ನಿವೃತ್ತಿ ದಿನದಂದು ಪಿಂಚಣಿ ಬಿಡುಗಡೆಗೆ ಪ್ರಯತ್ನ
ಉಡುಪಿ, ಸೆ.3: ಕಾರ್ಮಿಕರ ಭವಿಷ್ಯ ನಿಧಿ ಕಛೇರಿಯು ಒಂದು ಪ್ರಮುಖ ಉಪಕ್ರಮವಾಗಿ, ಪಿಂಚಣಿ ಯೋಜನೆ 1995ರ ಸದಸ್ಯರಿಗೆ 58 ವರ್ಷ ವಯಸ್ಸಾಗಿ ನಿವೃತ್ತಿಯ ದಿನದಂದು ಪಿಂಚಣಿ ಬಿಡುಗಡೆ ಮಾಡುವ ಪ್ರಯತ್ನ ವಾಗಿ ‘ಪ್ರಯಾಸ್’ ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಕರ್ನಾಟಕ (ಬೆಂಗಳೂರು ಹೊರತುಪಡಿಸಿ) ಮತ್ತು ಗೋವಾ ವಲಯದ ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ಮಾರುತಿ ಭೋಯಿ ಅವರು ವರ್ಚುವಲ್ ಮೀಟಿಂಗ್ ಮೂಲಕ ಪ್ರಯಾಸ್ ಯೋಜನೆಗೆ ಒತ್ತು ನೀಡಿದ್ದಾರೆ.
ಸಂಸ್ಥೆಗಳ ಉದ್ಯೋಗದಾತರು, 58 ವರ್ಷ ವಯಸ್ಸಿನಲ್ಲಿ ನಿವೃತ್ತಿಗೊಳ್ಳುತ್ತಿರುವ ಸದಸ್ಯರ ನಿವೃತ್ತಿಯ ದಿನದ ಒಂದು ತಿಂಗಳು ಮುಂಚಿತವಾಗಿ ಭವಿಷ್ಯನಿಧಿ ಅಂಶದಾನವನ್ನು ಪಾವತಿಸಲು ವಿನಂತಿಸಲಾಗಿದೆ. ಇದರಿಂದ ಈ ನೌಕರರ ಪಿಂಚಣಿ ಅರ್ಜಿಗಳನ್ನು ಪರಿಶೀಲಿಸಿ ನಿವೃತ್ತಿಯ ದಿನದಂದು ಪಿಂಚಣಿ ಪತ್ರವನ್ನು ವಿತರಿಸಲು ಸಹಾಯವಾಗುತ್ತದೆ.
ಇದಕ್ಕಾಗಿ ಉಡುಪಿ ಭವಿಷ್ಯನಿಧಿ ಕಛೇರಿಯಲ್ಲಿ ಡಿಪಿಎ ಜೆ.ಆರ್.ಟಿ. ಶ್ರೀಕುಮಾರ್, ಪಿಂಚಣಿ ವಿಭಾಗ ನರಸಿಂಹ ಗೊಲ್ಲ ಮತ್ತು ಪ್ರವರ್ತನ ಅಧಿಕಾರಿ ಮಲ್ಲಿಕಾರ್ಜುನ ರೆಡ್ಡಿ. ಪ್ರವರ್ತನ ಅಧಿಕಾರಿ ಇವರನ್ನೊಳಗೊಂಡ ತಾಂತ್ರಿಕ ತಂಡವನ್ನು (0820-2531172) ಉದ್ಯೋಗದಾತರಿಗೆ ಮತ್ತು ಇಪಿಎಸ್ ಸದಸ್ಯರಿಗೆ ಮಾರ್ಗದರ್ಶನ ನೀಡಲು ರಚಿಸಲಾಗಿದೆ ಎಂದು ಉಡುಪಿ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಆಯುಕ್ತ ಡಾ. ಅಜಯ್ ಸಿಂಗ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.