ಸೆ.9: ಮಂಗಳೂರು ಧರ್ಮಪ್ರಾಂತದಿಂದ ಬಿಷಪ್ ಬಾಸಿಲ್ ಸಂಸ್ಮರಣೆ
![ಸೆ.9: ಮಂಗಳೂರು ಧರ್ಮಪ್ರಾಂತದಿಂದ ಬಿಷಪ್ ಬಾಸಿಲ್ ಸಂಸ್ಮರಣೆ ಸೆ.9: ಮಂಗಳೂರು ಧರ್ಮಪ್ರಾಂತದಿಂದ ಬಿಷಪ್ ಬಾಸಿಲ್ ಸಂಸ್ಮರಣೆ](https://www.varthabharati.in/sites/default/files/images/articles/2021/09/6/305517-1630930363.jpg)
ಮಂಗಳೂರು, ಸೆ.6: ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾಗಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಬಿಷಪ್ ಬಾಸಿಲ್ ಸಲ್ವಾದೋರ್ ಡಿಸೋಜ 1996ರ ಸೆ.9ರಂದು ನಿಧನರಾಗಿದ್ದು, ಅದರ ನೆನಪಿನಲ್ಲಿ ಸಂಸ್ಮರಣಾ ಕಾರ್ಯಕ್ರಮವು ಸೆ.9ರಂದು ನಗರದ ರೊಜಾರಿಯೋ ಮಹಾದೇವಾಲಯದಲ್ಲಿ (ಕಥೆಡ್ರಲ್) ನಡೆಯಲಿದೆ.
ನಿಧನರಾಗಿ 25 ವರ್ಷಗಳು ಪೂರ್ತಿಯಾದ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9:30ಕ್ಕೆ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಪೀಟರ್ ಪಾವ್ಲ್ ಸಲ್ದಾನಾ ಸ್ಮರಣಾ ಬಲಿಪೂಜೆ ಅರ್ಪಿಸಲಿದ್ದಾರೆ. ಬಳಿಕ 10:30ಕ್ಕೆ ರೊಝಾರಿಯೊ ಚರ್ಚ್ನ ಮಿನಿ ಹಾಲ್ನಲ್ಲಿ ಬಿಷಪ್ ಬಾಸಿಲ್ ಅವರ ಬದುಕು ಮತ್ತು ಸಾಧನೆಗಳ ಕುರಿತು ಅವರ 50 ಸಂಗಡಿಗರು ಮತ್ತು ಅಭಿಮಾನಿಗಳು ಬರೆದ ಲೇಖನ ಸಂಗ್ರಹದ ಪುಸ್ತಕವನ್ನು ಬಿಡುಗಡೆಗೊಳ್ಳಲಿದೆ. ಅಲ್ಲದೆ ಅವರ ಕುರಿತು ಸಾಕ್ಷಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಬಿಷಪ್ ಬಾಸಿಲ್ ಸಲ್ವಾದೋರ್ ಡಿಸೋಜ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾಗಿ 1965 ರಿಂದ 1996 ರವರೆಗೆ ಸೇವೆ ಸಲ್ಲಿಸಿದ್ದರು. ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ಧರ್ಮಪ್ರಾಂತವು ಅವರ ಸಮರ್ಥನಾಯಕತ್ವದಲ್ಲಿ ಪ್ರಗತಿ ಸಾಧಿಸಿತು. ಹಲವಾರು ಧರ್ಮ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ಸಮಾಜಸೇವಾ ಸಂಸ್ಥೆಗಳು, ವೈದ್ಯಕೀಯ ಸೇವಾ ಸಂಸ್ಥೆಗಳು ಅವರ ನಾಯಕತ್ವದಲ್ಲಿ ಆರಂಭಿಸಲ್ಪಟ್ಟಿದ್ದವು.
ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆಯನ್ನು ಆರಂಭಿಸಿದ್ದ ಅವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ ಫಲವಾಗಿ ಧಾರ್ಮಿಕ ಆಚರಣೆಗಳಲ್ಲಿ ಕೊಂಕಣಿ ಭಾಷೆಯ ಬಳಕೆ ಆರಂಭವಾದ್ದರಿಂದ ಹೊಸ ಒಡಂಬಡಿಕೆ,ಪೂಜಾಗ್ರಂಥ ಹಾಗೂ ವಾಚನಾ ಗ್ರಂಥಗಳನ್ನು ಕೊಂಕಣಿಗೆ ಭಾಷಾಂತರಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು.
ಭಾರತದಲ್ಲಿ ಪ್ರಥಮ ಧರ್ಮಸಭೆಯ ಆಡಳಿತದಲ್ಲಿ ಪ್ರಾತಿನಿಧಿಕ ಸಂಸ್ಥೆಗಳನ್ನು ರೂಪಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದು ಪ್ರಕಟನೆ ತಿಳಿಸಿದೆ.