ಮಾರಣಕಟ್ಟೆ ಬಳಿ 11ನೇ ಶತಮಾನದ ಉಮಾಮಹೇಶ್ವರ ಶಿಲ್ಪ ಪತ್ತೆ

ಉಡುಪಿ, ಸೆ.11: ಜಿಲ್ಲೆಯ ಬೈಂದೂರು ತಾಲೂಕಿನ ಮಾರಣಕಟ್ಟೆಯ ಸಂನ್ಯಾಸಿಬೆಟ್ಟಿನಲ್ಲಿ ಅತ್ಯಂತ ಕಲಾತ್ಮಕವಾದ ಉಮಾಮಹೇಶ್ವರ ಶಿಲ್ಪ ಪತ್ತೆಯಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇವಲ 9 ಸೆ.ಮೀ. ಎತ್ತರ, 9 ಸೆ.ಮೀ. ಉದ್ದ ಮತ್ತು 4 ಸೆ.ಮೀ. ಅಗಲ ವಾಗಿರುವ ಈ ಕಿರು ಶಿಲ್ಪ, ತನ್ನ ಕಲಾತ್ಮಕತೆಯಿಂದ ನೋಡುಗರ ಕಣ್ಮನ ಸೆಳೆಯುತ್ತದೆ. ‘ಉಮಯಾ ಸಹ ದೇವೇಶ ನಂದಿವಾಹನ ಮೇವಚ’ ಎಂಬ ಉಕ್ತಿಯಂತೆ, ಉಮೆಯ ಸಂಗಡ ಮಹೇಶ್ವರ ನಂದಿವಾಹನದ ಮೇಲೆ ತನ್ನ ಎಲ್ಲಾ ಗಣಗಳ ಸಹಿತ ಸವಾರಿ ಮಾಡುವಂತೆ ಶಿಲ್ಪದಲ್ಲಿ ಚಿತ್ರಿಸಲಾಗಿದೆ. ಗಣಪತಿ, ವೀರಭದ್ರ, ಭೃಂಗಿ ಶಿಲ್ಪಗಳನ್ನು ಸಹ ಇಲ್ಲಿ ಗುರುತಿಸಬಹುದಾಗಿದೆ. ಉಳಿದ ಶಿಲ್ಪಗಳು ಸವೆದು ಹೋಗಿರುವುದರಿಂ ಗುರುತಿಸಲು ಸಾದ್ಯವಾಗುವುದಿಲ್ಲ.
ನಂದಿವಾಹನ ಶಿವ ತನ್ನ ಮುಂದಿನ ಎರಡೂ ಕೈಗಳಲ್ಲಿ ನಂದಿಯ ಕಿವಿಗಳನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಆತನ ಹಿಂಬಂದಿಯ ಬಲಗೈಯಲ್ಲಿ ಮೃಗವನ್ನು ಲಾಂಛನವಾಗಿ ಹಿಡಿದಿದ್ದಾನೆ. ಎಡಗೈ ಮುರಿದು ಹೋಗಿದೆ. ಆತನ ಹಿಂಭಾಗ ದಲ್ಲಿ ಕುಳಿತ ಉಮೆ, ಶಿವನ ಎರಡೂ ಭುಜಗಳನ್ನು ಹಿಡಿದುಕೊಂಡಿರುವಂತೆ ಚಿತ್ರಿಸಲಾಗಿದೆ. ಆದರೆ, ದುರಾದೃಷ್ಟವಶಾತ್ ಉಮೆಯ ಸೊಂಟದ ಮೇಲ್ಭಾಗ ತುಂಡಾಗಿ ಹೋಗಿದೆ.
ಉಮಾಮಹೇಶ್ವರ ಪಂಥವನ್ನು ಸೋಮಪಂಥ ಅಥವಾ ಸೋಮೇಶ್ವರ ಪಂಥವೆಂದು ಕರೆಯಲಾಗುತ್ತದೆ. ಈ ಪಂಥ ಗುಜರಾತಿನಲ್ಲಿ ಸೋಮ ಅಥವಾ ಸೋಮಶರ್ಮ ಎಂಬಾತನಿಂದ ಜನ್ಮತಾಳಿ ದೇಶದಾದ್ಯಂತ ಅತ್ಯಲ್ಪ ಕಾಲದಲ್ಲಿ ಪ್ರಸಿದ್ಧ ಪಂಥವಾಗಿ ಬೆಳವಣಿಗೆ ಹೊಂದಿತು. ತುಳುನಾಡಿನ ಹಲವು ಕಡೆ ಸೋಮನಾಥ ದೇವಾಲಯ/ಉಮಾಮಹೇಶ್ವರ ದೇವಾಲಯಗಳಿವೆ. ಸುಮಾರು 11ನೇ ಶತಮಾನದಲ್ಲಿ ಈ ಪಂಥ ದಕ್ಷಿಣ ಭಾರತದಲ್ಲಿ ಜನಪ್ರಿಯ ಪಂಥವಾಗಿತ್ತು. ಈ ಶಿಲ್ಪವೂ ಸಹ 11ನೇ ಶತಾನದ ಶಿಲ್ಪಶೈಲಿಯಲ್ಲಿ ರಚಿತ ವಾಗಿದೆ.
ಈ ವಿಗ್ರಹದ ಅಧ್ಯಯನದಲ್ಲಿ ಮಾರಣಕಟ್ಟೆಯ ಶಂಕರ ಭಟ್, ಮಂಜುನಾಥ ಭಟ್, ಮುರುಳಿಧರ ಹೆಗಡೆ ಹಾಗೂ ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳು ನೆರವು ನೀಡಿದ್ದಾರೆ ಎಂದು ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.







