ಅಡುಗೆ ಅನಿಲ ಬೆಲೆಯೇರಿಕೆ ವಿರುದ್ಧ ವಿಶಿಷ್ಟವಾಗಿ ಜನಜಾಗೃತಿಗೆ ಮುಂದಾದ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು, ಸೆ.11: ನಿರಂತರವಾಗಿ ಏರಿಕೆ ಕಾಣುತ್ತಿರುವ ಅಡುಗೆ ಅನಿಲ ಬೆಲೆಯ ವಿರುದ್ಧ ಜನಜಾಗೃತಿ ಮೂಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣಗಳ ಮೂಲಕ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ತಮ್ಮ ಅಡುಗೆ ಮನೆಯಿಂದಲೇ ಚಹಾ ಹೀರುತ್ತಾ, ‘ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಬೇಕಾ ? ಬೇಡ್ವಾ...?’ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಅವರು ಪ್ರಶ್ನೆ ಕೇಳಿದ್ದಾರೆ.
ಸದಾಶಿವ ನಗರದಲ್ಲಿರುವ ತಮ್ಮ ಮನೆಯ ಅಡುಗೆ ಮನೆಯಲ್ಲಿ ಈ ವಿಡಿಯೊ ಮಾಡಿರುವ ಅವರು ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ, ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ವೀಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷರ ಮಾತು ಹೀಗಿದೆ...
ನಮಸ್ಕಾರ ಸ್ನೇಹಿತರೇ... ನಾನು ಯಾಕೆ ಅಡುಗೆ ಮನೆಯಲ್ಲಿದ್ದೀನಿ ಅಂತ ನಿಮಗೆ ಆಶ್ಚರ್ಯವಾಗಬಹುದು. ನಾನು ಮಾತನಾಡುತ್ತಿರುವ ವಿಷಯ ಅಡುಗೆ ಮನೆಗೆ ಸಂಬಂಧಿಸಿದ್ದು. ಈ ವಾರ ನಾನು ಕೇಳುವ ಪ್ರಶ್ನೆ, ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆ ಆಗಿರುವುದು ಇಳಿಸಬೇಕಾ? ಬೇಡವಾ? ಎಂದು...
‘ಎಲ್ಪಿಜಿ ಸಿಲಿಂಡರ್ ಬೆಲೆ 888 ರೂಪಾಯಿಯಿಂದ ಸದ್ಯದಲ್ಲೇ 900ರಿಂದ 1000 ರೂಪಾಯಿವರೆಗೆ ಕೂಡಾ ತಲುಪಬಹುದು. ರಾಜ್ಯದ ಜನತೆಗೆ ಎಂಥ ಸಂಕಷ್ಟ ನೋಡಿ... ಕೋವಿಡ್ನಿಂದಾಗಿ ಜನ ಸಾಯುತ್ತಿದ್ದಾರೆ. ಕೆಲಸ ಕಳ್ಕೊಳ್ಳುತ್ತಿದ್ದಾರೆ. ಆದರೆ, ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ.‘ರಾಜ್ಯದ ನಾನಾ ಭಾಗಗಳಲ್ಲಿ ನಾನು ತಿರುಗಾಡಿ ಬಂದಿದ್ದೇನೆ. ಬಡವರು, ಮಧ್ಯಮ ವರ್ಗದವರು, ಶ್ರೀಮಂತರನ್ನು ಎಲ್ಲರನ್ನೂ ನಾನು ಭೇಟಿಯಾಗಿ ಬಂದಿದ್ದೇನೆ. ಎಲ್ಲರೂ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದಾರೆ.
ಬಡ ಕುಟುಂಬದವರ ಮುಂದೆ ಸದ್ಯಕ್ಕೆ ಇರುವ ಆಯ್ಕೆ ಎರಡೇ. ಒಂದೋ ಮಕ್ಕಳ ಶಾಲೆಯ ಫೀಸ್ ಕಟ್ಟಬೇಕಾ ಅಥವಾ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾ... ಪೋಷಕರು ಉದ್ಯೋಗ ಕಳೆದುಕೊಂಡ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿದ್ದಾರೆ. ನಿರುದ್ಯೋಗದಿಂದ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ನ್ಯಾಯನಾ ಇಲ್ಲವಾ ಅನ್ನೋದನ್ನು ತಾವೇ ತೀರ್ಮಾನ ಮಾಡಬೇಕು.
ಗ್ಯಾಸ್ ಸಿಲಿಂಡರ್ಗೆ ಹಣ ಇಲ್ಲದೆ ಎಷ್ಟೋ ಕುಟುಂಬಗಳು ಸೌದೆ ಒಲೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ನನ್ನ ಬೇಡಿಕೆ ಒಂದೇ ಒಂದು... ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಕನಿಷ್ಠ 150 ರೂಪಾಯಿಯಾದರು ಕೂಡಾ ಇಳಿಕೆ ಆಗಬೇಕಲ್ಲವೇ. ನಿಮ್ಮ ಅಭಿಪ್ರಾಯವನ್ನು ಫೇಸ್ಬುಕ್, ಟ್ವಿಟರ್, ಇನ್ಟಾಗ್ರಾಂ ಮೂಲಕ ಮೂಲಕ ತಿಳಿಸಿ. ನಾನು ನಿಮ್ಮ ಉತ್ತರವನ್ನು ನಿರೀಕ್ಷೆ ಮಾಡುತ್ತೇನೆ’
Are you ready for this week's question?
— DK Shivakumar (@DKShivakumar) September 11, 2021
ಪ್ರಿಯ ಸ್ನೇಹಿತರೇ, ವಿಶೇಷವಾಗಿ ತಾಯಂದ್ರೇ, ಅಕ್ಕ-ತಂಗಿಯರೇ ಈ ವಾರ ಗಂಭೀರವಾದ ಪ್ರಶ್ನೆಯೊಂದನ್ನ ನಿಮ್ ಮುಂದೆ ಇಡ್ತಿದ್ದೀನಿ. #OnduPrashne pic.twitter.com/yv5IyeD0mq