ಕಲಬುರಗಿಯಲ್ಲಿ ಮತ್ತೆ ಕಂಪಿಸಿದ ಭೂಮಿ: ಆತಂಕದಲ್ಲಿ ಸ್ಥಳೀಯರು
ಗ್ರಾಮ ವಾಸ್ತವ್ಯದ ಭರವಸೆ ನೀಡಿದ ಸಚಿವ ಮುರುಗೇಶ್ ನಿರಾಣಿ

ಕಲಬುರಗಿ: ಇಲ್ಲಿನ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ರಾತ್ರಿ ಮತ್ತು ಬೆಳಗ್ಗಿನ ಜಾವ ಭೂಮಿ ಕಂಪಿಸಿರುವ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 1 ಗಂಟೆಗೆ ಗಡಿಕೇಶ್ವರ ಗ್ರಾಮ ಮತ್ತು ಪಂಚಾಯಿತ್ ವ್ಯಾಪ್ತಿಯ ರಾಯಕೋಡ್, ಬುದ್ಧಪುರ, ಚಿಂದಪಳ್ಳಿ, ರುದನೂರ, ಕೇರೊಳ್ಳಿ, ಭಂಟಳ್ಳಿ, ಕಪನೂರ ಹಾಗೂ ಬೆನಕನಳ್ಳಿ ಗ್ರಾಮಗಳಲ್ಲಿ ಭೂಮಿ ಒಳಗೆ ವಿಚಿತ್ರವಾದ ಶಬ್ದ ಕೇಳಿಬಂದ್ದು, ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ಸ್ಥಳೀಯ ನಿವಾಸಿ ಆಸೀಫ್ ಅಲಿ ಮತನಾಡಿ ಭೂಮಿಯ ಒಳಗೆ ಬ್ಲಾಸ್ಟ್ ಆಗುವ ಮತ್ತು ಗಣಿಗಾರಿಕೆ ನಡೆಸುವ ರೀತಿಯಲ್ಲಿ ಶಬ್ದಗಳು ಕೇಳಿಸುತ್ತಿವೆ. ಇದರಿಂದ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿರುವ ಗ್ರಾಮ ಮತ್ತು ಹಳ್ಳಿಗಳಲ್ಲಿನ ಮನೆಗಳು ಬಿರುಕು ಬಿಟ್ಟಿವೆ ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಈ ತಿಂಗಳಲ್ಲಿ ಮೂರನೇ ಬಾರಿ ಈ ರೀತಿ ಭೂಮಿ ಕಂಪಿಸಿರುವ ಘಟನೆ ನಡೆದಿದ್ದು, ಸಮಸ್ಯೆ ಪರಿಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಗ್ರಾಮಸ್ಥರ ನಿಯೋಗ ಭೇಟಿ ನೀಡಿ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವರು ಮುಂದಿನ ವಾರ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಭರವಸೆ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.





