ಕೇರಳದವರಿಗೆ ನೆಗೆಟಿವ್ ವರದಿ, ಒಂದು ವಾರದ ಕ್ವಾರಂಟೈನ್ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ
![ಕೇರಳದವರಿಗೆ ನೆಗೆಟಿವ್ ವರದಿ, ಒಂದು ವಾರದ ಕ್ವಾರಂಟೈನ್ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ ಕೇರಳದವರಿಗೆ ನೆಗೆಟಿವ್ ವರದಿ, ಒಂದು ವಾರದ ಕ್ವಾರಂಟೈನ್ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ](https://www.varthabharati.in/sites/default/files/images/articles/2021/09/3/305178-1630682802.jpeg)
ಉಡುಪಿ, ಸೆ.3: ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ಕೇರಳದಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ 72 ತಾಸಿನ ಒಳಗಿನ ಕೋವಿಡ್ ನೆಗೆಟಿವ್ ವರದಿಯನ್ನು ತರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ.
ವಾರಾಂತ್ಯ ಕರ್ಫ್ಯೂ ಕುರಿತು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಆರ್ಟಿಪಿಸಿಆರ್ ನೆಗೆಟಿವ್ ವರದಿ ತಂದ ಬಳಿಕವೂ ಇಲ್ಲಿ ಒಂದು ವಾರ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಬೇಕು ಹಾಗೂ ಕೊನೆಗೆ ಮತ್ತೆ ಕೋವಿಡ್ ಆರ್ಟಿಪಿಸಿಆರ್ ಪರೀಕ್ಷೆಗೊಳಪಡ ಬೇಕು ಎಂದರು. ಮಹಾರಾಷ್ಟ್ರದಿಂದ ಬರುವವರಿಗೆ 72 ಗಂಟೆಯೊಳಗಿನ ಕೋವಿಡ್-19 ನೆಗೆಟಿವ್ ವರದಿ ಇದ್ದರೆ ಜಿಲ್ಲೆಯನ್ನು ಪ್ರವೇಶಿ ಸಲು ಅನುಮತಿ ನೀಡಲಾಗುತ್ತದೆ. ಅವರಿಗೆ ಕ್ವಾರಂಟೈನ್ನ ಅಗತ್ಯವಿಲ್ಲ ಎಂದು ಕೂರ್ಮಾ ರಾವ್ ಸ್ಪಷ್ಟಪಡಿಸಿದರು.
ಜಿಲ್ಲೆಗೆ ಸಾಕಷ್ಟು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ಬಳಿಕ ಪಾಸಿಟಿವ್ ವರದಿ ಬಂದ ನಂತರವೇ ಎಲ್ಲರಂತೆ ಓಡಾಬಹುದು ಎಂದು ಅವರು ತಿಳಿಸಿದರು.
ವೀಕೆಂಡ್ ಕರ್ಪ್ಯೂ ಜಾರಿ: ಸಾಕಷ್ಟು ಜನರ ಹಾಗೂ ಶಾಸಕರ ಆಕ್ಷೇಪ ಹಾಗೂ ಅಸಮಧಾನಗಳ ನಡುವೆ ಇಂದು ರಾತ್ರಿ 9 ಗಂಟೆಯಿಂದ ಜಿಲ್ಲೆಯಲ್ಲಿ ವೀಕೆಂಡ್ ಕಫ್ಯೂ ಜಾರಿಯಾಗಿದೆ. ಕಳೆದ 14 ದಿನಗಳಲ್ಲಿ ಜಿಲ್ಲೆಯ ಪಾಸಿಟಿವಿಟಿ ದರ ಶೇ.1.54 ಇದ್ದು, ಕಳೆದ 7 ದಿನಗಳಲ್ಲಿ ಇಂದು 1.27 ಆಗಿದೆ. ಆದರೂ ರಾಜ್ಯ ಸರಕಾರ ಕೆಲವು ಮಾರ್ಗಸೂಚಿಗಳ ಆಧಾರದಲ್ಲಿ ಇತರ ಮೂರು ಜಿಲ್ಲೆಗಳೊಂದಿಗೆ ಉಡುಪಿಯಲ್ಲೂ ವಾರಾಂತ್ಯ ಕರ್ಫ್ಯೂ ಹೇರಲು ನಿರ್ಧರಿಸಿದೆ. ಇದನ್ನು ನಾವು ಪಾಲಿಸಲೇ ಬೇಕಾಗಿದೆ. ಈ ಮಾರ್ಗಸೂಚಿಗಳು ಸೆ.13ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ರಾಜ್ಯದ ಪಾಸಿಟಿವಿಟಿಗೆ ಹೋಲಿಸಿದರೆ, ಜಿಲ್ಲೆಯ ಪಾಸಿಟಿವಿಟಿ ದರ ಹೆಚ್ಚಿದೆ. ಹೀಗಾಗಿ ನಾವೂ ಜಿಲ್ಲೆಯ ಪಾಸಿಟಿವಿಟಿ ದರವನ್ನು ಕಡಿಮೆಗೊಳಿಸಬೇಕಿದೆ. ಸರಕಾರದ ಹೊಸ ಕೋವಿಡ್ ಮಾನದಂಡದ ಪ್ರಕಾರ ಈ ಆದೇಶ ಜಾರಿ ಗೊಂಡಿದೆ. ಮುಂದೆ ಈ ನಿಯಮಾವಳಿ ಪರಿಷ್ಕರಣೆ ಆಗಲಿದೆ ಎಂದರು.
ವಾರಾಂತ್ಯ ಕರ್ಫ್ಯೂ ವೇಳೆ ಅಗತ್ಯ ವಸ್ತು ಮತ್ತು ಸೇವೆಗಳಿಗೆ ನಾಳೆ ಮತ್ತು ನಾಡಿದ್ದು ಬೆಳಿಗ್ಗೆ ಐದರಿಂದ ಮಧ್ಯಾಹ್ನ ಎರಡು ಗಂಟೆ ತನಕ ಕಾಲಾವಕಾಶ ಇದೆ. ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಂಡಿದ್ದು, ಹೆಚ್ಚುವರಿಯಾಗಿ ನಮ್ಮ ಜಿಲ್ಲೆಯನ್ನೂ ಸೇರಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಇದು ಜಾರಿಯಲ್ಲಿರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಪಂ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್ ಹಾಗೂ ಎಡಿಸಿ ಸದಾಶಿವ ಪ್ರಭು ಉಪಸ್ಥಿತರಿದ್ದರು.