ಉದ್ಯಾವರ ಹೆಲ್ಪ್ ಲೈನ್ ವಾಟ್ಸ್ಆ್ಯಪ್ ತಂಡದ ಮೂಲಕ ಮಾನವೀಯ ಸೇವೆ
ಉಡುಪಿ, ಸೆ.5: ಉದ್ಯಾವರ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಮುಹಮ್ಮದ್ ಫೈಸಲ್ ನೇತೃತ್ವದ ಉದ್ಯಾವರ ಹೆಲ್ಪ್ಲೈನ್ ವಾಟ್ಸಾಪ್ ತಂಡದಿಂದ ಸುಮಾರು 2ಲಕ್ಷ ರೂ. ವೆಚ್ಚದಲ್ಲಿ ಕೊರೊನಾ ಕೋವಿಡ್ -19 ಲಾಕ್ಡೌನ್ ಸಂದರ್ಭ ತತ್ತರಿಸಿದ ಜನತೆಗೆ ಮಾನವೀಯ ಸೇವೆಯನ್ನು ಒದಗಿಸಲಾಗಿದೆ.
ಸ್ವತಃ ವೈದ್ಯರಾಗಿರುವ ಡಾ.ಮುಹಮ್ಮದ್ ಫೈಸಲ್ ಮಾನವೀಯ ಸೇವೆ ನೀಡುವ ಉದ್ದೇಶದಿಂದ ವಾಟ್ಸಾಪ್ ಮೂಲಕ ಉದ್ಯಾವರ ಹೆಲ್ಪ್ಲೈನ್ ತಂಡ ವನ್ನು ರಚಿಸಿಕೊಂಡು ದಾನಿಗಳ ಸಹಕಾರ ಪಡೆದು ಕೊರೋನ ಪೀಡಿತರ ಆರೋಗ್ಯ ಸೇವೆ ಮತ್ತು ಲಾಕ್ಡೌನ್ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಮೂಲಕ ಧೈರ್ಯವನ್ನು ತುಂಬಿದ್ದರು.
ಸಂದಿಗ್ಧ ಪರಿಸ್ಥಿತಿಯಲ್ಲಿನ ನಾಗರೀಕರ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಅತೀವ ಕಾಳಜಿಯಿಂದ ತನ್ನ ವೈದ್ಯ ವೃತ್ತಿಯನ್ನು ಸಮಾಜ ಸೇವಕನಾಗಿ ಪರಿವರ್ತಿಸಿಕೊಂಡಿದ್ದು, ಉದ್ಯಾವರ, ಕಡೆಕಾರು, ಕಿದಿಯೂರು ಗ್ರಾಮಗಳ ವ್ಯಾಪ್ತಿಯ ಅತ್ಯಾವಶ್ಯಕವುಳ್ಳ ಸಂತ್ರಸ್ತರನ್ನು ಗುರುತಿಸಿ 133 ಆಹಾರ ಕಿಟ್, 100ಕ್ಕೂ ಮಿಕ್ಕಿ ಉಚಿತ ಆರೋಗ್ಯ ತಪಾಸಣೆ, ಪಲ್ಸ್ ಆಕ್ಸಿ ಮೀಟರ್, ಗನ್ ಥರ್ಮೋ ಮೀಟರ್ ನೀಡಿದ್ದಲ್ಲದೇ ಆಯುಷ್ ಪದ್ಧತಿಯ ಮಾರ್ಗಸೂಚಿಯಂತೆ ಆಯುಷ್ ಔಷಧಿಗಳಾದ ಆಯುಷ್ ಕ್ವಾತ, ಸಂಶಮನಿವಟಿಯನ್ನು ಒದಗಿಸಿದ್ದು, ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಕೂಡಾ ವಿತರಿಸಿದ್ದಾರೆ.
ಮಣಿಪಾಲದ ಹೊಸಬೆಳಕು, ಶಂಕರಪುರ ವಿಶ್ವಾಸದಮನೆ, ಕಾಪುವಿನ ಆಶಿಯಾನ ಸಹಿತ 3 ಅನಾಥ ಮತ್ತು ವೃದ್ಧಾಶ್ರಮಗಳಿಗೆ ಬೇಡಿಕೆಯುಳ್ಳ ಅತ್ಯವಶ್ಯಕ ಸಾಮಗ್ರಿಗಳನ್ನು ಇವರು ವಿತರಿಸಿದ್ದಾರೆ. ಡಯಾಲಿಸಿಸ್ ರೋಗಿಗೆ ಧನ ಸಹಾಯ, 100ಕ್ಕೂ ಅಧಿಕ ಜನರಿಗೆ ದೂರವಾಣಿ ಮುಖಾಂತರ ಹಾಗೂ ಮನೆಗೆ ತೆರಳಿ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಿದ್ದು ಮಾತ್ರವಲ್ಲದೇ ಕೊರೋನ ಪೊಸಿಟಿವ್ ಕಂಡು ಬಂದವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿಯೂ ಪರಿಶ್ರಮ ವಹಿಸಿ ಧೈರ್ಯ ತುಂಬಿದ್ದಾರೆ. ಜಾಗೃತಿ ಭಿತ್ತಿ ಪತ್ರಗಳನ್ನೂ ವಿತರಿಸಿ ಜನ ಜಾಗೃತಿ ಮೂಡಿಸಲಾಗಿತ್ತು.