ಐದನೇ ಟೆಸ್ಟ್ ರದ್ದಾಗಿದ್ದಕ್ಕೆ ಐಪಿಎಲ್ ಕಾರಣವಲ್ಲ ಎಂದ ಸೌರವ್ ಗಂಗುಲಿ
ಹೊಸದಿಲ್ಲಿ: ಕೋವಿಡ್ -19 ಕಳವಳದಿಂದಾಗಿ ನಮ್ಮ ಆಟಗಾರರು ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಅಂತಿಮ ಟೆಸ್ಟ್ ಆಡಲು ನಿರಾಕರಿಸಿದರು ಹಾಗೂ ಈ ನಿರ್ಧಾರದ ಹಿಂದೆ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಾರಣವಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಸ್ಪಷ್ಟಪಡಿಸಿದರು.
ಓಲ್ಡ್ ಟ್ರಾಫರ್ಡ್ ನಲ್ಲಿ ಕಳೆದ ಶುಕ್ರವಾರ ನಿಗದಿತ ಆರಂಭಕ್ಕೆ ಕೇವಲ ಎರಡು ಗಂಟೆಗಳ ಮೊದಲು 5ನೇ ಟೆಸ್ಟ್ ಪಂದ್ಯ ರದ್ದುಗೊಂಡಿತು. ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದ್ದ ಪ್ರವಾಸಿಗರು ತಮ್ಮ ಫಿಸಿಯೋಥೆರಪಿಸ್ಟ್ ಕೋವಿಡ್ -19 ಗೆ ಪಾಸಿಟಿವ್ ಆದ ನಂತರ ತಂಡವನ್ನು ಕಣಕ್ಕಿಳಿಸಲು ವಿಫಲವಾದರು.
"ಆಟಗಾರರು ಆಡಲು ನಿರಾಕರಿಸಿದರು. ಆದರೆ ನೀವು ಅವರನ್ನು ದೂಷಿಸಲು ಸಾಧ್ಯವಿಲ್ಲ. ಫಿಸಿಯೋ ಯೋಗೀಶ್ ಪರ್ಮಾರ್ ಅವರು ಆಟಗಾರರ ನಿಕಟ ಸಂಪರ್ಕ ಹೊಂದಿದ್ದರು ... ಅವರು ಆಟಗಾರರೊಂದಿಗೆ ಮುಕ್ತವಾಗಿ ಬೆರೆತು ಅವರ ಕೋವಿಡ್ -19 ಪರೀಕ್ಷೆಗಳನ್ನು ಕೂಡ ನಡೆಸಿದ್ದಾರೆ. ಅವರು ಆಟಗಾರರಿಗೆ ಮಸಾಜ್ ಮಾಡುತ್ತಿದ್ದರು. ಅವರು ಆಟಗಾರರ ದೈನಂದಿನ ಜೀವನದ ಭಾಗವಾಗಿದ್ದರು’’ ಎಂದು The Telegraph ಸುದ್ದಿಪತ್ರಿಕೆಗೆ ಗಂಗುಲಿ ತಿಳಿಸಿದರು.