ರಾಜ್ಯದಲ್ಲಿ ಅತ್ಯಾಧುನಿಕ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಸರಕಾರದ ಬೆಂಬಲ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಆ.27: ಉದ್ಯೋಗ ಸೃಜಿಸುವ ಆಭರಣ ಉದ್ದಿಮೆ ಕೌಶಲ್ಯವಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನದಿಂದ ಆಭರಣ ಉತ್ಪಾದನೆಗೆ ಅನುಕೂಲವಾಗುವಂಥ ಅತ್ಯಾಧುನಿಕ ಜುವೆಲರಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಇರುವ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜುವೆಲ್ಲರಿ ಸಂಸ್ಥೆಗೆ ಸಲಹೆ ನೀಡಿದರು.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸೌತ್ ಇಂಡಿಯಾ ಜ್ಯುವೆಲ್ಲರಿ ಶೋ ಉದ್ಘಾಟಿಸಿ ಮಾತನಾಡಿದ ಅವರು, ಬ್ಯುಲಿಯನ್ ವಿನಿಮಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಭಾರತದ ಆಭರಣ ವ್ಯಾಪಾರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಮಾಡಬೇಕಾದ ಸಂದರ್ಭವಿದೆ. ಗೋಲ್ಡ್ ಕಂಟ್ರೋಲ್ ಕಾಯ್ದೆ ತೆಗೆದುಹಾಕಿದ ನಂತರ ಮುಕ್ತ ವಾತಾವರಣ ನಿರ್ಮಾಣವಾಗಿದೆ. ಚಿನ್ನದ ವ್ಯಾಪಾರ ಉದ್ದಿಮೆಯಾಗಿ ಬೆಳೆದಿದೆ ಎಂದರು.
ಭಾರತೀಯ ಆರ್ಥಿಕತೆಯಲ್ಲಿ ಉಳಿತಾಯ ಸಂಸ್ಕೃತಿ ಇದೆ. ನಮ್ಮ ಜನರ ಉಳಿತಾಯ ಮನೋಭಾವ ಆಭರಣ ಉದ್ದಿಮೆಗೆ ಸಹಕಾರಿಯಾಗಿದೆ. ಬ್ಯಾಂಕ್ ದಿವಾಳಿಯಾದರೂ ಚಿನ್ನ ನಮ್ಮ ಆಪತ್ಬಾಂಧವ. ಒಡವೆ ಎಂದರೆ ಒಂದು ಆತ್ಮೀಯತೆ. ಆಭರಣದ ವಹಿವಾಟು ಅಂತಃಕರಣವುಳ್ಳ ವ್ಯಾಪಾರ, ಇದು ಬಹಳ ಪುರಾತನ ವೃತ್ತಿಯಾಗಿದ್ದು ಭಾವನಾತ್ಮಕ ಸಂಬಂಧ ಬೆಸೆಯುವಂಥದ್ದು ಎಂದು ಅವರು ಹೇಳಿದರು.
ಆಭರಣ ಮಾಡುವ ಕಲೆ ಸೂಕ್ಷ್ಮವಾದುದು. ಆಭರಣ ತಯಾರಿ ಕರ್ನಾಟಕದ ಪಾರಂಪರಿಕ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸಬೇಕು. ಚಿನ್ನದ ವ್ಯಾಪಾರಿಗಳು ಸಮಾಜದ ಗೌರವ ಮತ್ತು ಬಾಂಧವ್ಯ ಕಾಪಾಡುವ ಬಂಧುಗಳು. ದೇಶಕ್ಕೆ ಆದಾಯ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಲ್ಲದೆ, 2ನೇ ಮತ್ತು 3ನೇ ಸ್ತರದ ನಗರಗಳಲ್ಲಿ ವ್ಯಾಪಾರ ವೃದ್ಧಿಸುವಂತೆ ಮುಖ್ಯಮಂತ್ರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಡಾ.ಟಿ.ಎ.ಶರವಣ, ಗ್ಲೋಬಲ್ ಎಕ್ಸಿಬಿಷನ್ ಅಂಡ್ ಸರ್ವಿಸಸ್ ಪ್ರತಿನಿಧಿ ಶ್ರೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







