ಸೇಡಿಯಾಪು ಪ್ರಶಸ್ತಿಗೆ ಡಾ.ಶ್ರೀಕೃಷ್ಣ ಭಟ್, ಪ್ರೊ.ಶೇಷ ಶಾಸ್ತ್ರಿ ಆಯ್ಕೆ
![ಸೇಡಿಯಾಪು ಪ್ರಶಸ್ತಿಗೆ ಡಾ.ಶ್ರೀಕೃಷ್ಣ ಭಟ್, ಪ್ರೊ.ಶೇಷ ಶಾಸ್ತ್ರಿ ಆಯ್ಕೆ ಸೇಡಿಯಾಪು ಪ್ರಶಸ್ತಿಗೆ ಡಾ.ಶ್ರೀಕೃಷ್ಣ ಭಟ್, ಪ್ರೊ.ಶೇಷ ಶಾಸ್ತ್ರಿ ಆಯ್ಕೆ](https://www.varthabharati.in/sites/default/files/images/articles/2021/08/30/304623-1630334759.jpg)
ಡಾ.ಶ್ರೀಕೃಷ್ಣ ಭಟ್, ಪ್ರೊ.ಶೇಷ ಶಾಸ್ತ್ರಿ
ಉಡುಪಿ, ಆ.30: ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ವಿದ್ವಾಂಸರಿಗೆ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ನೀಡುವ ಪ್ರಶಸ್ತಿಗೆ ಡಾ.ಪಿ.ಶ್ರೀಕೃಷ್ಣ ಭಟ್ ಕಾಸರಗೋಡು (2020) ಹಾಗೂ ಪ್ರೊ. ಆರ್.ಶೇಷ ಶಾಸ್ತ್ರಿ (2021) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಕನ್ನಡದ ಖ್ಯಾತ ಭಾಷಾ ವಿದ್ವಾಂಸರಾಗಿದ್ದ ಸೇಡಿಯಾಪು ಕೃಷ್ಣ ಭಟ್ರ ನೆನಪಿನಲ್ಲಿ ಕೇಂದ್ರದ ವತಿಯಿಂದ ನೀಡಲಾಗುತ್ತಿರುವ ಪ್ರಶಸ್ತಿಯನ್ನು ಶೀಘ್ರವೇ ಉಡುಪಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಡಾ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಪಿ.ಶ್ರೀಕೃಷ್ಣ ಭಟ್ ಕಾಸರಗೋಡು: 2020ನೇ ಸಾಲಿನ ಸೇಡಿಯಾಪು ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಪಿ.ಶ್ರೀಕೃಷ್ಣ ಭಟ್, ಕಾಸರಗೋಡಿನ ಪುತ್ರೋಡಿ, ಕಂಬ್ಡಾಜೆ ಗ್ರಾಮದಲ್ಲಿ 1942ರಲ್ಲಿ ಜನಿಸಿದರು. ರಾಷ್ಟ್ರ ಭಾಷಾ (ಹಿಂದಿ) ಪ್ರವೀಣರಾಗಿ, ಹಿಂದಿ ಪ್ರಚಾರಕರಾಗಿ ಕರ್ತವ್ಯ ನಿರ್ವಹಿಸಿ, ಬಳಿಕ ಬಿ.ಎ ಕನ್ನಡ ಪದವಿ ಹಾಗೂ 1969ರಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. 1988ರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಮೈಸೂರು ವಿವಿ ಯಿಂದ ಪಿಎಚ್ಡಿ ಪದವಿ ಗಳಿಸಿದ್ದಾರೆ.
1964ರಿಂದ ಶಾಲಾ/ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಉಪನ್ಯಾಸಕ, ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿ ಸುಮಾರು 27 ಪಿಎಚ್ಡಿ ಹಾಗೂ ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಶಾಸನಗಳು ಮತ್ತು ವೀರಗಲ್ಲುಗಳು, ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕೃತದ ಪ್ರಭಾವ, ಶಾಸ್ತ್ರಸಾಹಿತ್ಯ ವಿಹಾರ, ಅವಲೋಕನ ಇವರ ಪ್ರಕಟಿತ ಕೃತಿಗಳು. ಡಿವಿಜಿ ದರ್ಶನ, ಚಂದ್ರಗಿರಿ, ಪೊಂಗದಿರು, ಗಡಿನಾಡ ದೀಪ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.
