ಸುರತ್ಕಲ್ ವಾಸುದೇವ ರಾವ್, ಉಮಾಕಾಂತ ಭಟ್, ವಿಶ್ವೇಶ್ವರ ಭಟ್ಗೆ ಯಕ್ಷಗಾನ ಕಲಾರಂಗ ಪ್ರಶಸ್ತಿಗಳು
![ಸುರತ್ಕಲ್ ವಾಸುದೇವ ರಾವ್, ಉಮಾಕಾಂತ ಭಟ್, ವಿಶ್ವೇಶ್ವರ ಭಟ್ಗೆ ಯಕ್ಷಗಾನ ಕಲಾರಂಗ ಪ್ರಶಸ್ತಿಗಳು ಸುರತ್ಕಲ್ ವಾಸುದೇವ ರಾವ್, ಉಮಾಕಾಂತ ಭಟ್, ವಿಶ್ವೇಶ್ವರ ಭಟ್ಗೆ ಯಕ್ಷಗಾನ ಕಲಾರಂಗ ಪ್ರಶಸ್ತಿಗಳು](https://www.varthabharati.in/sites/default/files/images/articles/2021/09/9/305927-1631198583.jpg)
ವಾಸುದೇವ ರಾವ್, ಉಮಾಕಾಂತ ಭಟ್, ವಿಶ್ವೇಶ್ವರ ಭಟ್
ಉಡುಪಿ, ಸೆ.9: ಉಡುಪಿಯ ಯಕ್ಷಗಾನ ಕಲಾರಂಗ ಪೆರ್ಲ ಕೃಷ್ಣ ಭಟ್ ಮತ್ತು ಮಟ್ಟಿ ಮುರಲೀಧರ ರಾವ್ ನೆನಪಿನಲ್ಲಿ ತಾಳಮದ್ದಲೆ ಅರ್ಥಧಾರಿ ಗಳಿಗೆ ನೀಡುವ ’ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಅನುಕ್ರಮವಾಗಿ ವಿದ್ವಾನ್ ಉಮಕಾಂತ್ ಭಟ್ ಮತ್ತು ಸುರತ್ಕಲ್ ವಾಸುದೇವ ರಾವ್ ಆಯ್ಕೆಯಾಗಿದ್ದಾರೆ.
ಉಮಾಕಾಂತ್ ಭಟ್ ಇವರು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾಗಿದ್ದು ಪ್ರಸಿದ್ಧ ಅರ್ಥಧಾರಿಯಾಗಿ ಮಾನಿತರು. ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ ಆಗಾಧ ಪುರಾಣಜ್ಞಾನ ಹೊಂದಿದವು. ಪ್ರವಚನಕಾರರಾಗಿ ಪರಿಚಿತರು.
ನಿವೃತ್ತ ಅಧ್ಯಾಪಕರಾದ ಸುರತ್ಕಲ್ ವಾಸುದೇವ ರಾವ್ ಅರ್ಥಧಾರಿಯಾಗಿ, ಯಕ್ಷಗಾನ ನಿರ್ದೇಶಕರಾಗಿ ಸಾಧನೆ ಮಾಡಿದವರು. ಮಹಿಳಾ ತಾಳಮದ್ದಲೆ ಸಂಘಟನೆಯ ಸ್ಥಾಪಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ತಲಾ 20,000 ರೂ. ನಗದನ್ನು ಒಳಗೊಂಡಿರುತ್ತದೆ.
ಕರ್ಗಲ್ಲು ವಿಶ್ವೇಶ್ವರ ಭಟ್ಗೆ ತಲ್ಲೂರು ಪ್ರಶಸ್ತಿ: ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರಿಗೆ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಆಯ್ಕೆಯಾಗಿದ್ದಾರೆ. ತೆಂಕು ತಿಟ್ಟಿನ ಕುಣಿತದ ಸೂಕ್ಷ್ಮವನ್ನು ಬಲ್ಲ, ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತನ್ನ ಶಿಷ್ಯರಿಗೆ ಧಾರೆಯೆರೆಯುತ್ತಿರುವ ಇವರದ್ದು ವಿಶೇಷ ಪ್ರತಿಭೆ. ಹನ್ನೆರಡು ವರ್ಷ ಮೇಳದ ತಿರುಗಾಟ ಮಾಡಿ 1986ರಿಂದ ಯಕ್ಷಗಾನ ಅಧ್ಯಯನ ಅಧ್ಯಾಪನಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು 40,000ರೂ. ನಗದನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭ ಪರ್ಯಾಯ ಅದಮಾರು ಮಠದ ಆಶ್ರಯ ದಲ್ಲಿ ಸೆ.26ರ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.