ಶಾಸಕ ರಾಜೇಶ್ ನಾಯ್ಕ್ ರೈತರನ್ನು ದಂಧೆಕೋರರು ಎಂದಿರುವುದು ಖಂಡನೀಯ: ದ.ಕ. ಜಿಲ್ಲಾ ಕಿಸಾನ್ ಕಾಂಗ್ರೆಸ್

ಬಂಟ್ವಾಳ, ಆ.27: ರೈತ ಹೆಸರಿನಲ್ಲಿ ರಾಜಕೀಯವಾಗಿ ಬೆಳೆದು ಅಧಿಕಾರಕ್ಕೆ ಬಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನ್ಯಾಯಕ್ಕಾಗಿ ದಿಲ್ಲಿಯಲ್ಲಿ ಸುದೀರ್ಘ ಹೋರಾಟ ನಡೆಸುತ್ತಿರುವ ದೇಶದ ರೈತರನ್ನು ದಂಧೆಕೋರರು ಎಂದಿರುವುದು ಖಂಡನೀಯ. ರೈತರನ್ನು ಅವಹೇಳನ ಮಾಡುವ ಪ್ರವೃತ್ತಿ ಮುಂದುವರಿಸಿದರೆ ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರೈತ ಮೋರ್ಚಾ ಸಮಾವೇಶದಲ್ಲಿ ಶಾಸಕ ರಾಜೇಶ್ ನಾಯ್ಕ್ ರೈತರನ್ನು ದಂಧೆಕೋರರು ಎಂದಿದ್ದಾರೆ. ಶಾಸಕರಿಗೆ ದಂಧೆಕೋರ ಪದದ ಅರ್ಥ ತಿಳಿಯಬೇಕಾದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಷ್ಟ್ರ ನಾಯಕ ಅಮಿತ್ ಶಾ ಅವರ ಪುತ್ರ ಹಾಗೂ ಜೈಲಿಗೆ ಹೋದ ಬಿಜೆಪಿಯ ಸಚಿವರಲ್ಲಿ ಕೇಳಿ ತಿಳಿಯಲಿ ಎಂದರು.
ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯ ಬೀದಿಯಲ್ಲಿ ಬಿಸಿಲು, ಚಳಿ, ಮಳೆಯೆನ್ನದೆ ಸುದೀರ್ಘ ಹೋರಾಟ ನಡೆಸುತ್ತಿರುವ ದೇಶದ ಅನ್ನದಾತರಿಗೆ ನ್ಯಾಯ ಕೊಡದೆ ಕಾರ್ಪೊರೇಟ್ ಶಕ್ತಿಗಳ ಹಿತ ಕಾಪಾಡುವ ಕೇಂದ್ರ ಸರಕಾರ ನಿಜವಾದ ದಂಧೆಕೋರ ಸರಕಾರವಾಗಿದೆ. ರೈತರ ಪ್ರತಿಭಟನಾ ಸ್ಥಳಕ್ಕೆ ಅನ್ನ, ನೀರು ತಲುಪದಂತೆ ಮಾಡುವ ಸರಕಾರವನ್ನು ಏನೆಂದು ಕರೆಯಬೇಕು ಎಂದು ಹೇಳಿದರು.
