ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿಗೆ ಸಜ್ಜಾದ ಉಡುಪಿ
ಸರಳ ಕೃಷ್ಣ ಜಯಂತಿಗೆ ಸಿದ್ಧತೆ; ಕಳೆಗುಂದಿದ ವ್ಯಾಪಾರ

ಉಡುಪಿ, ಆ.29: ಕೊರೋನ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಕಳೆದ ವರ್ಷದಂತೆ ಈ ಬಾರಿಯೂ ಉಡುಪಿ ಶ್ರೀಕೃಷ್ಣ ಮಠವು ಸರಳ, ಸಾಂಪ್ರದಾಯಿಕ ಕೃಷ್ಣ ಜಯಂತಿ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಆ.30ರಂದು ಮಠದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರ ನೇತೃತ್ವಎದಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಆಚರಿಸಿದರೆ, ಮರುದಿನ ಆ.31ರಂದು ಅಪರಾಹ್ನ ಶ್ರೀಕೃಷ್ಣ ಲೀಲೋತ್ಸವ ವಿಟ್ಲಪಿಂಡಿಯ ಸಾರ್ವಜನಿಕರಿಗೆ ಅವಕಾಶವಿಲ್ಲದೇ ಸಾಂಪ್ರದಾಯಿಕ ಆಚರಣೆ ರೂಪದಲ್ಲಿ ರಥಬೀದಿಯಲ್ಲಿ ನಡೆಯಲಿದೆ.
ನಾಳೆ ಬೆಳಗ್ಗೆ ಮಹಾಪೂಜೆಗೆ ಮೊದಲು ಶ್ರೀಕೃಷ್ಣಗೆ ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆ ನಡೆಸಲಿ ದ್ದಾರೆ. ಸೂರ್ಯಶಾಲೆಯಲ್ಲಿ ಸ್ಯಾಕ್ಸೋಫೋನ್, ನಾಗಸ್ವರ ಮತ್ತು ಕೊಳಲು ವಾದನ ಕಛೇರಿ ನಡೆಯಲಿದೆ.
ನಾಳೆ ಮಧ್ಯರಾತ್ರಿ 12:30ಕ್ಕೆ ಕೃಷ್ಣ ಜಯಂತಿ ಅಂಗವಾಗಿ ಅರ್ಘ್ಯ ಪ್ರದಾನಕ್ಕೆ ಮೂರು ಕಡೆಗಳಲ್ಲಿ ಭಕ್ತರಿಗೆ ಅವಕಾಶವಿದ್ದು, ಕನಕನ ಕಿಂಡಿ ಎದುರು ಮತ್ತು ಮಧ್ವ (ವಸಂತ) ಮಂಟಪದಲ್ಲಿ ಅವಕಾಶವಿದೆ. ಮಂಗಳವಾರ ಅಪರಾಹ್ನ 3:30ಕ್ಕೆ ವಿಟ್ಲಪಿಂಡಿ ರಥೋತ್ಸವ ನಡೆಯಲಿದ್ದು, ಈ ಬಾರಿಯೂ ಉಡುಪಿ ಯಲ್ಲಿರುವ ಅಷ್ಟಮಠದ ಸ್ವಾಮೀಜಿಗಳು ಹಾಗೂ ಮಠದ ಸಿಬ್ಬಂದಿ ವರ್ಗ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ.
80 ಸಾವಿರ ಉಂಡೆ, 40ಸಾವಿರ ಚಕ್ಕುಲಿ: ಅಷ್ಟಮಿ ಪ್ರಯುಕ್ತ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲು 40 ಸಾವಿರ ಚಕ್ಕುಲಿ ಮತ್ತು 80 ಸಾವಿರ ಉಂಡೆ ತಯಾರಿ ಮಠದಲ್ಲಿ ನಡೆಯುತ್ತಿದೆ. ಅನ್ನಬ್ರಹ್ಮದಲ್ಲಿ ಸುಮಾರು 50ಕ್ಕೂ ಹೆಚ್ಚು ಬಾಣಸಿಗರು ಚಕ್ಕುಲಿ, ಗುಂಡಿಟ್ಟು ಲಾಡು, ಅರಳುಂಡೆ, ನೆಲಕಡ್ಲೆ ಲಾಡು, ಹೆಸರಿಟ್ಟು ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡು ತಯಾರಿಸುತ್ತಿದ್ದಾರೆ.
