ಮಿಯಾಗಂಜ್ ಅನ್ನು ಮಾಯಾಗಂಜ್ ಎಂದು ಬದಲಿಸಲು ಜಿಲ್ಲಾಡಳಿತದಿಂದ ಉತ್ತರಪ್ರದೇಶ ಸರಕಾರಕ್ಕೆ ಶಿಫಾರಸ್ಸು
ಲಕ್ನೋ: ಉನ್ನಾವೋ ಜಿಲ್ಲಾಡಳಿತಕ್ಕೊಳಪಟ್ಟ ಮಿಯಾಗಂಜ್ ಗ್ರಾಮದ ಹೆಸರನ್ನು ಮಾಯಾಗಂಜ್ ಎಂದು ಬದಲಿಸುವಂತೆ ಉತ್ತರಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ಜಿಲ್ಲಾಡಳಿತ ಪತ್ರ ಬರದು ಶಿಫಾರಸು ಮಾಡಿದೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉನ್ನಾವೊ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್, "ಮಿಯಾಗಂಜ್ ಗ್ರಾಮ ಪಂಚಾಯತ್ ಹೆಸರನ್ನು ಮಾಯಾಗಂಜ್ ಎಂದು ಬದಲಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳೀಯರು ಹಾಗೂ ಮುಖ್ಯ ಅಭಿವೃದ್ಧಿ ಅಧಿಕಾರಿಯಿಂದ ಈ ಪ್ರಸ್ತಾವನೆ ಬಂದಿದ್ದು, ಮುಂದಿನ ಕ್ರಮಕ್ಕಾಗಿ ನಾವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
"ಬಿಜೆಪಿ ಶಾಸಕ ಬಂಬಾಲಾಲ್ ದಿವಾಕರ್ ಅವರ ಪತ್ರದ ಬಳಿಕ ಗ್ರಾಮಸಭೆಯ ಹೆಸರನ್ನು ಬದಲಿಸಲು ಕ್ರಮಗಳನ್ನು ಆರಂಭಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ indianexpress ನೊಂದಿಗೆ ಮಾತನಾಡಿದ ದಿವಾಕರ್, ೨೦೧೭ರ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಆದಿತ್ಯನಾಥ ಮಾಡಿದ ಭಾಷಣದಿಂದ ಈ ಹೆಸರನ್ನು ಬದಲಾಯಿಸುವ ಆಲೋಚನೆ ಬಂದಿದೆ. ೨೦೧೭ರಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಆದಿತ್ಯನಾಥ್ ಜಿ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಲ್ಲಿ ಹೆಸರು ಮಿಯಾಗಂಜ್ ಅಲ್ಲ, ಮಾಯಾಗಂಜ್ ಆಗಲಿದೆ ಎಂದಿದ್ದರು. ಇದನ್ನು ಅನುಸರಿಸಿ ನಾನು ಸಿಎಂ ಜೊತೆ ಮಾತನಾಡಿದಾಗ ಅವರು ಪ್ರಸ್ತಾವನೆ ಕಳುಹಿಸುವಂತೆ ಹೇಳಿದ್ದರು. ಎಂದು ದಿವಾಕರ್ ಹೇಳಿದ್ದಾರೆ.
ಈ ನಡುವೆ ರಾಜ್ಯ ಸಚಿವ ರಾಮ ಶಂಕರ್ ಸಿಂಗ್ ಪಟೇಲ್ ಅವರು ಮಿರ್ಜಾಪುರ ಜಿಲ್ಲೆಗೆ ಇದೇ ರೀತಿಯ ಬೇಡಿಕೆಯನ್ನು ಮಾಡಿದ್ದು, ಮಿರ್ಜಾಪುರವನ್ನು ವಿಂಧ್ಯ ಧಾಮ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ.