ಶಾಸಕರ ಭರವಸೆಗೆ ಒಪ್ಪಿಗೆ : ಪ್ರತಿಭಟನೆ ನಿರ್ಧಾರ ಕೈಬಿಟ್ಟ ವರ್ತಕ ಸಂಘ

ಪುತ್ತೂರು: ಶಾಸಕರು ನೀಡಿದ ಭರವಸೆಯ ಹಿನ್ನಲೆಯಲ್ಲಿ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಅಂಗಡಿ ಮುಂಗಟ್ಟು ತೆರೆದು ಪ್ರತಿಭಟನೆ ನಡೆಸುವುದಾಗಿ ವಾಣಿಜ್ಯ ಮತ್ತು ಕೈಗಾರಿಕ ಸಂಘ ಹಾಗೂ ವರ್ತಕ ಸಂಘದ ಕೈಗೊಂಡ ನಿರ್ಣಯವನ್ನು ಕೈಬಿಟ್ಟಿದ್ದಾರೆ. ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿಯನ್ನು ಪಾಲಿವುದಾಗಿ ತಿಳಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ತೆರವುಗೊಳಿಸುವಂತೆ ಆಗ್ರಹಿಸಿ ವರ್ತಕ ಸಂಘ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ ಹಿನ್ನಲೆಯಲ್ಲಿ ಶುಕ್ರವಾರ ಪುತ್ತೂರು ನಗರಸಭಾ ಸಭಾಭವನದಲ್ಲಿ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ವರ್ತಕರ ಮನವೊಲಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ್ ಮನವಿಯಂತೆ ವರ್ತಕರು ತಮ್ಮ ಅಂಗಡಿ ತೆರೆದು ಪ್ರತಿಭಟನೆ ನಡೆಸುವ ನಿರ್ಧಾರವನ್ನು ಬದಲಿಸಿ ವೀಕೆಂಡ್ ಕರ್ಫ್ಯೂ ಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈ ನಡುವೆ ಕರ್ಫ್ಯೂ ತೆರವು ಮಾಡುವ ಬಗ್ಗೆ ಮುಂದಿನ ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೇರಿದಂತೆ ಕಂದಾಯ ಕಾರ್ಯದರ್ಶಿಯವರಿಗೆ ಮಾತುಕತೆ ನಡೆಸಿದ್ದು, ವರ್ತಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದ ಶಾಸಕರು ಕಾನೂನಿಗೆ ಸಹಕಾರ ನೀಡುವಂತೆ ವರ್ತಕರಲ್ಲಿ ವಿನಂತಿದ್ದರು.
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ರಮೇಶ್ ಬಾಬು ಅವರು ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಬೇರೆ ಜಿಲ್ಲೆಯಲ್ಲಿರುವ ಕೋವಿಡ್ ಪಾಸಿಟಿವಿಟಿಗಿಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ಶೇ.2.8 ಇದೆ. ಈ ನಾಲ್ಕು ಜಿಲ್ಲೆಗಳನ್ನು ಬಿಟ್ಟು ಉಳಿದ 27 ಜಿಲ್ಲೆಗಳಲ್ಲಿ ವೀಕೆಂಡ್ ಕಫ್ರ್ಯೂವನ್ನು ತೆಗೆಯಲಾಗಿದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗೆ ಸಂಬಂಧಿಸಿ ವೀಕೆಂಡ್ ಕರ್ಫ್ಯೂ ತೆರವು ಮಾಡಲು ಸೋಮವಾರ ದಿನ ಮುಖ್ಯಮಂತ್ರಿಗಳ ಜೊತೆ ಶಾಸಕರು ಸಚಿವರು ಮಾತುಕತೆ ನಡೆಸಲಿದ್ದಾರೆ. ಮುಂದಿನ ವಾರ ವೀಕೆಂಡ್ ಖಂಡಿತವಾಗಿಯೂ ತೆರವಾಗಲಿದೆ. ಈ ವಾರ ವರ್ತಕರೆಲ್ಲರು ಸಹಕಾರ ನೀಡಿ ವೀಕೆಂಡ್ ಕರ್ಫ್ಯೂ ವಿನ ಮಾರ್ಗಸೂಚಿ ಪಾಲಿಸಿ ಪ್ರತಿಭಟನೆ ಮಾಡದಂತೆ ತಾಲೂಕು ಆಡಳಿತ ಪರವಾಗಿ ನಾನು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಶಾಸಕರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮುಂದಿನ ವಾರದಿಂದ ಖಂಡಿತವಾಗಿಯೂ ವೀಕೆಂಡ್ ಕರ್ಫ್ಯೂ ವನ್ನು ನಿಲ್ಲಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಅಲ್ಲದೆ ತಹಸೀಲ್ದಾರ್ ಅವರ ಮನವಿ ಮೇರೆಗೆ ಮನಸ್ಸಿಗೆ ಬೇಸರವಾದರೂ ಒಪ್ಪುವ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.
ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಪಾಸಿಟಿವಿಟಿ ರೇಟ್ 2 ಕ್ಕಿಂತ ಕಡಿಮೆ ಆದರೆ ಶಾಲೆಯೂ ಆರಂಭಗೊಳ್ಳುತ್ತದೆ. ಆದರೆ ಕೇರಳದವರು ದಕ್ಷಿಣ ಕನ್ನಡವನ್ನು ಜಾಸ್ತಿ ಅವಲಂಭಿಸಿದ ಹಿನ್ನೆಲೆಯಲ್ಲಿ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದೆ ಎಂದರು.
ಆಕ್ಷೇಪಿಸಿದ ಕೃಷ್ಣನಾರಾಯಣ ಮುಳಿಯ ಅವರು ಕೇರಳದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಕಲಿ ಪ್ರಮಾಣ ಪತ್ರದ ಮೂಲಕ ಬರುತ್ತಿದ್ದಾರೆ, ಪ್ರಮಾಣ ಪತ್ರಕ್ಕೆ ಕೋಡ್ ಸ್ಕ್ಯಾನರ್ ಅಳವಡಿಸಿ ಎಂದರು. ಉತ್ತರಿಸಿದ ತಹಶೀಲ್ದಾರ್ ಈ ಕುರಿತು ಈಗಾಗಲೇ ಪಳ್ಳತ್ತೂರು, ಸ್ವರ್ಗ ಮತ್ತು ಪಾಣಾಜೆಯಲ್ಲಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ವರ್ತರಕ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಭಗವಾನ್, ಸ್ವರ್ಣೋಧ್ಯಮಿ ಕೃಷ್ಣನಾರಾಯಣ ಮಳಿಯ ಸೇರಿದಂತೆ ಹಲವಾರು ಮಂದಿ ವರ್ತಕರು ಸಭೆಯಲ್ಲಿ ಉಪಸ್ಥಿತರಿದ್ದರು.







