ದ.ಕ. ಜಿಲ್ಲೆ: ಗಣೇಶ ಚತುರ್ಥಿಯ ಸಂಭ್ರಮ
ಮಂಗಳೂರು, ಸೆ. 10: ದ.ಕ.ಜಿಲ್ಲೆಯ ಎಲ್ಲೆಡೆ ಶುಕ್ರವಾರ ಗಣೇಶ ಚತುರ್ಥಿ ಸಂಭ್ರಮ ಕಂಡು ಬಂದಿದೆ. ಸಾರ್ವಜನಿಕವಾಗಿ ಅದ್ದೂರಿಯ ಗೌರಿ ಗಣೇಶ ಹಬ್ಬಕ್ಕೆ ಅವಕಾಶವಿಲ್ಲವಾದೂ ಮನೆಗಳಲ್ಲಿ ಸಂಭ್ರಮದ ವಾತಾವರಣವಿದೆ.
ಜಿಲ್ಲಾಡಳಿತ ಸೂಚಿಸಿದ ಕೊರೋನ ನಿಯಮಾವಳಿಯಂತೆ ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶದ ಬಹುತೇಕ ದೇವಸ್ಥಾನಗಳಲ್ಲಿ ಸರಳವಾಗಿ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದೆ. ದೇವಸ್ಥಾನವಲ್ಲದೆ ಸಾರ್ವಜನಿಕ ಗಣೇಶೋತ್ಸವವು ಸಭಾಭವನ, ಭಜನಾ ಮಂದಿರದಲ್ಲಿ ನಡೆಯುತ್ತಿದೆ. ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯಿತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಕಂಡು ಬಂದಿದ್ದರು.
ಗಣೇಶ ಚತುರ್ಥಿಯ ಹಿನ್ನಲೆಯಲ್ಲಿ ಗುರುವಾರದಂತೆ ಶುಕ್ರವಾರ ಬೆಳಗ್ಗೆಯೂ ನಗರದ ಎಲ್ಲಾ ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತರಕಾರಿ, ಹೂವು, ಕಬ್ಬುವನ್ನು ಖರೀದಿಸುವ ಭರಾಟೆಯಿತ್ತು.
ಕೋವಿಡ್ ಆರ್ಥಿಕ ಸಂಕಷ್ಟವು ಜನರ ಹಬ್ಬದ ಸಂಭ್ರಮಕ್ಕೆ ತಡೆಯಾಗಲಿಲ್ಲ. ಇತಿಮಿತಿಯೊಳಗೆ ಹಬ್ಬಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.