ಅಫ್ಘಾನ್ ನಿಂದ ಸುರಕ್ಷಿತವಾಗಿ ಮನೆ ತಲುಪಿದ ಉಳ್ಳಾಲದ ಪ್ರಸಾದ್ ಆನಂದ್
![ಅಫ್ಘಾನ್ ನಿಂದ ಸುರಕ್ಷಿತವಾಗಿ ಮನೆ ತಲುಪಿದ ಉಳ್ಳಾಲದ ಪ್ರಸಾದ್ ಆನಂದ್ ಅಫ್ಘಾನ್ ನಿಂದ ಸುರಕ್ಷಿತವಾಗಿ ಮನೆ ತಲುಪಿದ ಉಳ್ಳಾಲದ ಪ್ರಸಾದ್ ಆನಂದ್](https://www.varthabharati.in/sites/default/files/images/articles/2021/08/23/303712-1629703800.gif)
ಉಳ್ಳಾಲ, ಆ.23: ತಾಲಿಬಾನ್ ವಶಕ್ಕೆ ಪಡೆದಿರುವ ಅಫ್ಘಾನಿಸ್ಥಾನದ ಕಾಬೂಲ್ ನಲ್ಲಿ ನ್ಯಾಟೊ ಪಡೆಯ ಅಧೀನದ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಸುತ್ತಿದ್ದ ಉಳ್ಳಾಲ ಕಣೀರು ತೋಟ ನಿವಾಸಿ ಪ್ರಸಾದ್ ಆನಂದ್ (39) ಸುರಕ್ಷಿತವಾಗಿ ಇಂದು ಮನೆಗೆ ಮರಳಿದ್ದಾರೆ.
ಪ್ರಸಾದ್ ಅವರನ್ನ ಕಾಬೂಲಿನಿಂದ ನ್ಯಾಟೊ ಪಡೆ ಖತರ್ ಗೆ ಏರ್ ಲಿಫ್ಟ್ ಮಾಡಿತ್ತು. ಮೂರು ದಿನಗಳ ಕಾಲ ಖತರ್ ನಲ್ಲಿ ಉಳಿದಿದ್ದ ಪ್ರಸಾದ್ ಅಲ್ಲಿಂದ ರವಿವಾರ ರಾತ್ರಿ ದಿಲ್ಲಿಗೆ ತಲುಪಿದ್ದಾರೆ. ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದು, ಮನೆ ಸೇರಿದ್ದಾರೆ.
ಪ್ರಸಾದ್ 2013ರಲ್ಲಿ ಅಕೌಂಟೆಂಟ್ ಆಗಿ ಕಾಬೂಲಿನ ಮಿಲಿಟರಿ ಬೇಸ್ ನಲ್ಲಿ ಕೆಲಸಕ್ಕೆ ಸೇರಿದ್ದರು.
ಕಾಬೂಲಿನಲ್ಲಿ ಮೂರು ದಿನಗಳಿಂದ ವಿಮಾನ ಸಂಚಾರ ನಿಷೇಧಿಸಿದ್ದರಿಂದ ಸ್ವಲ್ಪ ಸಂಕಷ್ಟ ಅನುಭವಿಸುವಂತಾಯಿತು. ಖತರ್ ನಿಂದ ದಿಲ್ಲಿಗೆ ಬರಲು ಭಾರತೀಯ ರಾಯಭಾರ ಕಚೇರಿ ಸಹಕಾರ ಮಾಡಿತು ಎಂದು ಪ್ರಸಾದ್ ಹೇಳಿದ್ದಾರೆ.
ಕಣೀರು ತೋಟ ನಿವಾಸಿ ದಿವಂಗತ ಆನಂದ ಅಮೀನ್ ಮತ್ತು ಸರೋಜಿನಿ ದಂಪತಿಯ ಆರು ಮಕ್ಕಳಲ್ಲಿ ಪ್ರಸಾದ್ ಐದನೆಯವರು. ವಿವಾಹಿತರಾಗಿರುವ ಪ್ರಸಾದ್ ರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಪ್ರಸಾದ್ ಅವರು ಪತ್ನಿ ಭವಿಳಾ ಪ್ರಸಾದ್ ಮತ್ತು ತಮ್ಮ ಮುರಳೀರಾಜ್ ಕುಟುಂಬದ ಜೊತೆ ಕಣೀರು ತೋಟದಲ್ಲಿ ವಾಸಿಸುತ್ತಿದ್ದಾರೆ.