ಕೋವಿಡ್ ಸೋಂಕಿತನನ್ನು ನಿರ್ದಯಿಯಾಗಿ ಎಳೆದೊಯ್ದರು : ಆರೋಪ
ರೊನಾಲ್ಡ್ ವಾಟ್ಸನ್
ಮಂಗಳೂರು, ಆ.27: ದ.ಕ. ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿ ಎನ್ನಲಾದ 20ಕ್ಕೂ ಅಧಿಕ ಮಂದಿಯ ತಂಡವು ಕೋವಿಡ್ ಸೋಂಕಿತರನ್ನು ನಿರ್ದಯವಾಗಿ ಎಳೆದೊಯ್ದಿದ್ದಾರೆ ಎಂದು ಕೋವಿಡ್ ಸೋಂಕಿತ, ಮುಲ್ಕಿ-ಕಾರ್ನಾಡು ನಿವಾಸಿ ರೊನಾಲ್ಡ್ ವಾಟ್ಸನ್ ಎಂಬವರು ಆರೋಪಿಸಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಕೊವ್ಯಾಕ್ಸಿನ್ನ ಎರಡೂ ಲಸಿಕೆಗಳನ್ನು ಪಡೆದಿದ್ದೇನೆ. ಆದಾಗ್ಯೂ, ಆಗಸ್ಟ್ 22ರಂದು ಸಣ್ಣ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಪರಿಚಿತ ಖ್ಯಾತ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯುತ್ತಿದ್ದೆ. ಆ ದಿನದ ಪರೀಕ್ಷೆಯಲ್ಲಿ ಆರ್ಟಿಪಿಸಿಆರ್ ವರದಿ ನೆಗೆಟಿವ್ ಬಂದಿತ್ತು. ಆ.25ರಂದು ಕೊರೋನ ಪಾಸಿಟಿವ್ ದೃಢಪಟ್ಟ ವರದಿ ಬಂತು. ಇದೇನು ಗಂಭೀರ ಪ್ರಕರಣವಲ್ಲ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು’ ಎಂದು ಹೇಳಿದರು.
‘ವೈದ್ಯರ ಸೂಚನೆಯಂತೆ ಮನೆಯಲ್ಲೇ ಐಸೋಲೇಶನ್ ಆಗಿದ್ದೆ. ಆ.26ರಂದು ಬೆಳಗ್ಗೆ 9:30ಕ್ಕೆ ಆರು ಕಾರು, ಎಂಟು ಬೈಕ್ಗಳಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಆರೋಗ್ಯ ಇಲಾಖೆಯ ಸಿಬ್ಬಂದಿ ಎಂದು ಹೇಳಿಕೊಂಡು ಫ್ಲ್ಯಾಟ್ ಗೆ ನುಗ್ಗಿದರು. ಈ ತಂಡವು ಅಪಾರ್ಟ್ ಮೆಂಟ್ನವರ ಜೊತೆ ಅಸಭ್ಯವಾಗಿ ವರ್ತಿಸಿದೆ. ಇವರ ವರ್ತನೆ ತೀರಾ ಕಠೋರವಾಗಿತ್ತು ಎಂದು ರೊನಾಲ್ಡ್ ವಾಟ್ಸನ್ ದೂರಿದ್ದಾರೆ.
ಮನೆಯಿಂದ ಬಟ್ಟೆಗಳನ್ನು ತೆಗೆದುಕೊಳ್ಳಲು ಸಹ ಈ ‘ಅಧಿಕಾರಿಗಳು’ ಬಿಡಲಿಲ್ಲ. ಒಮ್ಮೆಲೆ ಮುಗಿಬಿದ್ದು ಆ್ಯಂಬುಲೆನ್ಸ್ನಲ್ಲಿ ಎಳೆದೊಯ್ದರು. ನಂತರ ಮುಲ್ಕಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಶುಚಿತ್ವ ಇರಲಿಲ್ಲ. ಸೋಂಕಿತರು ಮಲಗಲು ಇರುವ ಹಾಸಿಗೆಗಳು ಕೂಡ ಇನ್ನೇನು ಮುರಿದು ಬೀಳುವಂತಿದ್ದವು. ಆರೋಗ್ಯ ಕೇಂದ್ರ ಅವ್ಯವಸ್ಥೆಯ ಗೂಡಂತೆ ಕಾಣುತ್ತಿತ್ತು. ಅಲ್ಲಿ ಕ್ಷಣಹೊತ್ತು ನಿಲ್ಲಲು ಆಗುತ್ತಿರಲಿಲ್ಲ. ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯತ್ತಿದ್ದೇನೆ ಎಂದು ತಿಳಿಸಿದರು.
ನಿಮ್ಮನ್ನು ಕರೆದೊಯ್ಯದಿದ್ದರೆ ನೌಕರಿ ಹೋಗುತ್ತೆ!
ಫ್ಲ್ಯಾಟ್ ಗೆ ನುಗ್ಗಿದ ತಂಡದಲ್ಲಿ ಒಬ್ಬರು, ಸೋಂಕಿತರಾದ ನಿಮ್ಮನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯದಿದ್ದರೆ ತಮ್ಮ ಉದ್ಯೋಗ ಕಳೆದು ಕೊಳ್ಳಬೇಕಾಗುತ್ತದೆ. ಮೇಲಾಧಿಕಾರಿಗಳ ಆದೇಶದಂತೆ ಕರ್ತವ್ಯ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಇಲ್ಲಿ ಅಧಿಕಾರಿಗಳು ಮಾನವೀಯತೆ, ಜೀವಕ್ಕಿಂತ ಉದ್ಯೋಗಕ್ಕೆ ಮಹತ್ವ ನೀಡುತ್ತಿರುವುದು ಆಡಳಿತ ಎತ್ತ ಸಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ಸೋಂಕಿತರು ತಪ್ಪಾಗಿ ಗ್ರಹಿಸಬಾರದು: ಡಿಎಚ್ಒ ಸ್ಪಷ್ಟನೆ
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದಾಗಿ ಕೋವಿಡ್ ಸೋಂಕಿತರನ್ನು ನಿಗದಿತ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ಅಂತಹವರನ್ನು ಮನವೊಲಿಸಿಯೇ ಕರೆತರುತ್ತಿದ್ದಾರೆ. ಇದನ್ನು ಸೋಂಕಿತರು ಸೇರಿದಂತೆ ಸಾರ್ವಜನಿಕರು ತಪ್ಪಾಗಿ ಗ್ರಹಿಸಬಾರದು. ಮುಲ್ಕಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆಯ ಆರೋಪದ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.