ಮಾನವ ಸಂಬಂಧಗಳನ್ನು ಗೌರವಿಸಲು ಪ್ರೇರೇಪಿಸುವ ಮೊಂತಿ ಹಬ್ಬ: ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ
ಮಂಗಳೂರು, ಸೆ.7: ಬುಧವಾರ ಆಚರಿಸುವ ಮೊಂತಿ ಹಬ್ಬವು ಕರ್ನಾಟಕ ಕರಾವಳಿಯ ಕ್ರೈಸ್ತರಿಗೆ, ಪ್ರತ್ಯೇಕವಾಗಿ ಕೊಂಕಣಿ ಭಾಷಿಗರಿಗೆ ಅತಿ ಮಹತ್ವದ್ದಾಗಿದೆ. ನಾವು ಈ ಹಬ್ಬವನ್ನು ‘ಮೊಂತಿ ಫೆಸ್ಟ್’ ಅಂತ ಕರೆಯುತ್ತೇವೆ. ಕೊಂಕಣಿ ಸಂಸ್ಕತಿಯು ಇದರಲ್ಲಿ ಅಡಕವಾಗಿದೆ. ಈ ಹಬ್ಬದ ವಿಶೇಷತೆ ಹೊಸತನದಿಂದ ಕೂಡಿರುವುದಾಗಿದೆ. ಮಾತೆ ಮರಿಯಮ್ಮನವರ ಜನ್ಮದಿನ ಶುಭಾಶಯಗಳು ಎಂದು ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಮೊಂತಿ ಹಬ್ಬದ ಸಂದೇಶ ನೀಡಿದ್ದಾರೆ.
ಇದು ಕುಟುಂಬದ ಹಬ್ಬ ಇದಾಗಿದ್ದು, ಹೆಣ್ಣುಮಗುವಿಗೆ ವಿಶೇಷ ಗೌರವವನ್ನು ಕೊಡಲು ಪ್ರೇರೇಪಿಸುವಂತಹದ್ದಾಗಿದೆ. ಇದರ ಜೊತೆಗೆ ಹೊಸತೆನೆಯನ್ನು ತಂದು ಆಶೀರ್ವದಿಸಿ ವಿವಿಧ ಬಗೆಯ ತರಕಾರಿಯನ್ನು ಆಸ್ವಾದಿಸಿ ಸಂತೋಷ ಪಡುತ್ತೇವೆ. ಚಿಕ್ಕ ಮಕ್ಕಳ ಮೊಗದಲ್ಲಿ ಮುಗುಳ್ನಗೆ ಮೂಡಿಸುವ ಹಬ್ಬ ಇದಾಗಿದೆ. ಕಾರಣ ಈ ಹಬ್ಬದ ಸಿದ್ಧತೆಯ ದಿನಗಳಲ್ಲಿ ಮಕ್ಕಳು ತಾವೇ ತೋಟ ಹಿತ್ತಲು ಸುತ್ತಿ ಹೂವುಗಳನ್ನು ಆರಿಸಿ ತಂದು ಕಂದ ಮರಿಯಳಿಗೆ ಆರ್ಪಿಸುತ್ತಾರೆ ಎಂದು ಹೇಳಿದರು.
ಪ್ರಕೃತಿಯ ರಕ್ಷಣೆ, ಹೆಣ್ಣುಮಗುವಿಗೆ ಗೌರವ, ಕುಟುಂಬದ ಏಕತೆ, ಭೂಮಿಯ ಫಲವತ್ತತೆ ಎಲ್ಲವನ್ನು ಸಾರುವ ಮರಿಯ ಜಯಂತಿಯು ನಮಗೆಲ್ಲರಿಗೂ ಸಂತೋಷದ ಕಾರಣವಾಗಲಿ ಎಂದು ಬಿಷಪರು ಆಶಿಸಿದರು.
ಇತ್ತೀಚೆಗೆ ಸ್ತ್ರೀಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ, ಮಾನವ ಕಳ್ಳ ಸಾಗಾಟ ಹಾಗೂ ಹೆಣ್ಣನ್ನು ಭೋಗದ ವಸ್ತುವಿನಂತೆ ಕಾಣುವ ಮನುಜರಿಗೆ ನಾವು ಆಚರಿಸುವ ಹಬ್ಬ ಅವರ ಕಣ್ಣು ತೆರೆದು ಹೆಣ್ಣಿನ ಸ್ಥಾನ ಮಾನ ಅರಿತು ಅವರನ್ನು ಗೌರವಿಸುವ ಹಾಗೆ ಪ್ರೇರಣೆ ನೀಡಲಿ. ಆಗ ನಾವು ಆಚರಿಸುವ ಹಬ್ಬಕ್ಕೊಂದು ಸಾರ್ಥಕತೆ ಬರುವುದು. ಇಂತಹ ಸಾರ್ಥಕ ಜೀವನ ನಮ್ಮದಾಗಲಿ ಎಂದು ಆಶಿಸುತ್ತೇವೆ. ಜಗತ್ತಿನಾದ್ಯಂತ ಕೆಥೊಲಿಕ್ ಧರ್ಮಸಭೆಯಲ್ಲಿ ಇವರು ಆಮೊರಿಸ್ ಲೆತ್ತಿಶಿಯಾ ಕುಟುಂಬದವರು ಎಂದು ಆಚರಿಸುವ ಸುಸಂದರ್ಭದಲ್ಲಿ ಈ ಹಬ್ಬವು ನಮ್ಮ ಕುಟುಂಬ ಸಂಬಂಧಗಳನ್ನು ಬಲಿಷ್ಠಗೊಳಿಸಲು, ಒಗ್ಗಟ್ಟಿನಿಂದ, ಆನ್ಯೋನ್ಯತೆಯಿಂದ ಬಾಳಲು, ಸಂತೋಷದಿಂದ ಕೌಟುಂಬಿಕ ಜೀವನ ನಿರ್ವಹಣೆಗೆ ಮಾತೆ ಮರಿಯಳು ನಮಗಾಗಿ ಪ್ರಾರ್ಥಿಸಲಿ. ನಾಡಿನ ಸಮಸ್ತ ಜನರಿಗೆ ಮೋತಿ ಹಬ್ಬದ ಶುಭಾಶಯಗಳು. ದೇವರು ನಮ್ಮೆಲ್ಲರನ್ನು ಹರಸಲಿ ಎಂದು ತಿಳಿಸಿದ್ದಾರೆ







