ಪಡಿತರ ಚೀಟಿದಾರರ ಇ-ಕೆವೈಸಿಗೆ ಅಂತಿಮ ಅವಕಾಶ
ಮಂಗಳೂರು, ಆ.31: ಪಡಿತರ ಚೀಟಿದಾರರು ಇದೇ ಸೆಪ್ಟಂಬರ್ ತಿಂಗಳಲ್ಲಿ ಇ-ಕೆವೈಸಿ ಮಾಡಬಹುದಾಗಿದೆ. ಇದು ಕೊನೆಯ ಅವಕಾಶ ವಾಗಿದ್ದು, ನಂತರ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರ ತಡೆಹಿಡಿಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಇದೇ ಸೆ.1ರಿಂದ 10ವರೆಗೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿ ನಡೆಸಲಾಗುತ್ತಿದೆ. ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಇ-ಕೆವೈಸಿ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್ಪಿಜಿ ದಾಖಲೆ, ಜಾತಿ ಪ್ರಮಾಣ ಪತ್ರ(ಇದ್ದಲ್ಲಿ), ಆದಾಯ ಪ್ರಮಾಣ ಪತ್ರ, ಎಂಡೋಸಲ್ಫಾನ್ ಪೀಡಿತರಂತಹ ವಿಶೇಷ ವರ್ಗದವರು ಹೊಂದಿರುವ ದೃಢಪತ್ರಗಳಿದ್ದಲ್ಲಿ ಅವುಗಳೊಂದಿಗೆ ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು.
2020ರ ಫೆಬ್ರವರಿ ನಂತರ ವಿತರಿಸಿರುವ ಹೊಸ ಹಾಗೂ ತಿದ್ದುಪಡಿ ಮಾಡಲಾದ ಪಡಿತರ ಚೀಟಿಗಳನ್ನು ಬಿಟ್ಟು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಅಂತ್ಯೋದಯ, ಆದ್ಯತಾ (ಬಿಪಿಎಲ್) ಹಾಗೂ ಆದ್ಯತೇತರ ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿಲ್ಲ. ಇದನ್ನು ಉಚಿತವಾಗಿ ಮಾಡಲಾಗುತ್ತಿದ್ದು, ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರು ಸಹರಿಸಬೇಕು.
ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ ಕೇಳಿದಲ್ಲಿ ಅಥವಾ ಏನಾದರೂ ದೂರುಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲೂಕುಗಳ ತಹಶೀಲ್ದಾರರು ಮತ್ತು ಮಂಗಳೂರಿನ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.