ಪರ್ಪಲೆಗಿರಿ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಘೋಷಿಸಿದ ಸಚಿವ ಸುನೀಲ್ ಕುಮಾರ್

ಕಾರ್ಕಳ : ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಕಲ್ಕುಡ-ಕಲ್ಲುರ್ಟಿ-ತೂಕತ್ತೆರಿ ಸನ್ನಿಧಾನದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅಭಿನಂದನಾ ಕಾರ್ಯಕ್ರಮ ಶನಿವಾರ ನಡೆಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಸುನಿಲ್ ಕುಮಾರ್, ಪರ್ಪಲೆಗಿರಿ ಧಾರ್ಮಿಕ ಕೇಂದ್ರವಾಗಿ ವಿವಿಧೆಡೆಯ ಜನರನ್ನು ಆಕರ್ಷಿಸುತ್ತಿದೆ. ಅನ್ಯಕೋಮಿನ ಜನರ ಕಾರಣದಿಂದ ಈ ಭೂಮಿ ಅತಿಕ್ರಮಣಕ್ಕೆ ಒಳಗಾಗುತ್ತಿದೆ ಎಂಬ ಸುದ್ದಿಗಳು ಕೇಳುತ್ತಿತ್ತು. ಈ ಸಂದರ್ಭ ದಲ್ಲಿ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದುತ್ವ ಸಂಘಟನೆಗಳು ಒಟ್ಟಾಗಿ ಸಂಘಟಿತರಾಗಿ ಹೋರಾಟ ಮಾಡಿದ ಫಲವಾಗಿ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ ಎಂದರು.
ಭಗವಾಧ್ವಜ ಹಿಡಿದು ವಿಧಾನ ಸೌಧ ಹೋದಂತಹ ನನಗೆ ಅನಂತರದ ದಿನಗಳಲ್ಲಿ ಬೇರೆ ಬೇರೆ ರೀತಿಯ ಜವಾಬ್ದಾರಿ ದೊರೆತಿದೆ. ಜವಾಬ್ದಾರಿ ಬಂದಿದೆ ಎನ್ನುವ ಕಾರಣಕ್ಕೆ ಭಗವಾಧ್ವಜ ಯಾವತ್ತೂ ಕೈಬಿಟ್ಟಿಲ್ಲ. ಮುಂದೆ ಕೈಬಿಡುವ ಪ್ರಶ್ನೆಯೂ ಇಲ್ಲ ಎಂದು ಸುನೀಲ್ ಕುಮಾರ್ ಹೇಳಿದರು.
ಪರ್ಪಲೆಗಿರಿಯಲ್ಲಿ ಭವ್ಯ ದೇಗುಲ ನಿರ್ಮಾಣವಾಗುವ ನಿಟ್ಟಿನಲ್ಲಿ ನನಗೆ ಮನವಿ ನೀಡಲಾಗಿದೆ. ದೇಗುಲ ನಿರ್ಮಾಣ ನನ್ನ ಜವಾಬ್ದಾರಿ. ಪರ್ಪಲೆಗಿರಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ಮಂಜೂರು ಮಾಡಲಾಗುವುದು ಎಂದು ಘೋಷಣೆ ಮಾಡಿದರು.
ಹಿರಿಯ ಬಿಜೆಪಿ ಮುಖಂಡ ಬೋಳ ಪ್ರಭಾಕರ್ ಕಾಮತ್ ಮಾತನಾಡಿ, ಸಚಿವ ಸುನೀಲ್ ಕುಮಾರ್ ತನ್ನ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ. ಹಿರಿಯರ ಪ್ರಯತ್ನದ ಫಲವಾಗಿ ಪಕ್ಷವಿಂದು ಸದೃಢವಾಗಿ ಬೆಳೆದಿದೆ ಎಂದ ಅವರು ಕಾರ್ಕಳದಲ್ಲಿ ಪಕ್ಷ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.
'ಸುನಿಲ್ ಕುಮಾರ್ ಮುಖ್ಯಮಂತ್ರಿಯಾಗಲಿ'
ಸಚಿವ ಸುನಿಲ್ ಕುಮಾರ್ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಈ ನಿಟ್ಟಿನಲ್ಲಿ ಕಾರ್ಕಳದ ಜನತೆ ಅವರನ್ನು ಸದಾ ಕಾಲ ಬೆಂಬಲಿಸುತ್ತಿರಬೇಕು. ಪಕ್ಷದ ಆಂತರಿಕ ಭಿನ್ನಾಭಿಪ್ರಾಯವಿದ್ದಲ್ಲಿ ರೂಂ ಬಾಗಿಲು ಹಾಕಿ ಮಾತನಾಡಿ ಸರಿಪಡಿಸಿಕೊಳ್ಳೋಣ. ನಮ್ಮ ಹುಡುಗ ಸುನಿಲ್ ಕುಮಾರ್ ವಿರುದ್ಧ ಬಹಿರಂಗವಾಗಿ ಮಾತನಾಡುವುದು ಯಾರಿಗೂ ಶೋಭೆಯಲ್ಲ ಎಂದು ಎಂ.ಕೆ. ವಿಜಯ ಕುಮಾರ್ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹೇಶ್ ಶೆಟ್ಟಿ ಕುಡುಪುಲಾಜೆ, ಹಿಂದುತ್ವ ಪರವಾಗಿ ಧೈರ್ಯವಾಗಿ ಮಾತನಾಡುವ ಸುನಿಲ್ ಕುಮಾರ್ ನಮ್ಮ ನೆಚ್ಚಿನ ನಾಯಕ. ನಿರಂತರವಾಗಿ ಕಾರ್ಕಳದ ಅಭಿವೃದ್ಧಿ ಬಗೆಗೆ ಯೋಚನೆ ಮಾಡುವ ಸುನಿಲರಿಗೆ ಬೆಂಬಲವಾಗಿ ನಿಲ್ಲುವುದು ಅತಿ ಅಗತ್ಯವೆಂದರು. ಎಂ.ಕೆ. ವಿಜಯ ಕುಮಾರ್, ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿದರು.
ವೇದಿಕೆಯಲ್ಲಿ ಬಾಲಕೃಷ್ಣ ಹೆಗ್ಡೆ, ಮನ್ಮಥ ಶೆಟ್ಟಿ, ವಿಠಲ್ ಶೆಟ್ಟಿ ಉಪಸ್ಥಿತರಿದ್ದರು.








