ಅಫ್ಘಾನ್ ಬಿಕ್ಕಟ್ಟು ಪ್ರಾದೇಶಿಕ ಸ್ಥಿರತೆಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಬಲ್ಲದು: ವಿದೇಶಾಂಗ ಸಚಿವ ಎಸ್.ಜೈಶಂಕರ್

ಹೊಸದಿಲ್ಲಿ,ಸೆ.13: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಭಾರತವು ಅಲ್ಲಿಯ ಬೆಳವಣಿಗೆಗಳನ್ನು ‘ಅರ್ಥೈಸಿಕೊಳ್ಳಬಲ್ಲ ಕಳವಳ’ದೊಂದಿಗೆ ಗಮನಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು ಸೋಮವಾರ ಹೇಳಿದರು. ಯುದ್ಧಸಂತ್ರಸ್ತ ಅಫ್ಘಾನಿಸ್ತಾನವೀಗ ನಿರ್ಣಾಯಕವಾದ ಮತ್ತು ಸವಾಲಿನ ಹಂತದಲ್ಲಿ ಸಾಗುತ್ತಿದೆ ಎಂದ ಅವರು,ಅಲ್ಲಿ ಬಡತನ ಮಟ್ಟವು ಸದ್ಯವೇ ಹೆಚ್ಚುವ ಭೀತಿಯಿದೆ ಮತ್ತು ಇದು ಪ್ರಾದೇಶಿಕ ಸ್ಥಿರತೆಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಬಲ್ಲದು ಎಂದರು.
ಅಫ್ಘಾನಿಸ್ತಾನದಲ್ಲಿಯ ಮಾನವೀಯ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆಯ ಉನ್ನತಮಟ್ಟದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,ಆ ದೇಶದ ರಾಜಕೀಯ,ಆರ್ಥಿಕ,ಸಾಮಾಜಿಕ ಮತ್ತು ಭದ್ರತಾ ಸ್ಥಿತಿಗಳಲ್ಲಿ ಸಾಗರದೋಪಾದಿ ಬದಲಾವಣೆಯಾಗಿದೆ ಮತ್ತು ಪರಿಣಾಮವಾಗಿ ಅದರ ಮಾನವಿಯ ಅಗತ್ಯಗಳೂ ಬದಲಾಗಿವೆ ಎಂದು ಹೇಳಿದರು.
ಅಫ್ಘಾನಿಸ್ತಾನದಲ್ಲಿ ಬಡತನ ಮಟ್ಟ ಶೇ.72ರಿಂದ ಶೇ.97ಕ್ಕೆ ಹೆಚ್ಚುವ ಭೀತಿ ಸನ್ನಿಹಿತವಾಗಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು ಇತ್ತೀಚಿಗೆ ಆತಂಕ ವ್ಯಕ್ತಪಡಿಸಿದೆ ಎಂದರು.
ಅಫ್ಘಾನಿಸ್ತಾನದೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಹೊಂದಿರುವ ಭಾರತವು ಹಿಂದೆ ಮಾಡಿರುವಂತೆ ಈಗಲೂ ಅಫ್ಘಾನ್ ಜನರ ಬೆಂಬಲಕ್ಕೆ ನಿಲ್ಲಲು ಸಿದ್ಧವಾಗಿದೆ ಎಂದು ಹೇಳಿದ ಜೈಶಂಕರ್,ಆ ದೇಶದಲ್ಲಿ ಸಾಧ್ಯವಿರುವ ಅತ್ಯುತ್ತಮ ಪೂರಕ ವಾತಾವರಣವನ್ನು ಸೃಷ್ಟಿಸಲು ನೆರವಾಗುವಂತೆ ಜಾಗತಿಕ ಸಮುದಾಯಕ್ಕೆ ಕರೆ ನೀಡಿದರು.
ಈ ವಾರಾಂತ್ಯದಲ್ಲಿ ತಝಿಕಿಸ್ತಾನದಲ್ಲಿ ಅಫ್ಘಾನಿಸ್ತಾನ ಕುರಿತು ಮಹತ್ವದ ಸಭೆಯಲ್ಲಿ ಭಾಗವಹಿಸಲಿರುವ ಜೈಶಂಕರ,ಯುದ್ಧಸಂತ್ರಸ್ತ ದೇಶದಲ್ಲಿಯ ಸ್ಥಿತಿಯ ಕುರಿತು ಇರಾನ ಸೇರಿದಂತೆ ಹಲವಾರು ದೇಶಗಳ ವಿದೇಶಾಂಗ ಸಚಿವರ ಜೊತೆ ಮಾತುಕತೆಗಳನ್ನು ನಡೆಸಲಿದ್ದಾರೆ.
ವಿಶ್ವಸಂಸ್ಥೆಯಿಂದ 20 ಕೋ.ಡಾ.ನೆರವಿನ ಘೋಷಣೆ
ಅಫ್ಘಾನಿಸ್ತಾನದಲ್ಲಿ ಮಾನವೀಯ ಕಾರ್ಯಾಚರಣೆಗೆ ನೆರವಾಗಲು 20 ಕೋ.ಡಾ.ಗಳನ್ನು ಮೀಸಲಿಡುವುದಾಗಿ ಸೋಮವಾರ ಘೋಷಿಸಿದ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು,ಆ ದೇಶದಲ್ಲಿಯ ‘ವಸ್ತುತ’ಅಧಿಕಾರಿಗಳು ಜನತೆಗೆ ನೆರವು ತಲುಪುವಂತಾಗುವಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಜಿನಿವಾದಲ್ಲಿ ಅಫ್ಘಾನಿಸ್ತಾನದಲ್ಲಿಯ ಮಾನವೀಯ ಸ್ಥಿತಿ ಕುರಿತು ಸಭೆಯಲ್ಲಿ ಮಾತನಾಡಿದ ಅವರು,ಅಫ್ಘಾನಿಸ್ತಾನದ ಜನತೆಗೆ ಜೀವಾಧಾರದ ಅಗತ್ಯವಿದೆ. ದಶಕಗಳ ಯುದ್ಧ,ಸಂಕಷ್ಟ ಮತ್ತು ಅಭದ್ರತೆಯ ಬಳಿಕ ಅವರು ಬಹುಶಃ ಅತ್ಯಂತ ಅಪಾಯಕಾರಿ ಕ್ಷಣಗಳನ್ನು ಎದುರಿಸುತ್ತಿದ್ದಾರೆ. ಇದು ಜಾಗತಿಕ ಸಮುದಾಯವು ಅವರ ಬೆಂಬಲಕ್ಕೆ ನಿಲ್ಲಬೇಕಾದ ಸಮಯವಾಗಿದೆ ಎಂದರು.







