ಸಮಾಜಘಾತುಕ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರಿಗೆ ಡಿವೈಎಫ್ ಐ ಮನವಿ
![ಸಮಾಜಘಾತುಕ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರಿಗೆ ಡಿವೈಎಫ್ ಐ ಮನವಿ ಸಮಾಜಘಾತುಕ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರಿಗೆ ಡಿವೈಎಫ್ ಐ ಮನವಿ](https://www.varthabharati.in/sites/default/files/images/articles/2021/09/1/304939-1630520536.jpg)
ಕೊಣಾಜೆ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಹರೇಕಳ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಳ್ಳತನ ಪ್ರಕರಣ ನಿರಂತರವಾಗಿ ಹೆಚ್ಚುತ್ತಿದೆ ಅಲ್ಲದೆ ಗಾಂಜಾ ಸೇವನೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿದ್ದು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸಮಾಜಘಾತುಕ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಡಿವೈಎಫ್ ಐ ಘಟಕವು ಕೊಣಾಜೆ ಪೊಲೀಸರಿಗೆ ಮನವಿ ಸಲ್ಲಿಸಿತು.
ಇತ್ತೀಚೆಗೆ ನ್ಯೂ ಪಡ್ಪು ಜಂಕ್ಷನ್ ನಲ್ಲಿ ಮಹಿಳೆಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಸರ ಕಳ್ಳತನ ಹಾಗೂ ತಿಂಗಳ ಹಿಂದೆ ಕಡವಿನ ಬಳಿ ಗೂಡಂಗಡಿಯಿಂದ 52000/- ನಗದನ್ನು ದೋಚಿದ ಘಟನೆಗಳು ಪ್ರದೇಶದ ಜನರ ಆತಂಕವನ್ನು ಹೆಚ್ಚಿಸಿದೆ. ಈ ಎರಡೂ ಘಟನೆಗಳು ಹಾಡುಹಗಲೇ ನಡೆದಿರೋದರಿಂದ ಮಹಿಳೆಯರು, ಜನಸಾಮಾನ್ಯರು ನಿರ್ಭೀತವಾಗಿ ಓಡಾಟ ನಡೆಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಹಲವು ಕಳ್ಳತನ ಪ್ರಕರಣದ ವಿರುದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ತಪ್ಪಿತಸ್ಥರನ್ನು ಬಂಧಿಸಲು ಈವರೆಗೂ ಸಾಧ್ಯವಾಗಿಲ್ಲ. ಇದರಿಂದಾಗಿ ಕಳ್ಳತನ ನಡೆಸುವವರು ಕಾನೂನು ಸುವ್ಯವಸ್ಥೆಯ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಕಳ್ಳತನ ನಡೆಸುತ್ತಿದ್ದಾರೆ. ಕೊರೋನ, ಲಾಕ್ ಡೌನ್ ನಂತರ ಪ್ರದೇಶದಲ್ಲಿ ಸರ ಕಳ್ಳತನ, ಗಾಂಜಾ ಸೇವನೆ ಇನ್ನಿತರ ಸಮಾಜ ಘಾತುಕ ಚಟುವಟಿಕೆಗಳು ಹೆಚ್ಚಾಗಿದ್ದು ಸಣ್ಣ ಪ್ರಾಯದ ಯುವಕರೇ ಬಲಿಯಾಗುತ್ತಿದ್ದಾರೆ. ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿ ತಪ್ಪಿಸ್ಥರ ವಿರುದ್ಧ ಕಠಿಣ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕು. ನಿಷೇಧಿತ ಅಮಲು ಪದಾರ್ಥ ಸೇವನೆ ಸಹಿತ ಇತರೆ ಸಮಾಜ ಘಾತುಕ ಚಟುವಟಿಕೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ ಐ ಮನವಿಯಲ್ಲಿ ಒತ್ತಾಯಿಸಿದೆ.