂದಿಸಿದರು.







