ಮಾಂದಲಪಟ್ಟಿಯಲ್ಲಿ ಹೆಲಿಕಾಪ್ಟರ್ ಹಾರಾಟ: ಕೊಡಗು ರಕ್ಷಣಾ ವೇದಿಕೆ ಆಕ್ಷೇಪ, ಅರಣ್ಯಾಧಿಕಾರಿಗಳಿಗೆ ದೂರು

ಮಡಿಕೇರಿ ಆ.26 : ಅಭಯಾರಣ್ಯವಾಗಿರುವ ಮಾಂದಲಪಟ್ಟಿಯಲ್ಲಿ ಜಾಲಿ ರೈಡ್ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಹೆಲಿಕಾಫ್ಟರ್ ಹಾರಾಟವಾಗುತ್ತಿದ್ದು, ಇದರಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ. ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿರುವ ಸಂಘಟನೆಯ ಪ್ರಮುಖರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಅರಣ್ಯ ಭವನಕ್ಕೆ ತೆರಳಿದ ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ನೇತೃತ್ವದ ನಿಯೋಗ ಅಧಿಕಾರಿಗಳಿಗೆ ದೂರು ನೀಡಿ ಹೆಲಿಕಾಫ್ಟರ್ ಹಾರಾಟದಿಂದ ಆಗಬಹುದಾದ ಅನಾಹುತಗಳ ಬಗ್ಗೆ ವಿವರಿಸಿದರು.
ಮಾಂದಲಪಟ್ಟಿಯಲ್ಲಿ ಪ್ರಕೃತಿ ವರವಾಗಿ ನೀಡಿದ ನೀಲಕುರುಂಜಿ ಪುಷ್ಪರಾಶಿಯನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಖಾಸಗಿ ಸಂಸ್ಥೆಯೊಂದು ಜಾಲಿರೈಡ್ ಹೆಸರಿನಲ್ಲಿ ಲಕ್ಷಾಂತರ ರೂ.ಗಳನ್ನು ಸಂಗ್ರಹಿಸಿ ಪ್ರವಾಸಿಗರನ್ನು ಹೆಲಿಕಾಫ್ಟರ್ ಮೂಲಕ ಕರೆತಂದು ಹಾರಾಟ ನಡೆಸುತ್ತಿದೆ. ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಮಾಂದಪಟ್ಟಿಯಲ್ಲಿ ಪೂರ್ವಾನುಮತಿ ಇಲ್ಲದೆ ಹೆಲಿಕಾಫ್ಟರ್ ಹಾರಾಡುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಈ ಸಂಸ್ಥೆ ಜಾಹೀರಾತನ್ನು ನೀಡಿ ಮಾಂದಲಪಟ್ಟಿಯಲ್ಲಿ ಅರಳಿರುವ ನೀಲಕುರಂಜಿ ಹೂವಿನ ಆಕಾಶ ದರ್ಶನ ಮಾಡಿಸುತ್ತೇವೆ ಎಂದು ಪ್ರಚಾರ ನೀಡಿದೆ. ಇದಕ್ಕೆ ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿರುವ ಪವನ್ ಪೆಮ್ಮಯ್ಯ, ಪ್ರವಾಸಿಗರು ಭೂಮಾರ್ಗದ ಮೂಲಕ ಬರಲು ನಮ್ಮ ಆಕ್ಷೇಪವಿಲ್ಲ, ಆದರೆ ಆಕಾಶಮಾರ್ಗದಲ್ಲಿ ಅಭಯಾರಣ್ಯದಲ್ಲಿ ಸಂಚರಿಸುವುದಕ್ಕೆ ವಿರೋಧವಿದೆ ಎಂದರು.
ಕೆಲವು ವರ್ಷಗಳ ಹಿಂದೆ ಪಶ್ಚಿಮಘಟ್ಟ ಮೂಲನಿವಾಸಿಗಳ ಸಂಘನೆಯೊಂದು ಮಾಂದಲಪಟ್ಟಿಯಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನಡೆಸಿ ಗ್ರಾಮೀಣ ಭಾಗದ ಜನರಲ್ಲಿ ಕ್ರೀಡೋತ್ಸಾಹವನ್ನು ತುಂಬುತ್ತಿತ್ತು. ನಂತರದ ವರ್ಷಗಳಲ್ಲಿ ಅಭಯಾರಣ್ಯ ಎನ್ನುವ ಕಾರಣಕ್ಕಾಗಿ ಈ ಕ್ರೀಡಾಕೂಟಕ್ಕೆ ಅರಣ್ಯ ಇಲಾಖೆ ನಿರ್ಬಂಧ ಹೇರಿತು.
ಆದರೆ ಇಂದು ಇದೇ ಅರಣ್ಯ ಇಲಾಖೆ ಮಾಂದಲಪಟ್ಟಿಯನ್ನು ಪ್ರವಾಸಿತಾಣವನ್ನಾಗಿ ಪ್ರತಿಬಿಂಬಿಸಿ ಸಾವಿರಾರು ಪ್ರವಾಸಿಗರ ಪ್ರವೇಶಕ್ಕೆ ಅನುಕೂಲ ಕಲ್ಪಿಸಿದೆ. ಅಲ್ಲದೆ ಕಾಮಗಾರಿಗಳನ್ನು ಕೂಡ ನಡೆಸಿದೆ. ಇದೀಗ ಹೆಲಿಕಾಫ್ಟರ್ ಹಾರಾಟ ಆರಂಭಗೊಂಡಿದ್ದು, ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಂದಲಪಟ್ಟಿಗೆ ಕೊರವೇ ನಿಯೋಗ ಭೇಟಿ ನೀಡಿದ ಸಂದರ್ಭ ಅರಣ್ಯ ಸಿಬ್ಬಂದಿಗಳು “ನಿಮ್ಮ ಬಳಿ ಡ್ರೋಣ್ ಇದೆಯೇ” ಎಂದು ನಮ್ಮನ್ನು ಪರಿಶೀಲಿಸಿದ್ದಾರೆ. ಇಷ್ಟು ಕಾಳಜಿ ತೋರುವ ಅರಣ್ಯ ಇಲಾಖೆ ಈಗ ಹೆಲಿಕಾಫ್ಟರ್ ಹಾರಾಟಕ್ಕೆ ಹೇಗೆ ಅವಕಾಶ ನೀಡಿತು ಎಂದು ಪ್ರಶ್ನಿಸಿದರು.
ತಕ್ಷಣ ಹೆಲಿಕಾಫ್ಟರ್ ಹಾರಾಟವನ್ನು ಸ್ಥಗಿತಗೊಳಿಸಬೇಕು ಮತ್ತು ನಿಯಮ ಉಲ್ಲಂಘಿಸಿದ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮತ್ತೆ ಹೆಲಿಕಾಫ್ಟರ್ ಹಾರಾಟ ಕಂಡು ಬಂದರೆ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪವನ್ ಪೆಮ್ಮಯ್ಯ ಎಚ್ಚರಿಕೆ ನೀಡಿದರು.
ಕೊರವೇ ನಿರ್ದೇಶಕ ಪಾಪುರವಿ, ಮಡಿಕೇರಿ ನಗರ ಘಟಕದ ಸಂಚಾಲಕರುಗಳಾದ ಆರ್.ವಿನೋದ್, ರಾಜುಕೀರ್ತಿ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.