ವ್ಯಾಪಾರಿಗಳಿಗೆ ನಿರಾಶೆ: ಮಂಗಳವಾರದ ಶ್ರೀಕೃಷ್ಣ ಲೀಲೋತ್ಸವದ ವೇಳೆ ಬಳಸುವ ಮೊಸರು ಕುಡಿಕೆಯ ಮಡಿಕೆಗಳಿಗೆ ಬ್ರಹ್ಮಾವರದ ಮಂಜುನಾಥ ಆಚಾರ್ಯ ಎಂದು ಸಂಗಡಿಗರು ಚಿತ್ರ, ರಂಗವಲ್ಲಿ ಬಿಡಿಸುವಲ್ಲಿ ನಿರತರಾಗಿದ್ದರು.
ಅಷ್ಟಮಿ ಹಬ್ಬದ ಸಂದರ್ಭದಲ್ಲಿ ಒಳ್ಳೆಯ ವ್ಯಾಪಾರವನ್ನು ನಿರೀಕ್ಷಿಸಿ ಹಾಸನ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಂದ ಬಂದಿದ್ದ ಹೂವಿನ ವ್ಯಾಪಾರಿಗಳು ಭಾರೀ ಮಳೆಯಿಂದಾಗಿ ನಿರಾಶೆ ಅನುಭವಿಸಿದರು. ಕೋವಿಡ್ ಕಾರಣದಿಂದ ರಥಬೀದಿಯಲ್ಲಿ ಜನ ಸಂಚಾರ ವಿರಳವಾಗಿದ್ದು, ಇದರೊಂದಿಗೆ ಬೆಳಗಿನಿಂದ ಸುರಿಯುತ್ತಿರುವ ಮಳೆ ಅವರ ನಿರೀಕ್ಷೆಗೆ ತಣ್ಣೀರೆರಚಿದೆ.
ವಿಟ್ಲಪಿಂಡಿಗಾಗಿ ಮಠದ ಮುಂಭಾಗ ಹಾಗೂ ರಥಬೀದಿಯ ಸುತ್ತಲೂ ಗುರ್ಜಿಗಳನ್ನು ನಿರ್ಮಿಸಲಾಗಿದೆ. ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆಯಾದ ಈ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ಈ ಬಾರಿ ಸಾಂಕೇತಿಕವಾಗಿ ನಡೆಯಲಿದೆ.
ದರ್ಶನಕ್ಕೆ ಅವಕಾಶ: ಅಷ್ಟಮಿಯಂದು ಸೋಮವಾರ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಿರಂತರ ದೇವರ ದರ್ಶನಕ್ಕೆ ಅವಕಾಶ ವಿದೆ. ವಿಟ್ಲಪಿಂಡಿ ಯಂದು ಮಂಗಳವಾರ ಬೆಳಗ್ಗೆ 7:30ರಿಂದ ಮಧ್ಯಾಹ್ನ 1:00ರವರೆಗೆ, ಬಳಿಕ ಸಂಜೆ 5:00ರಿಂದ ಕೃಷ್ಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುದರ್ಶನ ಪ್ರವೇಶ ಪತ್ರ ಹೊಂದಿದ ಭಕ್ತರಿಗೆ ಉತ್ತರ ಮತ್ತು ದಕ್ಷಿಣ ದ್ವಾರದಲ್ಲಿ ಪ್ರವೇಶಕ್ಕೆ ಅವಕಾಶವಿದ್ದು, ಯಾತ್ರಾರ್ಥಿಗಳು ವಿಶ್ವಪಥದ ಮೂಲಕ ದೇವರ ಪಡೆಯ ಬಹುದು. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸುರಕ್ಷಿತಾ ಅಂತರವನ್ನು ಪಾಲಿಸಿ, ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ದೇವರ ದರ್ಶನ ಪಡೆಯಬಹುದು ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.














