ನಂದಳಿಕೆ: ಸಚಿವರ ಜನಸ್ಪಂದನ

ಕಾರ್ಕಳ: ನನ್ನ ಸಚಿವ ಸ್ಥಾನದ ಇಲಾಖೆಯನ್ನು ಸಶಸ್ತೀಕರಣಗೊಳಿಸುವ ಸರ್ವ ಪ್ರಯತ್ನ ನಡೆಸುತ್ತೇನೆ, ಇಡೀ ರಾಜ್ಯಕ್ಕೆ ಹಾಗೂ ವಿಶೇಷವಾಗಿ ಕಾರ್ಕಳ ಕ್ಷೇತ್ರಕ್ಕೆ ಒಳ್ಳೆಯ ಅಭಿವೃದ್ದಿ ಕಾರ್ಯವನ್ನು ಮಾಡುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಅವರು ನಂದಳಿಕೆ ಗ್ರಾಮ ಪಂಚಾಯತ್ ವತಿಯಿಂದ ನಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಸಚಿವರ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲಾಖೆಯಲ್ಲಿ ಹತ್ತಾರು ಸವಾಲುಗಳಿದ್ದು ಸಮಸ್ಯೆಗಳಿಗೆ ಮುಕ್ತಿ ನೀಡುವಲ್ಲಿ ಪ್ರಯತ್ನಿಸುತ್ತೇನೆ. ಜನತೆಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಕಾರ್ಕಳ ಹಾಗೂ ಹೆಬ್ರಿ ತಾಲೂಕನ್ನು ಒಂದಾಗಿಸಿ ಪ್ರತ್ಯೇಕ ಡಿವಿಜನ್ ಮಾಡಲಾಗುತ್ತದೆ. ಇದರಿಂದ ವಿದ್ಯುತ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲು ಸಾಧ್ಯವಾಗುತ್ತದೆ ಎಂದ ಅವರು, ನಂದಳಿಕೆ ಗ್ರಾಮ ಪಂಚಾಯತ್ನಲ್ಲಿ ಹಲವಾರು ಬೇಡಿಕೆಗಳಿದ್ದು ಪಂಚಾಯತ್ಗೆ ನೂತನ ಕಟ್ಟಡದ ಅವಶ್ಯಕತೆಯಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಪಂಚಾಯತ್ ಅಧ್ಯಕ್ಷರು ಹಾಗೂ ಮಾರ್ಗದರ್ಶಕರು ಸರಿಯಾದ ಸ್ಥಳವನ್ನು ಗುರುತಿಸಿದಲ್ಲಿ ನೂತನ ಕಟ್ಟಡಕ್ಕೆ ಸಚಿವನಾಗಿ ಅನುದಾನವನ್ನು ನೀಡುತ್ತೇನೆ ಎನ್ನುವ ಭರವಸೆಯನ್ನು ನೀಡಿದರು.
ಇದೇ ಸಂದರ್ಭ ಗ್ರಾಮಸ್ಥರು ವಿವಿಧ ಬೇಡಿಕೆಯನ್ನಿಟ್ಟು ಸಚಿವರಿಗೆ ಮನವಿಯನ್ನು ಸಲ್ಲಿಸಿದರು. ನಂದಳಿಕೆ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ ವತಿಯಿಂದ ವರ ಕವಿ ಮುದ್ದಣನ ಹೆಸರಿನಲ್ಲಿ ಸ್ಮಾರಕ ಭವನ, ಸಾಂಸ್ಕೃತಿಕ ಭವನ ಹಾಗೂ ಕ್ರೀಡಾಂಗಣ, ವ್ಯಾಯಾಮ ಶಾಲೆ, ಸಾರ್ವಜನಿಕ ಗ್ರಂಥಾಲಯ ಹಾಗೂ ನಂದಳಿಕೆ ಗ್ರಾ.ಪಂ ಕಛೇರಿ ನಿರ್ಮಾಣದ ಕುರಿತು ಮನವಿ ಸಲ್ಲಿಸಲಾಯಿತು. ಇನ್ನು ಉಳಿದಂತೆ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಯ ಬೇಡಿಕೆಯ ಮನವಿ ಸಲ್ಲಿಸಲಾಯಿತು. ಪಂಚಾಯತ್ ವತಿಯಿಂದ ಸಚಿವರನ್ನು ಗೌರವಿಸಲಾಯಿತು.
ನಂದಳಿಕೆ ಗ್ರಾ.ಪಂ. ಅಧ್ಯಕ್ಷ ನಿತ್ಯಾನಂದ ಅಮೀನ್ ಅಧ್ಯಕ್ಷತೆ ವಹಿಸಿದ್ದು, ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಮುಂಬೈ ಉದ್ಯಮಿ ಕೃಷ್ಣ ವೈ ಶೆಟ್ಟಿ ಕಾಪಿಕೆರೆ, ಎಪಿಎಂಸಿ ಅಧ್ಯಕ್ಷ ರತ್ನಾಕರ ಅಮೀನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪ ಸತೀಶ್ ಪೂಜಾರಿ, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ತಾ. ಕಾರ್ಯನಿರ್ವಹಣಾಕಾರಿ ಗುರುದತ್ತ್ , ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ, ನಂದಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪ ಮತ್ತಿತರಿದ್ದರು. ನಂದಳಿಕೆ ಗ್ರಾ.ಪಂ. ಅಧ್ಯಕ್ಷ ನಿತ್ಯಾನಂದ ಅಮೀನ್ ಸ್ವಾಗತಿಸಿ, ಪಿಡಿಒ ಶಂಕರ್ ವಂದಿಸಿದರು.ಸಂದೀಪ್ ಅಬ್ಬನಡ್ಕ ಕಾರ್ಯಕ್ರಮ ನಿರೂಪಿಸಿದರು.
ವಿಜಯಲಕ್ಷ್ಮಿ ಕಟೀಲು ಸಚಿವರ ಬಗ್ಗೆ ಬರೆದ ಕವನವನ್ನು ಸಚಿತ್ ನಂದಳಿಕೆ ಬಳಗವದವರು ವಾಚಿಸಿದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.







