ಯಶವಂತಪುರ-ಶಿವಮೊಗ್ಗ ಮಧ್ಯೆ ಹೊಸ ರೈಲು ಸಂಚಾರ

ಬೆಂಗಳೂರು, ಆ.27: ಯಶವಂತಪುರ-ಶಿವಮೊಗ್ಗ ನಡುವೆ ಮತ್ತೊಂದು ಎಕ್ಸ್ಪ್ರೆಸ್ ರೈಲನ್ನು ಓಡಿಸಲು ನೈರುತ್ಯ ರೈಲ್ವೇಯ ಬೆಂಗಳೂರು ವಿಭಾಗ ನಿರ್ಧರಿಸಿದೆ.
ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ನಿಲ್ದಾಣಗಳಲ್ಲಿ ನಿಲ್ಲಲಿದ್ದು, ಬಳಿಕ ಶಿವಮೊಗ್ಗ ತಲುಪಲಿದೆ.
ಯಶವಂತಪುರ ರೈಲ್ವೇ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 9.15ಕ್ಕೆ ರೈಲು ನಿರ್ಗಮಿಸಿ ಮಧ್ಯಾಹ್ನ 2.30ಕ್ಕೆ ಶಿವಮೊಗ್ಗ ತಲುಪಿದರೆ, ಶಿವಮೊಗ್ಗದಿಂದ ಪ್ರತಿದಿನ ಮಧ್ಯಾಹ್ನ 3.30ಕ್ಕೆ ನಿರ್ಗಮಿಸಿ ಯಶವಂತಪುರ ನಿಲ್ದಾಣಕ್ಕೆ ರಾತ್ರಿ 9ಗಂಟೆಗೆ ಆಗಮಿಸಲಿದೆ. ಕೋವಿಡ್ ಅನ್ಲಾಕ್ ನಡುವೆ ಜನರ ಸಂಚಾರ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಉಭಯ ನಗರಗಳ ನಡುವೆ ಮತ್ತೊಂದು ರೈಲನ್ನು ನೈರುತ್ಯ ರೈಲ್ವೇ ಓಡಿಸುತ್ತಿದೆ. ಇನ್ನು, ನೈರುತ್ಯ ರೈಲ್ವೇ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅರಸೀಕೆರೆ-ಹುಬ್ಬಳ್ಳಿ-ಅರಸೀಕೆರೆ ದೈನಿಕ ಪ್ಯಾಸೆಂಜರ್ ರೈಲು ಸಂಚಾರವನ್ನು ಮತ್ತೆ ಆರಂಭಿಸಲಿದೆ. ಹುಬ್ಬಳ್ಳಿ-ಬಳ್ಳಾರಿ-ಹುಬ್ಬಳ್ಳಿ ರೈಲಿಗೆ 5 ಹೆಚ್ಚುವರಿ ಬೋಗಿಗಳನ್ನು ಜೋಡಿಸುತ್ತಿದ್ದು, ಪ್ರಸ್ತುತ 8 ಬೋಗಿಗಳ ಜೊತೆ 5 ಹೆಚ್ಚುವರಿ ಬೋಗಿಗಳು ಸೇರಲಿವೆ.





