2021ನೇ ಸಾಲಿನ ಸಲ್ ಸಬೀಲ್ ಎಕ್ಸೆಲೆನ್ಸ್ ಪ್ರಶಸ್ತಿಗೆ ಶಿಕ್ಷಕಿ ಪ್ರೇಮಾ ಐವರ್ನಾಡು ಆಯ್ಕೆ

ಬಂಟ್ವಾಳ, ಸೆ.3: ಪಾಣೆಮಂಗಳೂರು ಸಲ್ ಸಬೀಲ್ ವಿದ್ಯಾರ್ಥಿ ಸಂಘಟನೆ ವತಿಯಿಂದ ನೀಡಲಾಗುವ 2021ನೇ ಸಾಲಿನ ಸಲ್ ಸಬೀಲ್ ಎಕ್ಸೆಲೆನ್ಸ್ ಪ್ರಶಸ್ತಿಗೆ ಸುಳ್ಯ ಐವರ್ನಾಡು ಪದವಿ ಪೂರ್ವ ಕಾಲೇಜು ಸಹ ಶಿಕ್ಷಕಿ ಪ್ರೇಮ ಉದಯ ಕುಮಾರ್ ರವರು ಆಯ್ಕೆಯಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರಿಗೆ 'ಭಾರತದ ಸಾಮರಸ್ಯದ ಪರಂಪರೆಯನ್ನು ಭವಿಷ್ಯದಲ್ಲಿ ಭದ್ರಗೊಳಿಸುವ ಬಗೆ' ಎಂಬ ವಿಷಯದಲ್ಲಿ ಆನ್ಲೈನ್ ಲೇಖನ ಸ್ಪರ್ಧೆ ಆಯೋಜಿಸಿ ಅತ್ಯುತ್ತಮ ಲೇಖನಕ್ಕೆ ಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದೆ.
ಪ್ರಶಸ್ತಿ ವಿಜೇತ ಪ್ರೇಮ ಉದಯ್ ಕುಮಾರ್ ಪರಿಚಯ
ಪ್ರೇಮಾ ಉದಯ್ ಕುಮಾರ್ ಅವರು ದಿ. ರಮೇಶ್ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ಇವರ ಮಗಳಾಗಿ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಜನಿಸಿದರು. ಶ್ರೀ ಮೂಜಿಲ್ನಾಯ ಹಿರಿಯ ಪ್ರಾಥಮಿಕ ಶಾಲೆ ಈದು ಕಾರ್ಕಳ ತಾಲೂಕು ಇಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಕುದುರೆಮುಖ ಇಲ್ಲಿ ಪ್ರೌಢ ಶಿಕ್ಷಣ ಪಡೆದು ಹತ್ತನೇ ತರಗತಿಗೆ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಬಳಿಕ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತಮ್ಮ ಪಿಯುಸಿಯನ್ನು ಪೂರೈಸಿ, ಮೈಸೂರಿನ ಸುಪ್ರಸಿದ್ಧ ಮಹಾರಾಣಿ ಮಹಿಳಾ ಶಿಕ್ಷಕ ಶಿಕ್ಷಣ ಸಂಸ್ಥೆಯಲ್ಲಿ ಡಿ.ಎಡ್ ಶಿಕ್ಷಣದಲ್ಲಿ ರಾಜ್ಯಕ್ಕೆ ಮೊದಲಿಗರಾಗಿ ಉತ್ತೀರ್ಣರಾಗಿ, 2004ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಶಾಲೆ ಉಳಿಬೈಲು, ಬಂಟ್ವಾಳ ತಾಲೂಕು ಇಲ್ಲಿ ವಿಜ್ಞಾನ ಶಿಕ್ಷಕರಾಗಿ ಸರಕಾರಿ ಸೇವೆಗೆ ಪಾದಾರ್ಪಣೆಗೈದರು.
ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಆಂಗ್ಲ ಭಾಷೆಯಲ್ಲಿ ಪದವಿ ಮತ್ತು ಬಿಎಡ್ ಪದವಿ ಪಡೆದರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು 2011ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು, ಸುಳ್ಯ ಇಲ್ಲಿನ ಪ್ರೌಢ ಶಾಲಾ ವಿಭಾಗಕ್ಕೆ ಆಂಗ್ಲ ಭಾಷಾ ಶಿಕ್ಷಕರಾಗಿ ಭಡ್ತಿ ಹೊಂದಿ ಕಳೆದ ಹತ್ತು ವರ್ಷಗಳಿಂದ ಇಲ್ಲೇ ಬೋಧನೆಯಲ್ಲಿ ನಿರತರಾಗಿರುವರು.
