ಉಪ್ಪಿನಂಗಡಿ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಬಾಲಕ ಮೃತ್ಯು
![ಉಪ್ಪಿನಂಗಡಿ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಬಾಲಕ ಮೃತ್ಯು ಉಪ್ಪಿನಂಗಡಿ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಬಾಲಕ ಮೃತ್ಯು](https://www.varthabharati.in/sites/default/files/images/articles/2021/09/6/305491-1630933411.jpg)
ಉಪ್ಪಿನಂಗಡಿ: ಬುಲೆಟ್ ಟ್ಯಾಂಕರೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟು, ಆತನ ತಾಯಿ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಗಾಂಧಿಪಾರ್ಕ್ ಬಳಿಯ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಉಪ್ಪಿನಂಗಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಧ್ವಿತ್ (15) ಮೃತ ವಿದ್ಯಾರ್ಥಿ. ಈತನ ತಾಯಿ ಅನುರಾಧ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಘಟನೆಯ ವಿವರ: ಕರಾಯ ಗ್ರಾಮದ ಕಲ್ಲೇರಿ ನಿವಾಸಿ ರಿಕ್ಷಾ ಚಾಲಕ ಜನಾರ್ದನ ಎಂಬವರ ಪತ್ನಿ ಅನುರಾಧಾ ಉಜ್ರುಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿದ್ದಾರೆ. ಇಂದು ತನ್ನ ಪುತ್ರ ಅಧ್ವಿತ್ ಪರೀಕ್ಷೆ ಬರೆದ ಪುಸ್ತಕವನ್ನು ಶಾಲೆಗೆ ಕೊಡುವ ಸಲುವಾಗಿ ಶಾಲೆಗೆ ತೆರಳಿದ್ದರು. ಶಾಲೆಯಲ್ಲಿ ಪುಸ್ತಕ ಕೊಟ್ಟು ಉಪ್ಪಿನಂಗಡಿ ಕಡೆ ಬರುವಾಗ ಗಾಂಧಿಪಾರ್ಕ್ನ ಪೆಟ್ರೋಲ್ ಬಂಕ್ ಬಳಿ ತನ್ನ ಹಿಂದಿನಿಂದ ಬರುತ್ತಿದ್ದ ಬುಲೆಟ್ ಟ್ಯಾಂಕರ್ ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಹಿಂಬದಿ ಸವಾರ ಅಧ್ವಿತ್ ರಸ್ತೆಗೆಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಗಾಯಗೊಂಡು ರಕ್ತ ಸೋರಿಕೆಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಅನುರಾಧ ಗಂಭೀರ ಗಾಯಗೊಂಡಿದ್ದಾರೆ.
2 ದಿನಗಳ ವೀಕೆಂಡ್ ಕರ್ಫ್ಯೂ ಬಳಿಕ ಸೋಮವಾರ ಬೆಳಗ್ಗಿನಿಂದಲೇ ಪೇಟೆಯಲ್ಲಿ, ಹೆದ್ದಾರಿಯಲ್ಲಿ ವಾಹನಗಳ ಓಡಾಟ ಸಂಖ್ಯೆ ಅಧಿಕ ಕಂಡು ಬಂದಿತ್ತು. ಅದಾಗ್ಯೂ ಅಪಘಾತ ಸಂಭವಿಸಿದ ತಕ್ಷಣ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿ, ಸುಮಾರು 1 ತಾಸು ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಉಪ್ಪಿನಂಗಡಿ ಮತ್ತು ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ವಾಹನಗಳ ಸಂಚಾರಕ್ಕೆ ಇದ್ದ ಅಡೆತಡೆಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಪ್ರದೇಶದಲ್ಲಿ ಈಗಾಗಲೇ ಹಲವು ಅಪಘಾತಗಳಾಗಿದ್ದು, ಐದಕ್ಕೂ ಹೆಚ್ಚು ಸಾವು ಸಂಭವಿಸಿವೆ. ಗಾಂಧಿಪಾರ್ಕ್ನಿಂದ ಸುಮಾರು ಒಂದು ಕಿ.ಮೀ. ಉದ್ದ ಪೇಟೆಯ ಬೈಪಾಸ್ ರಸ್ತೆಯು ಇಳಿಜಾರಿನಿಂದ ಕೂಡಿದ್ದು, ಉಪ್ಪಿನಂಗಡಿ ಕಡೆಗೆ ಬರುವ ವಾಹನಗಳು ಅತೀ ವೇಗವಾಗಿ ಬರುತ್ತಿವೆ. ಇಲ್ಲಿ ಹಲವು ಕಡೆ ಹೆದ್ದಾರಿ ಬದಿಗೆ ಮಣ್ಣು ಹಾಕಿದ್ದರಿಂದ ಅದು ಸಂಪೂರ್ಣ ಕೆಸರು ಮಯವಾಗಿದೆಯಲ್ಲದೆ, ಇನ್ನೊಂದೆಡೆ ಹೆದ್ದಾರಿಯು ಫುಟ್ಪಾತ್ಗಿಂತ ಎತ್ತರದಲ್ಲಿದ್ದು, ದ್ವಿಚಕ್ರ ವಾಹನಗಳನ್ನು ರಸ್ತೆ ಬದಿ ಇಳಿಸಲು ಇಲ್ಲಿ ಕಷ್ಟಕರ ಪರಿಸ್ಥಿತಿಯಿದೆ. ಅಲ್ಲದೇ, ಇಲ್ಲಿ ಹಲವು ಅಡ್ಡ ರಸ್ತೆಗಳು ಸಿಗುತ್ತವೆ. ಆದ್ದರಿಂದ ಇಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಹಾಗಾಗಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಇಲ್ಲಿ ಹೆದ್ದಾರಿಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಬೇಕೆನ್ನುವ ಬೇಡಿಕೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.