ಮಣಿಪಾಲ: ಅತ್ಯಾಚಾರ ಖಂಡಿಸಿ ಎನ್ಎಸ್ಯುಐ ಪ್ರತಿಭಟನೆ

ಮಣಿಪಾಲ, ಆ.27: ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಎನ್ಎಸ್ಯುಐ ವತಿಯಿಂದ ಶುಕ್ರವಾರ ಮಣಿಪಾಲದ ಟೈಗರ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಇದೊಂದು ಅತ್ಯಂತ ಅಮಾನವೀಯ ಕೃತ್ಯ ಎಂದರು. ರಾಜ್ಯದಲ್ಲಿ ಅಜ್ಞಾನಿಗಳಿರುವ ಸಚಿವ ಸಂಪುಟವಿದೆ. ಘಟನೆಗೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಹ ತತ್ಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಸಿದರು.
ರಾಜ್ಯದಲ್ಲಿ ಇಂಥ ಘಟನೆಗಳು ಪದೇ ಪದೇ ನಡೆಯುತಿದ್ದು, ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆಯೇ ಇಲ್ಲವಾಗಿದೆ. ಮೈಸೂರಿನಲ್ಲಿ ನಡೆದ ಪ್ರಕರಣದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಎಲ್ಲರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ರಾಜ್ಯ ಸರಕಾರ ಸಂತ್ರಸ್ತೆಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಎನ್ಎಸ್ಯುಐ ಜಿಲ್ಲಾ ಅಧ್ಯಕ್ಷ ಸೌರಭ್ ಬಲ್ಲಾಳ್, ಕಾರ್ಯಾಧ್ಯಕ್ಷ ರಿಹಾನ್, ಕಾರ್ಯದರ್ಶಿ ಆಶ್ಫಕ್ ಎಂ., ಪದಾಧಿಕಾರಿಗಳಾದ ತೌಶಿಕ್, ಪ್ರಥಮ್, ಸಿರಾಜ್, ಆದಿತ್ಯ, ಸಾಯಿಕಿರಣ್, ರಕ್ಷಿತ್, ಯುವಕಾಂಗ್ರೆಸ್ ಉಪಾಧ್ಯಕ್ಷೆ ಸುಮಯ್ಯ ಉಪಸ್ಥಿತರಿದ್ದರು.







