ಬಿಜೆಪಿ ವಿರುದ್ಧ ಈಶಾನ್ಯ ಮೈತ್ರಿಕೂಟಕ್ಕೆ ತ್ರಿಪುರಾ ರಾಜಮನೆತನದ ಮುಖ್ಯಸ್ಥ ಪ್ರದ್ಯೋತ್ ನಾಯಕತ್ವ

photo: facebook
ಗುವಾಹಟಿ: ಈಶಾನ್ಯದಲ್ಲಿ ಬಿಜೆಪಿಯ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಈಶಾನ್ಯದಲ್ಲಿ ಇಂದು ಹೊಸ ರಾಜಕೀಯ ವೇದಿಕೆಯನ್ನು ಆರಂಭಿಸಲಾಗಿದೆ. ಈ ಗುಂಪಿನ ಮೊದಲ ಎರಡು ಘಟಕಗಳೆಂದರೆ ಸ್ಥಳೀಯ ಪ್ರಗತಿಪರ ಪ್ರಾದೇಶಿಕ ಒಕ್ಕೂಟ (ತಿಪ್ರ) ಹಾಗೂ ಅಸ್ಸಾಂ ಜಾತೀಯ ಪರಿಷತ್ (ಎಜೆಪಿ). ಈಶಾನ್ಯ ಮೈತ್ರಿಕೂಟಕ್ಕೆ ಇನ್ನೂ ಹೆಸರಿಡಲಾಗಿಲ್ಲ.
ತಿಪ್ರಾ ಅಧ್ಯಕ್ಷ ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮಾನ್, ತ್ರಿಪುರಾ ರಾಜಮನೆತನದ ಮುಖ್ಯಸ್ಥರಾಗಿದ್ದು ಹೊಸ ಒಕ್ಕೂಟವನ್ನು ಮುನ್ನಡೆಸುತ್ತಿದ್ದಾರೆ. ತನ್ನ ರಾಜ್ಯದಲ್ಲಿ 2023 ರ ಚುನಾವಣೆಗಾಗಿ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿದ್ದೇವೆ ಎಂದು ಅವರು ಹೇಳಿದರು.
“ಈ ಹೊಸ ವೇದಿಕೆಯು ಈಶಾನ್ಯದ ಪ್ರಾದೇಶಿಕ ರಾಜಕೀಯ ಚಳುವಳಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ವೇದಿಕೆಯ ಕುರಿತು ಅಂತಿಮ ನಿರ್ಧಾರವನ್ನು ಎಲ್ಲಾ ಪ್ರಾದೇಶಿಕ ಪಕ್ಷಗಳೊಂದಿಗಿನ ಸಂವಾದದ ನಂತರ ಶೀಘ್ರವೇ ಘೋಷಿಸಲಾಗುವುದು'' ಎಂದು ಎಜೆಪಿ ಅಧ್ಯಕ್ಷ ಲುರಿಂಜ್ಯೋತಿ ಗೊಗೊಯ್ ಹೇಳಿದರು.
2016 ರಲ್ಲಿ ರೂಪುಗೊಂಡ ರಾಜಕೀಯ ಒಕ್ಕೂಟವಾದ ಈಶಾನ್ಯ ಪ್ರಜಾಪ್ರಭುತ್ವ ಒಕ್ಕೂಟದ(ಎನ್ ಇಡಿಎ) ಮೂಲಕ ಈ ಪ್ರದೇಶದ ಎಲ್ಲಾ ಎಂಟು ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಸರಕಾರಗಳನ್ನು ನಿಯಂತ್ರಿಸುವುದರಿಂದ ಈ ಹೊಸ ಮೈತ್ರಿಕೂಟವು ಮಹತ್ವವನ್ನು ಪಡೆದುಕೊಂಡಿದೆ.
"ಇಡೀ ಈಶಾನ್ಯವನ್ನು ಈಗ ಒಂದು ಪಕ್ಷವು ಆಳುತ್ತಿದೆ ... ಅದುವೇ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು. ಬಿಜೆಪಿಯ ಮಿತ್ರಪಕ್ಷಗಳು ಸಂತೋಷವಾಗಿಲ್ಲ. ಅಸ್ಸಾಂ ಹಾಗೂ ಮೇಘಾಲಯದಲ್ಲಿ ಏನಾಯಿತು ಎಂಬುದನ್ನು ನೀವು ನೋಡಿದ್ದೀರಿ" ಎಂದು ತಿಪ್ರಾ ಅಧ್ಯಕ್ಷರಾದ ಪ್ರದ್ಯೋತ್ ಮಾಣಿಕ್ಯ ಗುವಾಹಟಿಯಲ್ಲಿ ಹೇಳಿದರು .







