ದೇವರ ಸೂಪರ್ ಕಂಪ್ಯೂಟರ್ ನಲ್ಲಿ ಕೋವಿಡ್ ಸೃಷ್ಟಿಯಾಯಿತು ಎಂದ ಅಸ್ಸಾಂ ಸಚಿವ

ಚಂದ್ರ ಮೋಹನ್ ಪಟೊವಾರಿ (Photo: Twitter/@cmpatowary)
ಗುವಹಾಟಿ: ಕೋವಿಡ್ ಸಾಂಕ್ರಾಮಿಕವನ್ನು ದೇವರ ಸೂಪರ್ ಕಂಪ್ಯೂಟರ್ನಲ್ಲಿ ಸೃಷ್ಟಿಸಲಾಗಿದೆ ಹಾಗೂ ಯಾರಿಗೆ ಸೋಂಕು ತಗಲಬೇಕು, ಯಾರಿಗೆ ತಗಲಬಾರದು ಹಾಗೂ ಯಾರು ಸಾಯಬೇಕೆಂಬುದನ್ನು ಅದು ನಿರ್ಧರಿಸುತ್ತದೆ ಎಂದು ಅಸ್ಸಾಂನ ಸಾರಿಗೆ, ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಚಂದ್ರ ಮೋಹನ್ ಪಟೊವಾರಿ ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಕೋವಿಡ್ಗೆ ಬಲಿಯಾದವರ ಪತ್ನಿಯರಿಗೆ ಸರಕಾರದ ಯೋಜನೆಯನ್ವಯ ಆರ್ಥಿಕ ಸಹಾಯ ವಿತರಿಸಲು ಆಯೋಜಿಸಲಾದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಯಾವುದೇ ಮಾಸ್ಕ್ ಧರಿಸದೇ ಇದ್ದ ಅಥವಾ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಗುವಹಾಟಿಯ ರಸ್ತೆ ಬದಿಯಲ್ಲಿ ತಾವು ನೋಡಿದ 90 ವರ್ಷದ ವೃದ್ಧೆಯೊಬ್ಬರ ವಿಚಾರ ಉಲ್ಲೇಖಿಸುತ್ತಾ ಈ ಮಹಿಳೆಯಂತಹ ಕೆಲ ಜನರಿಗೆ ಸೋಂಕು ತಗಲುವುದಿಲ್ಲ ಎಂದು ಅವರು ಹೇಳಿದರು.
“ಯಾರಿಗೆ ಸೋಂಕು ತಗಲುತ್ತದೆ, ಯಾರಿಗೆ ತಗಲುವುದಿಲ್ಲ ಹಾಗೂ ಯಾರನ್ನು ಈ ಭೂಮಿಯಿಂದ ಕೊಂಡೊಯ್ಯಲಾಗುವುದು ಎಂಬುದನ್ನು ಪ್ರಕೃತಿ ನಿರ್ಧರಿಸುತ್ತದೆ. ದೇವರ ಕಂಪ್ಯೂಟರ್ನಲ್ಲಿ ಪಟ್ಟಿ ಸಿದ್ಧವಾಗುತ್ತದೆ. ಇದೇನು ಸಾಮಾನ್ಯ ಮನುಷ್ಯ ನಿರ್ಮಿತ ಕಂಪ್ಯೂಟರ್ ಅಲ್ಲ, ದೇವರ ಸೂಪರ್ ಕಂಪ್ಯೂಟರ್. ಶೇ2ರಷ್ಟು ಮರಣ ಪ್ರಮಾಣವಿರುವ ಕೋವಿಡ್-19 ವೈರಸ್ ಅನ್ನು ಭೂಮಿಗೆ ಕಳುಹಿಸಲು ಈ ಕಂಪ್ಯೂಟರ್ ನಿರ್ಧರಿಸಿತ್ತು,'' ಎಂದು ಅವರು ಹೇಳಿದರು.
ಸಚಿವರ ಈ ಹೇಳಿಕೆ ಕಾಂಗ್ರೆಸ್ ನಾಯಕರಿಂದ ಟೀಕೆಗೊಳಗಾಗಿದೆ.







