ಸಿಟಿ ರವಿ ಹೇಳಿಕೆಗೆ ವಿವಿಧ ಸಂಘಟನೆಗಳ ಖಂಡನೆ
ಮಂಗಳೂರು, ಸೆ.4: ಮದ್ರಸಗಳಲ್ಲಿ ತಾಲೀಬಾನ್ಗಳು ಸೃಷ್ಟಿಯಾಗುತ್ತಿದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿಯ ಹೇಳಿಕೆಯ ಬಗ್ಗೆ ವಿವಿಧ ಸಂಘಟನೆಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಮುಸ್ಲಿಂ ಸೆಂಟ್ರಲ್ ಕಮಿಟಿ
ಮದ್ರಸದ ಬಗ್ಗೆ ಸಿ.ಟಿ. ರವಿಯ ಹೇಳಿಕೆಯು ಖಂಡನಿಯವಾಗಿದೆ. ಮದ್ರಸದ ಹೆಸರಿನಲ್ಲಿ ಭಯೊತ್ಪದನಾ ಚಟುವಟಿಕೆ ಮಾಡಿದಲ್ಲಿ ಅವರು ಅದನ್ನು ಸಾಬೀತುಪಡಿಸಬೇಕು. ಮದ್ರಸದ ಬಗ್ಗೆ ಅವರ ಹೇಳಿಕೆಯು ಬೇಜವಾಬ್ದಾರಿತನದಿಂದ ಕೂಡಿದೆ ಎಂದು ದಿ. ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುೂಹಮ್ಮದ್ ಮಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ರೇಂಜ್ ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್
ಮದ್ರಸಗಳಲ್ಲಿ ತಾಲಿಬಾನ್ಗಳು ಸೃಷ್ಟಿಯಾಗುತ್ತಿದ್ದಾರೆ ಎಂದು ಸಿಟಿ.ರವಿ ಹೇಳಿಕೆಗಳು ಹತಾಶೆ, ಮತಿಭ್ರಮೆ ಹಾಗೂ ಬೇಜವಾಬ್ದಾರಿತನದಿಂದ ಕೂಡಿದೆ.ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ರವಿ ತನ್ನ ರಾಜಕೀಯ ತೆವಲಿಗೋಸ್ಕರ ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂಪಡೆದು ಮಸ್ಲಿಮರ ಕ್ಷಮೆಯಾಚಿಸಬೇಕೆಂದು ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ರಿಯಾಝುದ್ದೀನ್ ಬಂದರ್ ಒತ್ತಾಯಿಸಿದ್ದಾರೆ.
ದ.ಕ.ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್
ಶಾಂತಿ, ಸೌಹಾರ್ದತೆ, ದೇಶ ಪ್ರೇಮವನ್ನು ಬೋಧಿಸುವ ಮದ್ರಸಗಳ ಕುರಿತು ತಾಲಿಬಾನಿಗಳನ್ನು ಸೃಷ್ಟಿಸುವ ಕೇಂದ್ರ ಎಂಬ ಹೇಳಿಕೆ ಖಂಡನೀಯವಾಗಿದೆ. ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಲು ಪ್ರತಿಜ್ಞೆಗೈಯುವ ಜನ ಪ್ರತಿನಿಧಿಗಳು ಇಂತಹ ಬಾಲಿಶವಾದ ಹೇಳಿಕೆ ನೀಡುವುದು ಅಸಮಂಜಸವಾಗಿದೆ. ಇಸ್ಲಾಂ ತೆರೆದ ಪುಸ್ತಕವಾಗಿದೆ. ಅಧ್ಯಯನ ನಡೆಸಲು ಸಾಕಷ್ಟು ಸೌಕರ್ಯಗಳಿವೆ. ಪ್ರಕೃತಿ ವಿಕೋಪಗಳು ಬಂದಾಗ ಸಂತ್ರಸ್ತರ ಜಾತಿ ನೋಡದೆ ಆಶ್ರಯ ನೀಡಿದ ನಿದರ್ಶನವು ಸಮಾಜದ ಮುಂದಿರುವಾಗ ಶಾಂತಿ ಕದಡುವ ಇಂತಹ ಮಾತುಗಳು ಖಂಡನೀಯ. ಆದ್ದರಿಂದ ಸಿ.ಟಿ.ರವಿ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡು ಕ್ಷಮೆ ಯಾಚಿಸಬೇಕು ದ.ಕ.ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಆಗ್ರಹಿಸಿದ್ದಾರೆ.
