ಮಂಗಳೂರು: ವಿಮಾನ ಯಾನ ಪ್ರಯಾಣಿಕರ ಪ್ರಮಾಣದಲ್ಲಿ ಏರಿಕೆ
![ಮಂಗಳೂರು: ವಿಮಾನ ಯಾನ ಪ್ರಯಾಣಿಕರ ಪ್ರಮಾಣದಲ್ಲಿ ಏರಿಕೆ ಮಂಗಳೂರು: ವಿಮಾನ ಯಾನ ಪ್ರಯಾಣಿಕರ ಪ್ರಮಾಣದಲ್ಲಿ ಏರಿಕೆ](https://www.varthabharati.in/sites/default/files/images/articles/2021/09/2/304979-1630579517.jpg)
ಮಂಗಳೂರು, ಸೆ. 2: ವಿವಿಧ್ಯ ರಾಜ್ಯಗಳೊಂದಿಗೆ ವಿಮಾನ ಯಾನ ಪುನರಾರಂಭಗೊಂಡಿರುವಂತೆಯೇ ಆಗಸ್ಟ್ ತಿಂಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಕೋವಿಡ್ ಆತಂಕದ ನಡುವೆಯೂ, ಜುಲೈ ತಿಂಗಳಿಗೆ ಹೋಲಿಸಿದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನಿ ನಿಲ್ದಾಣದಿಂದ ದೇಶದ ವಿವಿಧ ರಾಜ್ಯಗಳಿಗೆ ಆಗಸ್ಟ್ ತಿಂಗಳಲ್ಲಿ 26,067 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಕಳೆದ ಜುಲೈನಲ್ಲಿ ಈ ಸಂಖ್ಯೆ 18,557 ಆಗಿದ್ದು, ಈ ಮೂಲಕ ವಿಮಾನ ಯಾನ ಪ್ರಯಾಣಿಕರ ನಿರ್ಗಮನ ಪ್ರಮಾಣದಲ್ಲಿ ಶೇ.40ರಷ್ಟು ಏರಿಕೆ ಕಂಡು ಬಂದಿದೆ. ಇದೇ ವೇಳೆ ಆಗಸ್ಟ್ನಲ್ಲಿ ವಿವಿಧ ರಾಜ್ಯಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 26732 ಪ್ರಯಾಣಿಕರು ಬಂದಿಳಿದಿದ್ದರೆ, ಜುಲೈನಲ್ಲಿ ಈ ಸಂಖ್ಯೆ 19744 ಆಗಿತ್ತು.
ಭಾರತದೊಳಗೆ ಮತ್ತು ವಿದೇಶಗಳ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿರುವುದರಿಂದ ವಿವಿಧ ವಿಮಾನ ಯಾನ ಸಂಸ್ಥೆಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ವಿಮಾನಯಾನವನ್ನು ಪುನರಾರಂಭಿಸಿರುವುದು ಈ ಆರೋಗ್ಯಕರ ಪ್ರಯಾಣಿಕರ ದಟ್ಟಣೆಗೆ ಕಾರಣವಾಗಿದೆ. ಈ ತಿಂಗಳಿನಿಂದ ಹಲವಾರು ಹಬ್ಬಗಳು ನಡೆಯಲಿರುವುದರಿಂದ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
ಏರ್ ಇಂಡಿಯಾ ಪ್ರತಿನಿತ್ಯ ಮುಂಬೈ ಮತ್ತು ಕೊಯಮತ್ತೂರಿಗೆ ತನ್ನ ವಿಮಾನಗಳ ಹಾರಾಟ ಸಂಖ್ಯೆಯನ್ನು ಹೆಚ್ಚಿಸಿದ್ದು, ಅದರ ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ಆಗಸ್ಟ್ನಲ್ಲಿ ಮಧ್ಯಪ್ರಾಚ್ಯದ ವಿವಿಧ ನಗರಗಳಿಗೆ ವಿಮಾನ ಹಾರಾಟವನ್ನು ಆರಂಭಿಸಿದೆ.
ಯುಎಇ ಸರಕಾರವು ತನ್ನ ದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಿದ ಬಳಿಕ ಇಂಡಿಗೋ ಸಂಸ್ಥೆ ಶಾರ್ಜಾಗೆ ತನ್ನ ವಿಮಾನಯಾನ ಪುನರಾರಂಭಿಸಿದೆ. ಇದೇ ವೇಳೆ ಭಾರತಾದ್ಯಂತ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಇಂಡಿಗೋ ಹೈದಾರಾಬಾದ್ಗೆ ಹೆಚ್ಚುವರಿ ವಿಮಾನ ಹಾರಾಟ ಆರಂಭಿಸಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರ ಸಂಖ್ಯೆ ಸುಧಾರಣೆಯಾದ ಕಾರಣ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಬುಧಾಬಿಗೆ ತನ್ನ ವಿಮಾನ ಹಾರಾಟವನ್ನು ಪುನರಾರಂಭಿಸಿದೆ.
ಇದಲ್ಲದೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ರ್ಯಾಪಿಡ್ ಆರ್ಟಿ-ಪಿಸಿಆರ್ ಸೌಲಭ್ಯದೊಂದಿಗೆ ಹೆಚ್ಚಿನ ವಿಮಾನ ನಿಲ್ದಾಣಗಳು ಯಾನಕ್ಕೆ ಅವಕಾಶ ಕಲ್ಪಿಸುವುದರಿಂದ ಮುಂಬರುವ ವಾರಗಳಲ್ಲಿ ಪ್ರಯಾಣಿಕರ ಹರಿವು ಸುಧಾರಿಸುವ ನಿರೀಕ್ಷೆಯಿದೆ. ಅಪೋಲೋ ಡಯಾಗ್ನಾಸ್ಟಿಕ್ಸ್ನ ಸಹಯೋಗದೊಂದಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ರ್ಯಾಪಿಡ್ ಆರ್ಟಿಪಿಸಿಆರ್ ಸೌಲಭ್ಯ ಆರಂಭಿಸಲಾಗಿದೆ. ಯುಎಇ ಸರಕಾರದ ಆರೋಗ್ಯ ಬೇಡಿಕೆಗಳಂತೆ ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರಯಾಣಿಕರೂ ವಿಮಾನ ಹತ್ತುವ ಮೊದಲು ಆತನ ಗಮ್ಯ ಸ್ಥಾನಕ್ಕೆ ಪೂರಕವಾಗಿ ಆರು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ಆರ್ಟಿಪಿಸಿಆರ್ ವರದಿಯನ್ನು ಪಡೆಯಬೇಕಾಗಿದೆ.
ಆಗಸ್ಟ್ನಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಬುಧಾಬಿ, ದುಬೈ, ತಿರುವನಂತಪುರಕ್ಕೆ ವಿಮಾನ ಯಾನ ನಡೆಸಿದೆ. ಇಂಡಿಗೋ ಹೈದರಾಬಾದ್ ಮತ್ತು ಶಾರ್ಜಾ, ಏರ್ ಇಂಡಿಯಾ ಮುಂಬೈ ಮತ್ತು ಕೊಯಮತ್ತೂರಿಗೆ ಪ್ರತಿನಿತ್ಯದ ಯಾನ ಆರಂಭಿಸಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸರಕಾರ ಜಾರಿಗೊಳಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜತೆಗೆ ಇತರ ಹಲವಾರು ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.