ಉಡುಪಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು 26ರಂದು ಸಭೆ: ಸುನೀಲ್ ಕುಮಾರ್
![ಉಡುಪಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು 26ರಂದು ಸಭೆ: ಸುನೀಲ್ ಕುಮಾರ್ ಉಡುಪಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು 26ರಂದು ಸಭೆ: ಸುನೀಲ್ ಕುಮಾರ್](https://www.varthabharati.in/sites/default/files/images/articles/2021/08/23/303817-1629740565.gif)
ಕಾಪು: ಮುಂದಿನ ಎರಡು ವರ್ಷದಲ್ಲಿ ಉಡುಪಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಆಗಸ್ಟ್ 26ರಂದು ವಿಧಾನಸೌಧದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆಸುತ್ತೇವೆ ಎಂದು ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಸೋಮವಾರ ಕಾಪು ಕ್ಷೇತ್ರ ಬಿಜೆಪಿ ಕಛೇರಿಗೆ ಭೇಟಿ ನೀಡಿ ಪಕ್ಷದ ವತಿಯಿಂದ ಸಮ್ಮಾನಿಸಿ, ಗೌರವಿಸಿ ಮಾತನಾಡಿದರು.
ಜಿಲ್ಲೆಯ ಶಾಸಕರೊಂದಿಗೆ ಚರ್ಚೆ ನಡೆಸಿ, ಸಮಸ್ಯೆಗಳನ್ನು ಬಗೆ ಹರಿಸುವ ಬಗ್ಗೆ ಅವಲೋಕನ ನಡೆಸಿ ಸಮಾಲೋಚಿಸುತ್ತೇವೆ. ಜಿಲ್ಲೆಯ ಜನತೆಯನ್ನು ಕಾಡುತ್ತಿರುವ ಬಹುಕಾಲದ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ದೊರಕಿಸಿಕೊಡಲು ಪ್ರಯತ್ನಿಸುತ್ತೇವೆ ಎಂದರು.
ಸಾಮಾನ್ಯ ಕಾರ್ಯಕರ್ತನೋರ್ವ ಉನ್ನತ ಹುದ್ದೇಯನ್ನೇರಿದಾಗ ಪಕ್ಷ ಕಛೇರಿಗೆ ಭೇಟಿ ನೀಡಿ, ಗೌರವ ಸ್ವೀಕರಿಸುವುದು ಬಿಜೆಪಿಯ ಸಂಪ್ರಧಾಯವಾಗಿದೆ. ಕಾಪು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಶಾಸಕರಾದ ಲಾಲಾಜಿ ಆರ್. ಮೆಂಡನ್ ಅವರೊಂದಿಗೆ ಚರ್ಚಿಸಿ, ಸಹಕಾರ ನೀಡಲಾಗುವುದು. ಮುಂದಿನ ಕಾಪು ಪುರಸಭೆ, ಜಿಲ್ಲಾ ಪಂಚಾಯಿತಿ, ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೂ ಈಗಿನಿಂದಲೇ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಉಡುಪಿ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ಯುಪಿಸಿಎಲ್, ಐಎಸ್ಪಿಆರ್ಎಲ್, ಡೀಮ್ಡ್ ಫಾರೆಸ್ಟ್, ಪ್ರಾಧಿಕಾರದ ಸಮಸ್ಯೆ ಸಹಿತ ಎಲ್ಲವನ್ನೂ ಈಗಾಗಲೇ ನಾನು ಅರಿತುಕೊಂಡಿದ್ದೇನೆ. ಈ ಬಗ್ಗೆ ಜಿಲ್ಲೆಯ ಜನತೆ ಮತ್ತು ಜನಪ್ರತಿನಿಧಿಗಳು ಮತ್ತೆ ಮತ್ತೆ ನನ್ನ ಗಮನ ಸೆಳೆಯಬೇಕಾಗಿಲ್ಲ. ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕಲು ಸ್ವಲ್ಪ ಸಮಯ ಕಾಲಾವಕಾಶ ಕೊಡಿ, ಯಾವ್ಯಾವ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಮತ್ತು ಹೇಗೆ ಬಗೆಹರಿಸಲು ಸಾಧ್ಯ ಎನ್ನುವುದರ ಬಗ್ಗೆ ಅಽಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
ಉಡುಪಿ ಜಿಲ್ಲೆಗೆ ಮೂರು ಮಂದಿ ಸಚಿವರು ದೊರಕಿದ್ದು, ಜಿಲ್ಲೆಯ ಸುವರ್ಣ ಶಕೆ ಆರಂಭಗೊಂಡಿದೆ. ಮೂವರು ಸಚಿವರ ಬಗ್ಗೆಯೂ ಜನರಿಗೆ ಬಹಳಷ್ಟು ನಿರೀಕ್ಷೆಯಿದ್ದು ಸಚಿವರ ಕಾರ್ಯವೈಖರಿಯ ಬಗ್ಗೆ ಜನತೆ ಮತ್ತು ಪಕ್ಷದ ಕಾರ್ಯಕರ್ತರು ಇರಿಸಿರುವ ನಂಬಿಕೆಯನ್ನು ಹುಸಿಗೊಳಿಸದೇ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಮುಂದೆ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇವೆ ಎಂದರು.
ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗೆ ಸಂಬಂಧಪಟ್ಟು ಕಾಪು ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಯೋಜನೆಗಳು ಹಾಗೂ ಕುಂದು ಕೊರತೆಗಳನ್ನು ಶಾಸಕರು ಮತ್ತು ಅಧಿಕಾರಿಗಳ ಜೊತೆಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುತ್ತೇವೆ. ಸಮಗ್ರ ಕಾಪುವಿನ ಅಭಿವೃದ್ಧಿಗೆ ಸರಕಾರದಿಂದ ಏನೆಲ್ಲಾ ಸಿಗಬೇಕೇ ಅದೆಲ್ಲವನ್ನೂ ದೊರಕಿಸಿ ಕೊಡಲು ಬದ್ಧರಿದ್ದೇವೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಯುಪಿಸಿಎಲ್, ಐಎಸ್ಪಿಆರ್ಎಲ್ನಿಂದಾಗಿ ಆಗುತ್ತಿರುವ ಸಮಸ್ಯೆಗಳಿಂದ ಜನರಿಗೆ ಮುಕ್ತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸಚಿವರಿಂದ ಸಹಕಾರದ ದೊರಕಬೇಕಿದೆ. ಕಾಪು ಕ್ಷೇತ್ರದ ಮಹತ್ವದ ಯೋಜನೆಗಳಾದ ಹೆಜಮಾಡಿ ಮೀನುಗಾರಿಕಾ ಬಂದರು, ಕುರ್ಕಾಲು ಕುಡಿಯುವ ನೀರು ಪೂರೈಕೆ ಯೋಜನೆಗಳು ಕಾನೂನಾತ್ಮಕ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಬಾಕಿಯುಳಿದಿದ್ದು, ವಾರಾಹಿ ಯೋಜನೆಯಿಂದ ಕಾಪುವಿನ ಗ್ರಾಮೀಣ ಪ್ರದೇಶದ ಕೆಲವೊಂದು ಪ್ರದೇಶಗಳಿಗೆ ನೀರು ಪೂರೈಸುವ ಯೋಜನೆ ಸಹಿತವಾಗಿ ಹಲವು ಪ್ರಮುಖ ಯೋಜನೆಗಳಿಗೆ ವೇಗ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಮನವಿ ಮಾಡಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ, ಗೀತಾಂಜಲಿ ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಹಿಳಾ ಮೋರ್ಚಾ ಕ್ಷೇತ್ರಾಧ್ಯಕ್ಷೆ ಸುಮಾ ಯು. ಶೆಟ್ಟಿ, ಯುವ ಮೋರ್ಚಾ ಕ್ಷೇತ್ರಾಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ, ಕಾಪು ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಬಿಜೆಪಿ ಮತ್ತು ಕಾಪು ಮಂಡಲದ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಂಬೆಟ್ಟು ವಂದಿಸಿದರು.