ಅಫ್ಘಾನ್ನಲ್ಲಿ ಮಂಗಳೂರಿಗರು ಬಾಕಿಯಾಗಿದ್ದಲ್ಲಿ ನೆರವಿಗೆ ಕ್ರಮ: ಶಶಿಕುಮಾರ್
ಅಫ್ಘಾನ್ನಿಂದ ಮರಳಿದವರ ಜೊತೆ ಪೊಲೀಸ್ ಕಮಿಶನರ್ ಸಂವಾದ
![ಅಫ್ಘಾನ್ನಲ್ಲಿ ಮಂಗಳೂರಿಗರು ಬಾಕಿಯಾಗಿದ್ದಲ್ಲಿ ನೆರವಿಗೆ ಕ್ರಮ: ಶಶಿಕುಮಾರ್ ಅಫ್ಘಾನ್ನಲ್ಲಿ ಮಂಗಳೂರಿಗರು ಬಾಕಿಯಾಗಿದ್ದಲ್ಲಿ ನೆರವಿಗೆ ಕ್ರಮ: ಶಶಿಕುಮಾರ್](https://www.varthabharati.in/sites/default/files/images/articles/2021/08/25/303978-1629883896.gif)
ಮಂಗಳೂರು, ಆ.25: ಅಫ್ಘಾನಿಸ್ತಾನದ ನ್ಯಾಟೋ ಮಿಲಿಟರಿ ಬೇಸ್ನಲ್ಲಿದ್ದ ಮಂಗಳೂರಿನ ಏಳು ಮಂದಿ ಸುರಕ್ಷಿತವಾಗಿ ತಮ್ಮ ಮನೆ ಸೇರಿದ್ದು, ಇನ್ನು ಯಾರಾದರೂ ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿ ಹಿಂದಿರುಗುವವರಿದ್ದರೆ ಮಾಹಿತಿ ನೀಡಿದರೆ ಸಂಬಂಧಪಟ್ಟವರ ಮೂಲಕ ವಾಪಸ್ ಕರೆಸಲು ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆಶ್ವಾಸನೆ ನೀಡಿದ್ದಾರೆ.
ಕಳೆದ ಕೆಲ ಸಮಯದಿಂದ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗಳ ಹಿನ್ನೆಲೆಲ್ಲಿ ಕಾಬೂಲ್ನಿಂದ ದಿಲ್ಲಿಗೆ ಏರ್ಲಿಫ್ಟ್ ಆಗಿ ಕಳೆದರಡು ದಿನಗಳಿಂದ ತಮ್ಮ ಮನೆಗಳಿಗೆ ಆಗಮಿಸಿರುವ ಏಳು ಮಂದಿ ಮಂಗಳೂರಿಗರ ಜತೆ ತಮ್ಮ ಕಚೇರಿಯಲ್ಲಿ ಅವರ ಕುಶೋಲಪರಿ ನಡೆಸಿದರು.
ಪ್ರಸಾದ್ ಆನಂದ್, ದಿನೇಶ್ ರೈ, ಶ್ರವಣ್ ಅಂಚನ್, ಜಗದೀಶ್ ಪೂಜಾರಿ, ಡೆಸ್ಮಂಡ್ ಡೇವಿಡ್ ಡಿಸೋಜ, ಡೆನ್ಸಿಲ್ ಮೊಂತೆರೋ, ಮೆಲ್ವಿನ್ ಮೊಂತೆರೋ ಇವರೆಲ್ಲರೂ ನ್ಯಾಟೋ ಮಿಲಿಟರಿ ನೆಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, ಕಾಬೂಲ್ನಿಂದ ಆ.17ರಿಂದ ದಿಲ್ಲಿಗೆ ಕರೆತಂದು ಬಳಿಕ ಆ.23 ಮತ್ತು 24ರಂದು ಅವರೆಲ್ಲಾ ಮಂಗಳೂರಿಗೆ ಆಗಮಿಸಿದ್ದಾರೆ. ಇವರೆಲ್ಲರೂ ಮಿಲಿಟರಿ ಹಾಗೂ ರಕ್ಷಣಾ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಹಿಂದಿರುಗಲು ಸಾಧ್ಯವಾಗಿದೆ. ಮಂಗಳೂರು ಅಥವಾ ದ.ಕ. ಜಿಲ್ಲೆಯ ಇತರರು ಇತರ ಕೆಲಸಗಳಲ್ಲಿ ಅಲ್ಲಿರುವವವರ ಬಗ್ಗೆ ಇವರಿಗೆ ಯಾವುದೇ ಮಾಹಿತಿ ಇಲ್ಲ. ಇವರೆಲ್ಲಾ 2011ರಿಂದ ಅಲ್ಲಿ ಎ.ಸಿ. ಮೆಕ್ಯಾನಿಕ್, ಹೆವಿ ಇಕ್ಯೂಪ್ಮೆಂಟ್ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದವರು. ಕೇಂದ್ರ ಸರಕಾರವು ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಮಾಡುತ್ತಿರುವ ಬಗ್ಗೆ ಎಲ್ಲರಿಗೂ ವಿಶ್ವಾಸವಿದೆ. ಒಂದು ವೇಳೆ ಇನ್ನೂ ಯಾರಾದರೂ ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿರುವ ಮಂಗಳೂರಿಗರು ಇದ್ದಲ್ಲಿ ಮಾಹಿತಿ ನೀಡಿದರೆ, ರಾಜ್ಯದ ನೋಡಲ್ ಅಧಿಕಾರಿಯಾಗಿ ನೇಮಕವಾಗಿರುವ ಎಡಿಜಿಪಿ ಉಮೇಶ್ ಕುಮಾರ್ ಅವರಿಗೆ ಮಾಹಿತಿಯನ್ನು ಒದಗಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ದಿನೇಶ್ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದರು.