ಪುತ್ತೂರು: ಯುವಕನಿಗೆ ಹಲ್ಲೆ; ದೂರು
![ಪುತ್ತೂರು: ಯುವಕನಿಗೆ ಹಲ್ಲೆ; ದೂರು ಪುತ್ತೂರು: ಯುವಕನಿಗೆ ಹಲ್ಲೆ; ದೂರು](https://www.varthabharati.in/sites/default/files/images/articles/2021/09/1/304893-1630513037.jpg)
ಪುತ್ತೂರು: ಶೇರ್ ಚಾಟ್ನಲ್ಲಿ ಪರಿಚಯವಾದ ಪುತ್ತೂರಿನ ಯುವತಿಯೊಬ್ಬಳನ್ನು ಭೇಟಿಯಾಗಲೆಂದು ರಾಯಚೂರಿನಿಂದ ಬುಧವಾರ ಮದ್ಯಾಹ್ನ ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ ಆಗಮಿಸಿ ಯುವತಿಯೊಂದಿಗೆ ಮಾತನಾಡುತ್ತಿದ್ದ ರಾಯಚೂರಿನ ಯುವಕನೊಬ್ಬನಿಗೆ ಹಲ್ಲೆ ನಡೆಸಿರುವುದಾಗಿ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದದ್ದಲ ಗ್ರಾಮದ ನಿವಾಸಿ ಹನುಮಂತರಾಯ(19) ಎಂಬ ಯುವಕನಿಗೆ ಶೇರ್ ಚಾಟ್ ಮೂಲಕ ಕಳೆದ 6 ತಿಂಗಳ ಹಿಂದೆ ಪುತ್ತೂರಿನ ಯುವತಿಯ ಪರಿಚಯವಾಗಿತ್ತು. ಬಳಿಕ ಅವರಿಬ್ಬರೂ ದೂರವಾಣಿ ಮತ್ತು ಮೆಸೇಜ್ ಮೂಲಕ ಸಂಪರ್ಕದಲ್ಲಿದ್ದರು. ಹನುಮಂತರಾಯ ಈ ಯುವತಿಯನ್ನು ಭೇಟಿಯಾಗಲೆಂದು ಪುತ್ತೂರಿಗೆ ತನ್ನ ಸ್ನೇಹಿತ ಚೌಡಯ್ಯ ಎಂಬ ಯುವಕನೊಂದಿಗೆ ಪುತ್ತೂರಿಗೆ ಆಗಮಿಸಿದ್ದು, ಯುವತಿ ಅದೇ ಸಮಯದಲ್ಲಿ ತನ್ನ ಸ್ನೇಹಿತೆಯೊಂದಿಗೆ ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ ಆಗಮಿಸಿದ್ದಳು. ನಾಲ್ವರೂ ಬಸ್ಸು ನಿಲ್ದಾಣದಲ್ಲಿ ಮಾತುಕತೆ ನಡೆಸುತ್ತಿದ್ದ ವೇಳೆಯಲ್ಲಿ ಅಪರಿಚಿತ ಐದಾರು ಮಂದಿ ಯುವಕರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಹನುಮಂತರಾಯ ದೂರಿನಲ್ಲಿ ಆರೋಪಿಸಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.