ಆನ್ಲೈನ್ನಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಶ್ರೀರಾಮುಲು
''ಯಾವುದೇ ಬಸ್ ಪಾಸ್ ದರ ಹೆಚ್ಚಳ ಮಾಡುವುದಿಲ್ಲ''

ಬೆಂಗಳೂರು, ಆ.24: ರಾಜ್ಯದ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇವತ್ತಿನಿಂದಲೇ ಬಸ್ ಪಾಸ್ಗಳನ್ನು ಆನ್ಲೈನ್ ಮೂಲಕ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ, ಪಾಸ್ ಪಡೆದುಕೊಳ್ಳಬಹುದು. ಹಾಗೂ ವಿದ್ಯಾರ್ಥಿ ಪಾಸ್ ದರದಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಬಸ್ ಪಾಸ್ ದರ ಹೆಚ್ಚಳ ಮಾಡುವುದಿಲ್ಲ. ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಈ ನಷ್ಟಕ್ಕೆ ಡೀಸಲ್ ಬೆಲೆ ಏರಿಕೆ ಮಾತ್ರ ಕಾರಣವಲ್ಲ. ಪ್ರಯಾಣಿಕರ ಸಂಖ್ಯೆ ಕಡಿಮೆಯಾದಾಗಲೂ ನಷ್ಟವಾಗುತ್ತದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಬಸ್ಗಳ ಬಳಕೆ ಹೆಚ್ಚಿಸುವುದರಿಂದ ನಷ್ಟ ಕಡಿಮೆ ಮಾಡಬಹುದು. ಇಂಧನ ಬೆಲೆ ಏರಿಕೆ ಇಡೀ ದೇಶದಲ್ಲಿದೆ, ಕಡಿಮೆ ಮಾಡಿ ಅಂತ ಹೇಳಲು ಸಾಧ್ಯವಿಲ್ಲ. ಸಾರಿಗೆ ಸಂಸ್ಥೆಯನ್ನು ಜನರಿಗೆ ಹೊರೆಯಾಗದ ರೀತಿ ಲಾಭವಾಗಿ ಮಾಡಬೇಕಿದೆ. ಸೇವೆಯ ಜೊತೆಯಲ್ಲಿ ಲಾಭದಾಯಕವಾಗಿ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.