ಬೋಧನೆಯ ಜೊತೆಗೆ ಬರವಣಿಗೆ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್ ಇವರ ಹವ್ಯಾಸ. 'ನಮ್ಮ ಬಂಟ್ವಾಳ' ವಾರಪತ್ರಿಕೆ, ಡಿಜಿಟಲ್ ಪತ್ರಿಕೆಗಳಲ್ಲೂ ಪ್ರಕಟವಾದ ಬಳಿಕ ಈಗ ' ಹಾಸನವಾಣಿ' ದಿನಪತ್ರಿಕೆಯಲ್ಲಿ ಇವರ ಅಂಕಣ 'ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ' ತೊಂಭತ್ತ ನಾಲ್ಕು ವಾರಗಳಿಂದ ಪ್ರಕಟವಾಗುತ್ತಿದೆ.
ಪ್ರತಿಲಿಪಿ ಬರವಣಿಗೆಯ ಆ್ಯಪ್ ನಲ್ಲಿ ಇವರ ಬರವಣಿಗೆಗಳಿಗೆ ಇಪ್ಪತ್ತಾರು ಸಾವಿರಕ್ಕೂ ಅಧಿಕ ಓದುಗರಿರುವರು. ಪ್ರೇಮ್ಸ್ ಲಿಟರೇಚರ್ ಇವರ ಬ್ಲಾಗ್. ಇಲ್ಲಿ ಎರಡು ಸಾವಿರಕ್ಕೂ ಅಧಿಕ ಬರಹ, ಕವನ, ಗಝಲ್, ಲೇಖನ, ಕಥೆ ಮೊದಲಾದ ಸಾಹಿತ್ಯ ಪ್ರಕಾರಗಳ ಕೃಷಿ ಇವರದಾಗಿದೆ.
ತನ್ನ ಹಾಗೇ ಬೆಳೆದ ಮತ್ತು ಜೀವನದಲ್ಲಿ ಸಾಧನೆ ಮಾಡಿ ಮೆರೆದ ಸಾಧಕರ ಬಗೆಗಿನ ಲೇಖನ ಮಾಲೆ "ಯಶೋಗಾಥೆ", ಶಾಲಾ ವೃತ್ತಿ ಜೀವನದ ಅನುಭವಗಳ ಲೇಖನಮಾಲೆ "ಶಿಕ್ಷಕರ ಕಕ್ಷೆಯೊಳಗೆ". ಹೀಗೆ ಅನೇಕ ಬರಹಗಳು ಪ್ರತಿಲಿಪಿಯಲ್ಲಿ ಪ್ರಕಟವಾಗುತ್ತಿವೆ. "ಭಾವ ಜೀವದ ಯಾನ" ಇವರ ಪ್ರಕಟಿತ ಕವನ ಸಂಕಲನ. ಗಝಲ್, ಭಕ್ತಿಗೀತೆ, ಚುಟುಕು, ಅಂಕಣ ಬರಹಗಳ ಪುಸ್ತಕಗಳು ಅಚ್ಚಿನಲ್ಲಿವೆ.
ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ಇವರು ಇಪ್ಪತ್ತೈದಕ್ಕೂ ಹೆಚ್ಚು ರಾಷ್ಟ್ರ, ಅಂತರರಾಜ್ಯ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವರು. ತಮ್ಮ ಶಾಲಾ ವಿದ್ಯಾರ್ಥಿಗಳನ್ನೂ ಬರವಣಿಗೆಗೆ ಪ್ರೋತ್ಸಾಹಿಸುತ್ತಿದ್ದಾರೆ.
2011ರಲ್ಲಿ ಉದಯ್ ಕುಮಾರ್ ಅವರನ್ನು ಬಾಳ ಸಂಗಾತಿಯಾಗಿಸಿದ ಇವರಿಗೆ ದಿಯಾ ಉದಯ್ ಎಂಬ ಮಗಳಿರುವಳು.