ಸಮಸ್ತ ಮುಫತ್ತಿಶುಗಳ ಒಕ್ಕೂಟ
ಮದ್ರಸಗಳ ಬಗ್ಗೆ ಅನುಚಿತವಾದ ಮಾತುಗಳನ್ನಾಡಿದ ಸಿ.ಟಿ ರವಿ ಹೇಳಿಕೆಯನ್ನು ಸಮಸ್ತ ಮುಫತ್ತಿಶುಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡಿ ದೇಶಪ್ರೇಮವು ಇಸ್ಲಾಮಿ ವಿಶ್ವಾಸದ ಭಾಗವೆಂದು ಬೋಧಿಸಿ ಭಾರತೀಯ ಮುಸಲ್ಮಾನನೆಂದು ಅಭಿಮಾನ ಪಡುವ ಸತ್ಪ್ರಜೆಗಳನ್ನು ಮದ್ರಸಗಳು ಸೃಷ್ಟಿ ಮಾಡುತ್ತಿದೆ. ಪ್ರಜಾಪ್ರಭುತ್ವ ದಿನದಂದು ಭಾರತದ ಭೂಪಟದ ಆಕಾರದಲ್ಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಬಾಲ ಇಂಡಿಯಾ ರಚನೆ ಮಾಡಿ ಪುಟಾಣಿ ವಯಸ್ಸಿನಿಂದಲೇ ಮಕ್ಕಳಿಗೆ ಮದ್ರಸದಲ್ಲಿ ದೇಶಪ್ರೇಮದ ಪ್ರಾಯೋಗಿಕ ಪಾಠವನ್ನು ನೀಡಲಾಗುತ್ತಿದೆ. ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ ದಿನದಂದು ಮದ್ರಸ ತರಗತಿಗಳಿಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಸೇರಿಸಿ ಭಾರತದ ಧ್ವಜಾರೋಹಣ ಮಾಡಿ ಮಕ್ಕಳಲ್ಲಿ ದೇಶ ಪ್ರೇಮವನ್ನು ಬಲಿಷ್ಠ ಗೊಳಿಸಲಾಗುತ್ತದೆ. ದೇಶದ ಸ್ವಾತಂತ್ರ ಹೋರಾಟಕ್ಕೆ ಹಾಗೂ ದೇಶದ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮುಸಲ್ಮಾನರು ಮದ್ರಸಗಳಲ್ಲಿ ಕಲಿತವರೇ ಆಗಿದ್ದಾರೆ. ಕ್ಷಿಪಣಿ ಜನಕ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರ ತಂದೆ ಜೈನುಲ್ ಅಬಿದಿನ್ ತನ್ನ ಪ್ರದೇಶದ ಮಸೀದಿಯ ಇಮಾಂ ಕೂಡ ಆಗಿದ್ದರೆಂದು ಅವರ ಇತಿಹಾಸದಲ್ಲಿ ಉಲ್ಲೇಖಿತವಾಗಿದೆ. ಮದ್ರಸದಲ್ಲಿ ಕಲಿತು ಮಸೀದಿಯಲ್ಲಿ ಇಮಾಂ ಆಗಿರುವುದರ ಜೊತೆಗೆ ತನ್ನ ಮಗನನ್ನು ಭಾರತೀಯ ವಿಜ್ಞಾನಿಯಾಗಿ ಬೆಳೆಸಿ ದೇಶಕ್ಕೆ ಸಮರ್ಪಿಸಿದಂತಹ ಮದ್ರಸಗಳ ವಿರುದ್ಧ ತಾಲಿಬಾನಿ ಹೇಳಿಕೆಗಳು ಸಹಿಸುವಂತದ್ದಲ್ಲ ಎಂದು ಸಮಸ್ತ ಮುಫತ್ತಿಶುಗಳಾದ ಉಮರ್ ದಾರಿಮಿ ಸಾಲ್ಮರ, ಖಾಸಿಂ ಮುಸ್ಲಿಯಾರ್ ಮಠ, ಹನೀಫ್ ಮುಸ್ಲಿಯಾರ್ ಬೋಳಂತೂರು, ಫಾರೂಕ್ ದಾರಿಮಿ ತೆಕ್ಕಾರ್, ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.