ನೂತನ ಶಿಕ್ಷಣ ನೀತಿಯ ಉದ್ಘಾಟನಾ ಕಾರ್ಯಕ್ರಮ ವಿರೋಧಿಸಿ ಬಂಧನಕ್ಕೊಳಗಾಗಿದ್ದ ಸಿಎಫ್ಐ ಕಾರ್ಯಕರ್ತರ ಬಿಡುಗಡೆ
![ನೂತನ ಶಿಕ್ಷಣ ನೀತಿಯ ಉದ್ಘಾಟನಾ ಕಾರ್ಯಕ್ರಮ ವಿರೋಧಿಸಿ ಬಂಧನಕ್ಕೊಳಗಾಗಿದ್ದ ಸಿಎಫ್ಐ ಕಾರ್ಯಕರ್ತರ ಬಿಡುಗಡೆ ನೂತನ ಶಿಕ್ಷಣ ನೀತಿಯ ಉದ್ಘಾಟನಾ ಕಾರ್ಯಕ್ರಮ ವಿರೋಧಿಸಿ ಬಂಧನಕ್ಕೊಳಗಾಗಿದ್ದ ಸಿಎಫ್ಐ ಕಾರ್ಯಕರ್ತರ ಬಿಡುಗಡೆ](https://www.varthabharati.in/sites/default/files/images/articles/2021/08/30/304643-1630339497.jpeg)
ಮಂಗಳೂರು, ಆ.30: ನೂತನ ಶಿಕ್ಷಣ ನೀತಿ (ಎನ್ಇಪಿ)ಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸೋಮವಾರ ಮಂಗಳೂರು ವಿವಿಗೆ ಆಗಮಿಸಿದ ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ವಿರುದ್ಧ ಪ್ರತಿಭಟನೆ ನಡೆಸಿ ಪೊಲೀಸರ ವಶವಾಗಿದ್ದ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಸಂಜೆಯ ವೇಳೆಗೆ ಬಿಡುಗಡೆಗೊಂಡಿದ್ದಾರೆ.
ಕೊಣಾಜೆಯ ಮಂಗಳ ಗಂಗೋತ್ರಿಯಲ್ಲಿರುವ ಮಂಗಳೂರು ವಿವಿ ಮಂಗಳಾ ಸಭಾಂಗಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದರು.
ಮಂಗಳಾ ಸಭಾಂಗಣದಲ್ಲಿ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಸಿಎಫ್ಐ ಕಾರ್ಯಕರ್ತರು ಸಭಾಂಗಣದ ಮುಂದಿನ ದ್ವಾರದ ಬಳಿ ಪ್ರತಿಭಟನೆಗೆ ಮುಂದಾಗಿದ್ದರು. ತಕ್ಷಣ ಪೊಲೀಸರು ಕಾರ್ಯಕರ್ತರನ್ನು ತಡೆದಿದ್ದು, ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು. ಇದರ ಮಧ್ಯೆಯೇ 24 ವಿದ್ಯಾರ್ಥಿನಿಯರು ಮತ್ತು 51 ವಿದ್ಯಾರ್ಥಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ವೇಳೆ ಪೊಲೀಸರು ಮತ್ತು ಸಿಎಫ್ಐ ಕಾರ್ಯಕರ್ತರ ಮಧ್ಯೆ ನೂಕಾಟ, ತಳ್ಳಾಟ ನಡೆದಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಕೆಲಕಾಲ ಹರಸಾಹಸಪಟ್ಟರು.
ಪ್ರತಿಭಟನೆಯ ನೇತೃತ್ವವನ್ನು ಸಿ ಎಫ್ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ರಾಜ್ಯ ಸಮಿತಿಯ ಸದಸ್ಯೆಯರಾದ ಮುರ್ಶಿದಾ ಬಾನು ಮಲಾರ್, ಫಾತಿಮಾ ಉಸ್ಮಾನ್ ಕಾವಳಕಟ್ಟೆ, ದ.ಕ. ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ಮಂಗಳೂರು ನಗರಾಧ್ಯಕ್ಷ ಇನಾಯತ್ ಅಲಿ, ಗ್ರಾಮಾಂತರ ಅಧ್ಯಕ್ಷ ಶರಫುದ್ದೀನ್ ವಹಿಸಿದ್ದರು.
ಪೊಲೀಸರ ಸರ್ಪಗಾವಲು ಭೇದಿಸಿದ ವಿದ್ಯಾರ್ಥಿಗಳು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಸಚಿವರಿಗೆ ಸಿಎಫ್ಐ ಕಾರ್ಯಕರ್ತರು ಘೆರಾವ್ ಹಾಕುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಮಂಗಳಾ ಸಭಾಂಗಣದತ್ತ ತೆರಳುವ ಎಲ್ಲಾ ರಸ್ತೆಯನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದರು. ಅಲ್ಲದೆ ಕೊಣಾಜೆ, ಹರೇಕಳ, ಪಾವೂರು, ಪಜೀರ್, ಬೋಳಿಯಾರ್ ಗ್ರಾಮಗಳಿಗೆ ತೆರಳುವ ಬಸ್ ಸಹಿತ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರು. ಆದಾಗ್ಯೂ ಸಿಎಫ್ಐ ಕಾರ್ಯಕರ್ತರು ಪೊಲೀಸರ ಕಣ್ತಪ್ಪಿಸಿ ಸರ್ಪಗಾವಲು ಭೇದಿಸಿ ಸಭಾಂಗಣದ ಮುಂದೆ ದಿಢೀರ್ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಪೊಲೀಸರು ಕಾರ್ಯಕರ್ತರನ್ನು ತಡೆಯಲು ಯತ್ನಿಸಿದಾಗ ವಾಗ್ವಾದ, ತಳ್ಳಾಟ ನಡೆಯಿತು.
''ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವುದನ್ನು ಸಿಎಫ್ಐ ಸಹಿಸವುದಿಲ್ಲ. ವಿದ್ಯಾರ್ಥಿ ಮುಖಂಡರಲ್ಲಿ ಅಥವಾ ಸಂಘಟನೆಗಳಲ್ಲಿ ಅಭಿಪ್ರಾಯ ಸಂಘ್ರಹಿಸದೆ ಎನ್ಇಪಿ ಜಾರಿಗೆ ತರಲಾಗಿದೆ. ಉನ್ನತ ಶಿಕ್ಷಣ ಸಚಿವರು ವಿದ್ಯಾರ್ಥಿ ಸಂಘಟನೆಗಳ ಅಭಿಪ್ರಾಯಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು''.
- ಅಥಾವುಲ್ಲಾ ಪೂಂಜಲಕಟ್ಟೆ, ರಾಜ್ಯಾಧ್ಯಕ್ಷ ಕ್ಯಾಂಪಸ್ ಫ್ರಂಟ್ ಕರ್ನಾಟಕ