ಡಾ.ಆರ್.ಶೇಷ ಶಾಸ್ತ್ರಿ: ಅನಂತಪುರದ ಶ್ರೀಕೃಷ್ಣದೇವರಾಯ ವಿವಿಯಲ್ಲಿ ತೆಲುಗು ಮತ್ತು ತೌಲನಿಕ ಸಾಹಿತ್ಯ ವಿಭಾಗದಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದ ಡಾ.ಆರ್.ಶೇಷಶಾಸ್ತ್ರಿ ಅವರು ನಿವೃತ್ತರಾದ ಮೇಲೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕದ ವೀರಗಲ್ಲುಗಳ ಮೇಲೆ ಸಂಶೋಧನೆಗಾಗಿ ಪಿಎಚ್ಡಿ ಪಡೆದಿದ್ದಾರೆ.
ಪ್ರೊ. ಶಾಸ್ತ್ರಿ ಅವರು ಶಾಸನ ಶಾಸ್ತ್ರ, ಗ್ರಂಥಲಿಪಿ ಶಾಸ್ತ್ರ, ಜಾನಪದ, ಕನ್ನಡ ಸಾಹಿತ್ಯ ಚರಿತ್ರೆ ಮುಂತಾದ ಹಲವು ವಿಷಯಗಳನ್ನು ಬೋಧಿಸಿ ದ್ದಾರೆ. ಸಂಶೋಧಕರಾಗಿಯೂ ಅಪಾರ ಅನುಭವ ಪಡೆದಿದ್ದಾರೆ. ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರ, ಪ್ರಾಚೀನ ದಕ್ಷಿಣ ಭಾರತದ ಕೃಷಿ ಚರಿತ್ರೆಯನ್ನು ರಚಿಸುವಲ್ಲಿ ಐಸಿಎಆರ್, ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನ ವಿಭಾಗ, ಕರ್ನಾಟಕ ಗಜೆಟಿಯರ್ ಮುಂತಾದ ಯೋಜನೆಗಳಲ್ಲಿ ಹೊಣೆಗಾರಿಕೆಯ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಕುಪ್ಪಂನ ದ್ರಾವೇಡಿಯನ್ ವಿವಿಯ ಕನ್ನಡ ಮತ್ತು ಅನುವಾದ ವಿಭಾಗದ ಮುಖ್ಯಸ್ಥರಾಗಿ ಡಾ. ಶಾಸ್ತ್ರಿ ಕಾರ್ಯ ನಿರ್ವಹಿಸಿದ್ದಾರೆ. ಶಾಸನ ಪರಿಚಯ, ಕಲಾ ಪೂರ್ಣೋದಯ, ಆಂಧ್ರದ ಸಾಮಾಜಿಕ ಇತಿಹಾಸ, ಹಂಪಿಯಿಂದ ಹರಪ್ಪವರೆಗೆ ಅವರ ಮುಖ್ಯ ಕೃತಿಗಳು. ಅಲ್ಲದೆ ಚಿದಾನಂದ ಕಿರಣ, ಆಂಧ್ರ ಪ್ರದೇಶದ ಕನ್ನಡ ಶಾಸನಗಳು, ಶಾಸನ ಸಂಗ್ರಹ ಅವರ ಸಂಪಾದಿತ ಕೃತಿಗಳು. ಡಾ.ಬಿ.ಆರ್. ಗೋಪಾಲ್ ಪ್ರಶಸ್ತಿ, ಎಂ. ಮರಿಯಪ್ಪ ಭಟ್ ಪ್ರಶಸ್ತಿ, ತಾಳ್ತಜೆ ಕೇಶವ ಭಟ್ ಪ್ರಶಸ್ತಿ, ಟಿ. ವೆಂಕಟಾಚಲಶಾಸ್ತ್ರಿ ವಿದ್ವತ್ ಪ್ರಶಸ್ತಿ, ಡಾ. ಬಿ.ಎನ್.ಶಾಸ್ತ್ರಿ ಶಾಸನ ಪರಿಶೋಧಕ ಪ್ರಶಸ್ತಿ ಪುರಸ್ಕಾರಗಳು ದೊರಕಿವೆ.