ಯುಪಿಎ, ಸಿದ್ದರಾಮಯ್ಯ ಸರಕಾರ ರೈತರ ಲಕ್ಷಾಂತರ ಕೋಟಿ ರೂ. ಸಾಲಮನ್ನಾ ಮಾಡಿದೆ. ಬಿಜೆಪಿ ಸರಕಾರ ಕಾರ್ಪೊರೇಟ್ ಗಳ ಸಾಲಮನ್ನಾ ಮಾಡುತ್ತಿದೆ. ಜೊತೆಗೆ ರೈತರ ಭೂಮಿಯನ್ನು ಕಸಿದು ಕಾರ್ಪೊರೇಟ್ ಕಂಪೆನಿಗಳಿಗೆ ನೀಡುವ ಕಾನೂನುಗಳನ್ನು ಜಾರಿ ಮಾಡುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಪೈಪ್, ಯಂತ್ರ ಸಹಿತ ಕೃಷಿ ಸಾಮಗ್ರಿಗಳ ಬೆಲೆ ದುಪ್ಪಟ್ಟು ಆಗಿದೆ. ರೈತರಿಗೆ ಉಚಿತವಾಗಿ ನೀಡಲಾಗುತ್ತಿರುವ ವಿದ್ಯುತ್ ಸಂಪರ್ಕವನ್ನು ರದ್ದು ಮಾಡುವ ಚಿಂತನೆ ನಡೆಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅನ್ನದಾತ ರೈತರಿಗೆ ಹೊಲದಲ್ಲಿ ಬೆವರು ಸುರಿಸಿ ಕೃಷಿ ಮಾಡಲು ಹೇಗೆ ಗೊತ್ತಿದೆಯೋ ಅದೇರೀತಿ ರೈತರಿಗೆ ಅನ್ಯಾಯ ಆದಾಗ ಬೀದಿಗೆ ಬಂದು ಹೋರಾಟ ನಡೆಸಲು ತಿಳಿದಿದೆ. ತನ್ನ ಹಕ್ಕುಗಳಿಗೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ರೈತರನ್ನು ದೇಶದ್ರೋಹಿಗಳು, ದಂಧೆಕೋರರು ಎನ್ನುವುದು ತಿನ್ನುವ ಅನ್ನಕ್ಕೆ ಮಾಡುವ ಅವಮಾನವಾಗಿದೆ. ಇಂದು ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪರಿಸ್ಥಿತಿ ಇದೆ. ಕಾರ್ಪೊರೇಟ್ ಕಂಪೆನಿಗಳ ಪರ ಇರುವ ಸರಕಾರದ ಬ್ರಿಟೀಷರಂತೆ ರೈತರು ಎಷ್ಟೇ ಹೋರಾಟ ಗಣನೆಗೆ ತೆಗೆಯುತ್ತಿಲ್ಲ. ಇದು ದೇಶದ ರೈತರಿಗೆ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಕಿಸಾನ್ ಘಟಕದ ಪ್ರಮುಖರಾದ ಸದಾನಂದ ಶೆಟ್ಟಿ, ಸೋಮೇಶೇಖರ್ ಗೌಡ, ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್ ಉಪಸ್ಥಿತರಿದ್ದರು.
ಅದಾನಿ ಗ್ರೂಪ್ ನ ಯುಪಿಸಿಎಲ್ ನಿಂದ ಕೇರಳಕ್ಕೆ ಹೈ ಪವರ್ ವಿದ್ಯುತ್ ತಂತಿ ಹಾದು ಹೋಗುವುದರಿಂದ ಬಂಟ್ವಾಳ ತಾಲೂಕಿನ ಕೆಲವು ಗ್ರಾಮಗಳ ರೈತರು ತಮ್ಮ ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಈ ಬಗ್ಗೆ ಸಭೆ ನಡೆಸಿ ಇದರ ವಿರುದ್ಧ ನಿರ್ಣಯ ಮಾಡಲಾಗಿದೆ. ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ರೈತರನ್ನು ಒಟ್ಟು ಸೇರಿಸಿ ಪ್ರತ್ಯೇಕ ಸಮಿತಿ ರಚಿಸಿ ಹೋರಾಟದ ರೂಪುರೇಷೆ ರಚಿಸಲಾಗುವುದು. ರೈತರಿಗೆ ಅನ್ಯಾಯ ಆಗುವುದಾದರೆ ಯಾವ ಸರಕಾರ ಇದ್ದರೂ ನಾವು ಹೋರಾಟ ನಡೆಸಲು ಸಿದ್ಧ. ಹೈ ಪವರ್ ತಂತಿ ಹಾದು ಹೋಗುವುದರಿಂದ ಬಂಟ್ವಾಳದ ರೈತರಿಗೆ ಆಗುವ ಅನ್ಯಾಯದ ಬಗ್ಗೆ ಶಾಸಕ ರಾಜೇಶ್ ನಾಯ್ಕ್ರ ನಿಲುವು ಏನು ಎಂಬುದನ್ನು ದೃಢಪಡಿಸಲಿ.
- ಮೋಹನ್ ಗೌಡ ಕಲ್ಮಂಜ, ದ.ಕ. ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ







