ಉಡುಪಿ: ವಾರಾಂತ್ಯ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ
![ಉಡುಪಿ: ವಾರಾಂತ್ಯ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ ಉಡುಪಿ: ವಾರಾಂತ್ಯ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ](https://www.varthabharati.in/sites/default/files/images/articles/2021/09/4/305289-1630765242.jpg)
ಉಡುಪಿ, ಸೆ.4: ಉಡುಪಿ ಜಿಲ್ಲೆಯಾದ್ಯಂತ ಇಂದಿನಿಂದ ಜಾರಿಯಾಗಿರುವ ವಾರಾಂತ್ಯ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೊಂದು ಅಂಗಡಿ ಗಳು ಬಂದ್ ಆಗಿರುವುದನ್ನು ಹೊರತು ಪಡಿಸಿ ಉಳಿದಂತೆ ಎಲ್ಲ ಚಟುವಟಿಕೆ ಗಳು ಮಧ್ಯಾಹ್ನದವರೆಗೆ ಸಾಮಾನ್ಯವಾಗಿದ್ದವು.
ಕೆಎಸ್ಆರ್ಟಿಸಿ ಹಾಗೂ ಸರ್ವಿಸ್ ಬಸ್ಗಳು ರಸ್ತೆಗೆ ಇಳಿದಿದ್ದರೆ, ಬಹುತೇಕ ಸಿಟಿಬಸ್ಗಳು ಸಂಚಾರ ಸ್ಥಗಿತಗೊಳಿಸಿತ್ತು. ಟ್ಯಾಕ್ಸಿ, ರಿಕ್ಷಾಗಳ ಓಡಾಟ ಎಂದಿ ನಂತೆ ಕಂಡುಬಂತು. ತರಕಾರಿ, ದಿನಸಿ, ಪೆಟ್ರೋಲ್ ಬಂಕ್, ಹೂವು ಮಾರಾಟ, ಮೆಡಿಕಲ್, ಬೇಕರಿ ಹಾಗೂ ಇರ ಕಚೇರಿಗಳು ತೆರೆದಿದ್ದವು.
ಹೊಟೇಲ್ಗಳಲ್ಲಿ ಪಾರ್ಸೆಲ್ ಮಾತ್ರ ನೀಡಲಾಗುತ್ತಿತ್ತು. ಬಸ್ ಓಡಾಟ, ಕಚೇರಿಗಳು ತೆರೆದಿದ್ದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿಯೂ ಜನ ಸಂಚಾರ ಕೂಡ ಸಾಮಾನ್ಯವಾಗಿತ್ತು. ಆದರೆ ಮಧ್ಯಾಹ್ನ 2ಗಂಟೆಯ ನಂತರ ಅಗತ್ಯ ವಸ್ತುಗಳ ಅಂಗಡಿಗಳು ಬಂದ್ ಆದ ಹಿನ್ನೆಲೆಯಲ್ಲಿ ಜನರ ಓಡಾಟ ಕೂಡ ಕಡಿಮೆಯಾಗಿ ಬೀದಿಗಳು ಬೀಕೋ ಎನ್ನುತ್ತಿದ್ದವು. ಮಣಿಪಾಲ, ಉಡುಪಿಯ ಕೆಲವು ಕಡೆ ಪೊಲೀಸ್ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ತಪಾಸಣೆ ನಡೆಸಲಾಯಿತು.
![](https://www.varthabharati.in/sites/default/files/images/galllery/2021/09/4/UD-S4 KARFUE1.jpg)